ದಾವಣಗೆರೆ ಮಹಾನಗರ ಪಾಲಿಕೆ ಉಪ ಚುನಾವಣೆ! ರಾಜಕೀಯ ಭವಿಷ್ಯದ ಕಣದಲ್ಲಿ 8 ಅಭ್ಯರ್ಥಿಗಳು!

ದಾವಣಗೆರೆ: ನಗರದ ಎರಡು ವಾರ್ಡ್ಗಳಲ್ಲಿ ನಡೆಯಲಿರುವ ಮಹಾನಗರ ಪಾಲಿಕೆ ಉಪಚುನಾವಣೆ ಅಂತಿಮ ಕಣದಲ್ಲಿ 8 ಮಂದಿ ಉಳಿದಿದ್ದಾರೆ. ಮೇ. 20ರಂದು ದಾವಣಗೆರೆ ಮಹಾನಗರ ಪಾಲಿಕೆ ಉಪಚುನಾವಣೆ ನಿಗದಿಯಾಗಿದ್ದು, ಪಾಲಿಕೆ ವ್ಯಾಪ್ತಿಯ 2 ವಾರ್ಡುಗಳಿಂದ 8 ಮಂದಿ ಉಳಿದಿದ್ದು ತಮ್ಮ ರಾಜಕೀಯ ಭವಿಷ್ಯ ಘಟ್ಟಿಗೊಳಿಸಲು ಇನ್ನಿಲ್ಲದ ಕಸರತ್ತು ನಡೆಸಲಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ (ಇಂದು) ಗುರುವಾರ ಓರ್ವ ಪಕ್ಷೇತರ ಅಭ್ಯರ್ಥಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಅಂತಿಮವಾಗಿ ಎರಡೂ ವಾರ್ಡುಗಳಲ್ಲಿ 8 ಮಂದಿ ಆಯ್ಕೆ ಬಯಸಿ ರಾಜಕೀಯ ಭವಿಷ್ಯದ ಪೈಪೋಟಿಗಾಗಿ ಮುನ್ನುಡಿ ಬರೆದಿದ್ದಾರೆ.
ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಿರುವ 37ನೇ ವಾರ್ಡಿನಿಂದ ಆಯ್ಕೆ ಬಯಸಿದ್ದ ಕಾಂಗ್ರೆಸ್ ಅಭ್ಯರ್ಥಿ ರೇಖಾರಾಣಿ ಸಿದ್ದಗಂಗಾ ಶಿವಣ್ಣ ಮತ್ತು ಬಿಜೆಪಿ ಅಭ್ಯರ್ಥಿ ಶ್ವೇತಾ ಜೆ.ಎನ್. ಶ್ರೀನಿವಾಸ್ ಅಂತಿಮ ಕಣದಲ್ಲಿದ್ದು ಇವರ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಇನ್ನು ಸಾಮಾನ್ಯ ವರ್ಗದ ಪುರುಷರ ವರ್ಗಕ್ಕೆ ಮೀಸಲಾಗಿರುವ 28ನೇ ವಾರ್ಡಿನಿಂದ ಆಯ್ಕೆ ಬಯಸಿದ್ದ 7 ಮಂದಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಓರ್ವ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದು, ಅಂತಿಮವಾಗಿ ಉತ್ತಮ ಪ್ರಜಾಕೀಯ ಪಕ್ಷದಿಂದ ಬಿ. ಚಂದ್ರಶೇಖರ್, ಬಿಜೆಪಿಯಿಂದ ಜೆ.ಎನ್. ಶ್ರೀನಿವಾಸ್ ಮತ್ತು ಕಾಂಗ್ರೆಸ್ನಿ0ದ ಎಚ್. ಗಣೇಶ್ ಹುಲ್ಮನಿ, ಪಕ್ಷೇತರ ಅಭ್ಯರ್ಥಿಗಳಾಗಿ ಎನ್.ಎಸ್. ಅಭಿಷೇಕ್, ಸೈಯದ್ ಮನ್ಸೂರ್, ಜನತಾದಳದಿಂದ ಮೊಹಮದ್ ಸಮೀವುಲ್ಲಾ ಟ್ರಾಕ್ಟರ್ ಇವರುಗಳು ಅಂತಿಮ ಕಣದಲ್ಲಿದ್ದಾರೆ.