Davanagere: ದಾವಣಗೆರೆಗೆ ಮುಖ್ಯಮಂತ್ರಿಗಳ ಪ್ರವಾಸ, ರೂ.1,356 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

IMG-20250615-WA0018
ದಾವಣಗೆರೆ (Davanagere):  ದಾವಣಗೆರೆ ಜಿಲ್ಲೆಯಲ್ಲಿನ ವಿವಿಧ ಅಭಿವೃದ್ದಿ ಕಾಮಗಾರಿಗಳು ಸೇರಿದಂತೆ ಸೌಲಭ್ಯಗಳನ್ನು ವಿತರಣೆಗೆ ಜೂನ್ 16 ರಂದು ದಾವಣಗೆರೆಗೆ ಮುಖ್ಯಮಂತ್ರಿಯವರು ಆಗಮಿಸುತ್ತಿದ್ದು ಹೈಸ್ಕೂಲ್ ಮೈದಾನದಲ್ಲಿನ ಬೃಹತ್ ವೇದಿಕೆ ಸಿದ್ದತೆ ಭರದಿಂದ ಸಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
  ನಗರದ ಹೈಸ್ಕೂಲ್ ಮೈದಾನದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಳನ್ನು ವೀಕ್ಷಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಮಾತನಾಡಿದರು. ಜೂನ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಾ; ಶಾಮನೂರು ಶಿವಶಂಕರಪ್ಪನವರ 95ನೇ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಮತ್ತು ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ಶ್ರೀ ಕಲ್ಲೇಶ್ವರ ಇಂಡಸ್ಟ್ರೀಸ್ ಆವರಣದಲ್ಲಿನ ಆಧುನಿಕ ತಂತ್ರಜ್ಞಾನದ ತೊಗರಿಬೇಳೆ ಹಾಗೂ ಕಡ್ಲೇಬೇಳೆ ಮಿಲ್ ಉದ್ಘಾಟಿಸಿ ನಂತರ 12.30ಕ್ಕೆ ಹೈಸ್ಕೂಲ್ ಮೈದಾನ ತಲುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿರುವ ದಾವಣಗೆರ ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಕಾರ್ಯಕ್ರಮದಲ್ಲಿ 25 ಸಾವಿರಕ್ಕಿಂತ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಫಲಾನುಭವಿಗಳು ಮತ್ತು ಜನರು ಆಗಮಿಸಲು ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಮತ್ತು ಸಾರ್ವಜನಿಕರು ಸಹ ಸ್ವಯಂಪ್ರೇರಿತರಾಗಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.
ವಸ್ತು ಪ್ರದರ್ಶನ:
ಸರ್ಕಾರದ ವಿವಿಧ ಇಲಾಖೆಗಳಿಂದ 30ಕ್ಕೂ ಹೆಚ್ಚು ಮಳಿಗೆ ಸ್ಥಾಪಿಸಿ ಗ್ಯಾರಂಟಿ ಯೋಜನೆ, ಇನ್ನಿತರೆ ಇಲಾಖೆಗಳ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ವಸ್ತುಪ್ರದರ್ಶನ ಇರಲಿದೆ. ಪ್ರಮುಖವಾಗಿ ಕೃಷಿ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಸ್ವ-ಸಹಾಯ ಸಂಘದ ವತಿಯಿಂದ ಉತ್ಪಾದಿಸಲಾದ ಕರಕುಶಲ ವಸ್ತುಗಳು, ಜವಳಿ ಮತ್ತು ಕೈಮಗ್ಗ ಇಲಾಖೆ, ಜಿಲ್ಲಾ ಪಂಚಾಯತ್ ಸೇರಿದಂತೆ ಅನೇಕ ಇಲಾಖೆಗಳು ಭಾಗವಹಿಸಲಿವೆ.
ವಿವಿಧ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಸೌಲಭ್ಯ:
ಕಾರ್ಯಕ್ರಮದಲ್ಲಿ ಜಿಲ್ಲೆಯ ಫಲಾನುಭವಿಗಳಿಗೆ ವಿವಿಧ ಇಲಾಖೆ ವತಿಯಿಂದ ಸೌಲಭ್ಯ, ಯಂತ್ರೋಪಕರಣಗಳನ್ನು ವಿತರಿಸಲಿದ್ದಾರೆ. ಕೃಷಿ ಇಲಾಖೆ ವತಿಯಿಂದ  420ಕ್ಕೂ ಹೆಚ್ಚು ಜನರಿಗೆ ರೂ.1.51ಕೋಟಿ ವೆಚ್ಚದ ಯಂತ್ರೋಪಕರಣ, ತೋಟಗಾರಿಕೆ ಇಲಾಖೆಯಿಂದ 650ಕ್ಕೂ ಹೆಚ್ಚು ಜನತೆಗೆ ರೂ.2 ಕೋಟಿ ವೆಚ್ಚದ ಯಂತ್ರೋಪಕರಣ ಹಾಗೂ ರೂ.5.4 ಕೋಟಿ ಮೊತ್ತದ ಹನಿ ನೀರವಾರಿ ಸಹಾಯಧನ, ವಿವಿಧ ಅಭಿವೃದ್ಧಿ ನಿಗಮಗಳಿಂದ ಸಾರಥಿ ಯೋಜನೆಯಡಿ 2 ಟ್ಯಾಕ್ಸಿ, 2 ಆಟೋ, 15 ಕಾರ್ ವಿತರಣೆ ಮಾಡಲಾಗುವುದು. ಹಾಗೆಯೇ ಕಾರ್ಮಿಕ ಇಲಾಖೆ ವತಿಯಿಂದ 1 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಕಿಟ್ ವಿತರಣೆ, ಗ್ರಾಮೀಣ ಕೈಗಾರಿಕೆ ವತಿಯಿಂದ 50ಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ಯಂತ್ರ, ವೆಲ್ಡಿಂಗ್ ಕಿಟ್, 16 ತ್ರಿ ಚಕ್ರ ವಾಹನ ಮತ್ತು 11 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ವಿವಿಧ ಹಕ್ಕು ಪತ್ರ ವಿತರಣೆ ಸೇರಿದಂತೆ ಜಲಸಿರಿಯಡಿ ದಾವಣಗೆರೆ ನಗರದ 24*7 ಕುಡಿಯುವ ನೀರು ಯೋಜನೆಗೆ ಚಾಲನೆ ಸೇರಿದಂತೆ ರೂ.1356 ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನಡೆಯಲಿದೆ ಎಂದರು.
ಹತ್ತು ಸಾವಿರಕ್ಕೂ ಅಧಿಕ ಆಸನ ವ್ಯವಸ್ಥೆ:
ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ಗ್ರಾಮ ಪಂಚಾಯತಿವಾರು ಫಲಾನುಭವಿಗಳು, ಸಾರ್ವಜನಿಕರು ಆಗಮಿಸುತ್ತಿದ್ದು, ಮಳೆ ಬಂದರೂ ಸೋರದಂತೆ ಬೃಹತ್ ಜರ್ಮನ್ ಟೆಂಟ್ ನಿರ್ಮಿಸಲಾಗಿದೆ. ವೇದಿಕೆಯು 42/100 ರಲ್ಲಿ ನಿರ್ಮಿಸಲಾಗಿದೆ. ಅಲ್ಲಲ್ಲಿ ಜನರಿಗೆ ಕಾಣುವಂತೆ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಸಮಾರಂಭಕ್ಕೆ ಸುಮಾರು 25 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದ್ದು, ಹತ್ತು ಸಾವಿರಕ್ಕೂ ಅಧಿಕ ಫಲಾನುಭವಗಳಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಫಲಾನುಭವಿಗಳಿಗೆ ಊಟದ ವ್ಯವಸ್ಥೆಯನ್ನು ಕೂಡ ಆಯೋಜಿಸಲಾಗಿದೆ.
ಬಸ್ ವ್ಯವಸ್ಥೆ:
ಫಲಾನುಭವಿಗಳನ್ನು ಕರೆತರಲು ಪ್ರತಿ ಗ್ರಾಮ ಪಂಚಾಯತಿವಾರು ವಾಹನ ವ್ಯವಸ್ಥೆ ಮಾಡಲಾಗಿದೆ.  ಇದರ ಸಂಪೂರ್ಣ ವ್ಯವಸ್ಥೆ ಜವಾಬ್ದಾರಿಯನ್ನು ಆಯಾ ಗ್ರಾ.ಪಂ. ಪಿಡಿಓ, ಅಂಗನವಾಡಿ ಕಾರ್ಯಕರ್ತೆ ಮತ್ತು ಗ್ರಾಮ ಆಡಳಿತಾಧಿಕಾರಿಗಳಿಗೆ ವಹಿಸಲಾಗಿದೆ. ನಗರದ ನಾಲ್ಕು ದಿಕ್ಕುಗಳಿಂದಲೂ ಜನರನ್ನು ಹೈಸ್ಕೂಲ್ ಮೈದಾನದ ವೇದಿಕೆ ಹತ್ತಿರ ಕರೆತರಲು ನಗರದ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೆಎಸ್‍ಆರ್‍ಟಿಸಿ ನಗರ ಸಾರಿಗೆ ಬಸ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಈ ವಾಹನಗಳಲ್ಲಿ ಬರಬಹುದಾಗಿದೆ.
ಬಿಗಿ ಬಂದೋಬಸ್ತ್:
ಮುಖ್ಯ ಮಂತ್ರಿಗಳ ಕಾರ್ಯಕ್ರಮದ ಬಂದೋಬಸ್ತ್‍ಗಾಗಿ 2 ಸಾವಿರಕ್ಕೂ ಅಧಿಕ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಗಳು ಸಹ ಸೇರಿದ್ದಾರೆ. ಅಲ್ಲದೇ ಕೆಎಸ್‍ಆರ್‍ಪಿ ತುಕಡಿ, ಡಿಎಆರ್ ಮತ್ತು ಕ್ಷಿಪ್ರ ಕಾರ್ಯಪಡೆಯೂ ಇರುತ್ತವೆ.
ವ್ಯವಸ್ಥಿತ ನಿಲುಗಡೆ ತಾಣ: ಕಾರ್ಯಕ್ರಮಕ್ಕೆ ಬರುವವರಿಗೆ ಆಯಾ ಮಾರ್ಗದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ದ್ವಿ-ಚಕ್ರ ವಾಹನಗಳಲ್ಲಿ ಬರುವವರಿಗೆ ಹೈಸ್ಕೂಲ್ ಮೈದಾನದ ಬೀರಲಿಂಗೇಶ್ವರ ದೇವಸ್ಥಾನದ ಹತ್ತಿರ, ಲಘುವಾಹನಗಳಲ್ಲಿ ಬರುವವರಿಗೆ ರೇಣುಕಾ ಮಂದಿರದ ಮೈದಾನ ಹಾಗೂ ಇನ್ನಿತರೆ ಮಾರ್ಗಗಳಿಂದ ಬರುವ ವಿವಿಧ ರೀತಿಯ ವಾಹನಗಳಿಗೆ ಆಯಾ ದಿಕ್ಕಿನಿಂದ ಬರುವ ಕಡೆ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಆಗಮಿಸುವ ಸಾರ್ವಜನಿಕರಿಗೆ ಸಿಬ್ಬಂದಿಯಿಂದ ಸೂಕ್ತ ಮಾರ್ಗದರ್ಶನ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಎಸ್ಪಿ ಉಮಾಪ್ರಶಾಂತ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳು

error: Content is protected !!