ದಾವಣಗೆರೆ- ಚಿತ್ರದುರ್ಗದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ನಲ್ಲಿ ಯಾವ ಗಂಡಸರು ಇರಲಿಲ್ಲವೇ.!? ಸಚಿವ ಭೈರತಿ ಬಸವರಾಜ್ ವ್ಯಂಗ್ಯ

bairathy basavaraj on mlc candidate

ದಾವಣಗೆರೆ: ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ನವರು ಬೆಂಗಳೂರಿನಿಂದ ಅಭ್ಯರ್ಥಿಯನ್ನು ಕರೆತಂದಿದ್ದಾರೆ. ದಾವಣಗೆರೆ- ಚಿತ್ರದುರ್ಗದಿಂದ ಯಾವ ಗಂಡಸರು ಇರಲಿಲ್ಲವೇ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ವ್ಯಂಗ್ಯವಾಡಿದ್ದಾರೆ.

ಪಿ ಬಿ ರಸ್ತೆಯಲ್ಲಿರುವ ಜಿಎಂಐಟಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಚಿತ್ರದುರ್ಗ ವಿಪ ಚುನಾವಣೆಗೆ ಸ್ಪರ್ಧಿಸಲು ಬೆಂಗಳೂರಿನಿಂದ ಅಭ್ಯರ್ಥಿಯನ್ನು ಕರೆತರಲಾಗಿದೆ. ಸ್ಥಳೀಯವಾಗಿ ಸ್ಪರ್ಧಿಸಲು ಯಾವ ಗಂಡಸರು ಸಿಗಲಿಲ್ಲವಾ ಎಂದು ಲೇವಡಿ ಮಾಡಿದರು.

ಪ್ರಧಾನ ಮೋದಿ ಅವರು ಗ್ರಾಮ ಪಂಚಾಯಿತಿ ಸದೃಢಗೊಳಿಸಲು ೩೦-೮೦ ಲಕ್ಷದವರೆಗೆ ಅನುದಾನ ಹೆಚ್ಚಳ ಮಾಡಿದ್ದಾರೆ. ಗ್ರಾಪಂ ಅಧ್ಯಕ್ಷರಿಗೆ ಚೆಕ್‌ಗೆ ಸಹಿ ಮಾಡುವ ಅಧಿಕಾರ ನೀಡಿದ್ದು ನಮ್ಮ ಮೋದಿ ಅವರು ಪ್ರಧಾನಿ ಆದ ನಂತರ. ಅಲ್ಲದೇ, ಗ್ರಾಪಂ ಸದಸ್ಯರಿಗೆ ೨೫೦ ರು., ಇದ್ದ ಗೌರವ ಧನವನ್ನು ೧,೦೦೦ ಕ್ಕೆ ಹೆಚ್ಚಳ ಮಾಡಿದ್ದಾರೆ. ಈಗ ತಾವು ೩ಸಾವಿರಕ್ಕೆ ಹೆಚ್ಚಳ ಮಾಡುವಂತೆ ವಿಧಾನಸಭೆ ಅಧೀವೇಶನದಲ್ಲಿ ಪ್ರಸ್ತಾವಿಸುವುದಾಗಿ ಹೇಳಿದರು.

ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಕೆ.ಎಸ್. ನವೀನ್ ಅವರೊಬ್ಬ ನಿಷ್ಠಾವಂತ, ಸೌಜನ್ಯಶೀಲ ವ್ಯಕ್ತಿಯಾಗಿದ್ದು, ಕಳೆದ ಎರಡು ಬಾರಿ ಸ್ಪರ್ಧಿಸಿದಾಗ ಕಡಿಮೆ ಅಂತರದಿಂದ ಪರಾಜಿತಗೊಂಡಿದ್ದರು. ಆದರೆ, ಈ ಬಾರಿ ಬಿಜೆಪಿ ಕಡೆಗೆ ಹೆಚ್ಚಿನ ಒಲವು ಇರುವುದರಿಂದ ನವೀನ್ ಅವರು ಗೆಲ್ಲುವುದು ಶೇ.೧೦೦ ರಷ್ಟು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ೧,೫೧೨ ಚುನಾಯಿತ ಪ್ರತಿನಿಧಿಗಳಿದ್ದು, ಅವರೆಲ್ಲರೂ ನಮ್ಮ ಅಭ್ಯರ್ಥಿಗೆ ಮತನೀಡುತ್ತಾರೆಂಬ ವಿಶ್ವಾಸವಿದೆ. ದಾವಣಗೆರೆ-ಚಿತ್ರದುರ್ಗದಿಂದ ಒಟ್ಟಾರೆ ೩ ಸಾವಿರಕ್ಕೂ ಅಧಿಕ ಮತಗಳಿಂದ ನವೀನ್ ಅವರು ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!