Video: ಸಿದ್ದರಾಮಯ್ಯ ಜನ್ಮದಿನಕ್ಕೆ ಜಿಂಕೆ ಮಾಂಸದ ಊಟ ನಡೆದಿತ್ತಾ..? ಸಂಸದ ಜಿ ಎಂ ಸಿದ್ದೇಶ್ವರ ಆರೋಪವೇನು.?

gm siddeshwar Davanagere mp pressmeet regarding ssm

ದಾವಣಗೆರೆ : ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಡಿಸ್ಟಲರಿಯಲ್ಲಿ ಸಿಕ್ಕ ವನ್ಯ ಜೀವಿಗಳ ಪ್ರಕರಣ ದಿನ ಕಳೆದಂತೆ ನಾನಾ ಪ್ರಕರಣಗಳಿಗೆ ತಿರುಗುತ್ತಿದೆ.

ಕೆಲ ತಿಂಗಳುಗಳ ಹಿಂದೆ ದಾವಣಗೆರೆ ಹೊರವಲಯದ ಎಸ್‌ಎಸ್ ಪ್ಯಾಲೆಸ್ ಮೈದಾನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಪ್ರಯುಕ್ತ ನಡೆದಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಜಿಂಕೆಯ ಮಾಂಸದ ಊಟ ಬಡಿಸಲಾಗಿತ್ತು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಆರೋಪಿಸಿದ್ದಾರೆ.

 

ನಗರದ ಜಿಎಂಐಟಿ ಕಾಲೇಜು ಆವರಣದಲ್ಲಿರುವ ಅತಿಥಿಗೃಹದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ದಾವಣಗೆರೆಯಲ್ಲಿ ಸಿದ್ದರಾಮಯ್ಯಗೋಸ್ಕರ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಿದ್ದರಾಮಯ್ಯ ಜಿಂಕೆ ಮಾಂಸ ತಿಂದಿರುವ ಸಂಬಂಧಿಸಿದ ಸಂದೇಶಗಳು ವಾಟ್ಸಪ್ ಮೂಲಕ ನಮಗೂ ಬರುತ್ತಿವೆ. ಇದನ್ನೆಲ್ಲಾ ಗಮನಿಸಿದರೆ ತಿನ್ನುವ ಉದ್ದೇಶದಿಂದಲೇ ಈ ಎಲ್ಲ ಪ್ರಾಣಿಗಳನ್ನು ಸಾಕಿದ್ದರು ಎಂಬ ಅನುಮಾನ ಮೂಡುತ್ತದೆ. ಸಿದ್ದರಾಮಯ್ಯ ಜಿಂಚೆ ತಿಂದಿದ್ದರೆ ಅವರೂ ಶಿಕ್ಷೆ ಅನುಭವಿಸುತ್ತಾರೆ ಎಂದು ಸಂಸದರು ಹೇಳಿದರು.

ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ ಪತ್ರಿಕಾಗೋಷ್ಠಿಯ ವಿಡಿಯೋ
ಈ ಪ್ರಕರಣ ಸಂಬಂಧ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಕೂಡಲೆ ಬಂಧಿಸುವ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸುವ ಜತೆಗೆ ಈ ಕುರಿತು ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.


ತನಿಖೆ, ಬಂಧನ ವಿಳಂಬ ಕುರಿತು ಕೇಳಲು ಪೋನ್ ಮಾಡಿದರೆ ಜಿಲ್ಲಾ ಅರಣ್ಯ ಅಧಿಕಾರಿ ಕೈಗೆ ಸಿಗುತ್ತಲೇ ಇಲ್ಲ. ಮಾಧ್ಯಮದವರು ಹಾಗೂ ಇತರರು ಪ್ರಯತ್ನಿಸಿದರೂ ಡಿಎಫ್ಒ ಕಣ್ಣಿಗೆ ಕಾಣದಂತೆ ಮಾಯವಾಗಿದ್ದಾರೆ. ಡಿಎಫ್ಒ ಸಿಕ್ಕರೆ ಸೆಂಥಿಲ್ ಬಳಿ ಸಿಕ್ಕ ಜಿಂಕೆ ಚರ್ಮ ಎಲ್ಲಿಯದು, ಆ ಜಿಂಕೆ ಎಲ್ಲಿತ್ತು,ಅದನ್ನು ಕೊಂದವರು ಯಾರು ಮತ್ತು ಮಾಲೀಕರು ಯಾರು ಎಂಬ ಬಗ್ಗೆ ಕೇಳಿ ತಿಳಿದುಕೊಳ್ಳಬಹುದಿತ್ತು. ಆದರೆ, ಈಗ ಅವರೇ ಮಿಸ್ಸಿಂಗ್ ಎಂದು ಸಿದ್ದೇಶ್ವರ ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಸಲ್ಲಿಸುವ ಮಾಹಿತಿಯಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ಅವರ ಹೆಸರೇ ಇಲ್ಲ. ಯಾರೂ ಇಬ್ಬರು ವ್ಯಕ್ತಿಗಳನ್ನು ಎ1 ಮತ್ತು ಎ2 ಆರೋಪಿಗಳನ್ನಾಗಿ ಮಾಡಿ, ಸೆಂಥಿಲ್‌ನಲ್ಲಿ ಮೂರನೇ ಆರೋಪಿ ಮಾಡಲಾಗಿದೆ. ಬಳಿಕ ಮಿಲ್ ಆವರಣ ಸ್ಥಳದ ಮಾಲೀಕರು ಹಾಗೂ ಇತರರು 4ಎ ಎಂದು ನಮೂದಿಸಲಾಗಿದೆ. ಇಲ್ಲಿ ವನ್ಯ ಮೃಗಗಳು ಪತ್ತೆಯಾದ ಸ್ಥಳದ ಮಾಲೀಕರ ಹೆಸರನ್ನು ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ನಮೂದಿಸಿಲ್ಲ ಎಂದರೆ ಅವರ ಬಗ್ಗೆ ಎಷ್ಟು ಭಯ ಇರಬಹುದು? ಎಂದು ಜಿ.ಎಂ. ಸಿದ್ದೇಶ್ವರ ಪ್ರಶ್ನಿಸಿದರು.

ಕಲ್ಲೇಶ್ವರ ಮಿಲ್ ಹಿಂಭಾಗದ ಈ ಫಾರ್ಮ್‌ಹೌಸ್‌ನಲ್ಲಿ ಇತ್ತೀಚೆಗೆ 11 ಕೃಷ್ಣಮೃಗ, 7 ಜಿಂಕೆ,7 ಕಾಡು ಹಂದಿ, 2 ನರಿ ಮತ್ತು 3 ಮುಂಗುಸಿ ಪತ್ತೆಯಾಗಿದ್ದವು. ಈ ಸಂಬಂಧ ಅರಣ್ಯ ಇಲಾಖೆ ಸಮರ್ಪಕ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ಆಕಸ್ಮಿಕವಾಗಿ ಹೆಬ್ಬಾಳ ಠಾಣೆ ಪೊಲೀಸರ ಬಲೆಗೆ ಬಿದ್ದ ಸೆಂಥಿಲ್ ಎಂಬ ವ್ಯಕ್ತಿಯ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿದೆ. ಕೃಷ್ಣಮೃಗದ ಕೊಂಬು, ಚುಕ್ಕಿ ಜಿಂಕೆ ಚರ್ಮ, 5 ಕಾಡು ಹಂದಿ ಕೋರೆ ಹಲ್ಲುಗಳು ಹಾಗೂ ಮುಳ್ಳುಹಂದಿ ಮುಳ್ಳುಗಳನ್ನು ಕದ್ದು ಸಾಗಿಸುವಾಗ ಸೆಂಥಿಲ್, ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆತನನ್ನು ವಿಚಾರಿಸಿದಾಗ ಅವುಗಳನ್ನು ದಾವಣಗೆರೆಯ ಮಾರಿಯಪ್ಪ ಮತ್ತು ಕಾಡು ಚುಂಚ ಎಂಬುವರಿಂದ ಖರೀದಿಸಿದ್ದಾಗಿ ತಿಳಿಸಿದ್ದಾನೆ. ಪ್ರಕರಣದ ಜಾಡು ಹಿಡಿದ ಸಿಸಿಬಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಎಸ್‌ಎಸ್‌ಎಂಗೆ ಸೇರಿದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದಾಗ ಅಲ್ಲಿ ಅಕ್ರಮವಾಗಿ ವನ್ಯ ಮೃಗಗಳನ್ನು ಸಾಕಿರುವುದು ಪತ್ತೆಯಾಗಿತ್ತು ಎಂದರು.

ಕ್ರಮವೇ ಇಲ್ಲ:
ದಾವಣಗೆರೆಯ ಮಾಜಿ ಸಚಿವರ ಫಾರ್ಮ್‌ಹೌಸ್‌ನಲ್ಲಿ ವನ್ಯಮೃಗಗಳು ಪತ್ತೆಯಾಗಿರುವ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ ಪ್ರಕರಣ ಪತ್ತೆಯಾಗಿ ನಾಲ್ಕು ದಿನ ಕಳೆದರೂ ಫಾರ್ಮ್‌ಹೌಸ್ ಮಾಲೀಕರಾಗಿರುವ ಮಾಜಿ ಸಚಿವ ಮಲ್ಲಿಕಾರ್ಜುನ್‌ರನ್ನು ಬಂಧಿಸಿಲ್ಲ. ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೇಕಂತಲೇ ವಿಳಂಬ ನೀತಿ ಅನುಸರಿಸುತ್ತಿರುವ ಅನುಮಾನ ಬರುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದರು.

ಬೆಂಗಳೂರಿನಿಂದ ಬಂದಿದ್ದ ಸಿಸಿಬಿ ಪೊಲೀಸರು ಡಿ.21ರಂದು ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿ, ವಶಕ್ಕೆ ಪಡೆದ ಪ್ರಾಣಿಗಳನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿ ಹೋಗಿದ್ದಾರೆ. ಆದರೆ ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಮಾಜಿ ಸಚಿವರ ವಿಚಾರಣೆ ನಡೆಸಿಲ್ಲ. ಹೇಳಿಕೆ ಕೂಡ ತಗೆದುಕೊಂಡಿಲ್ಲ. ವಿದ್ಯಾನಗರದ ಸಂಪನ್ನ(50), ಜಿ.ಎಂ. ಕರಿಬಸಯ್ಯ ಎಂಬವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಆದರೆ ಇವರನ್ನೂ ಬಂಧಿಸಿಲ್ಲ. ಪೊಲೀಸರು ಸಲ್ಲಿಸಿದ್ದ ವರದಿ ಗಮನಿಸಿದ ಸಿವಿಲ್ ನ್ಯಾಯಾಧೀಶರು ವಿವರವಾದ ವರದಿ ಸಲ್ಲಿಸುವಂತೆ ಆದೇಶಿಸಿದ್ದರೂ ಇದುವರೆಗೆ ವಿವರ ವರದಿ ಒದಗಿಸಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ಎ.ವೈಘಿ. ಪ್ರಕಾಶ್, ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಎಪಿಎಂಸಿ ಅಧ್ಯಕ್ಷ ಕೊಳೇನಳ್ಳಿ ಸತೀಶ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ವಕ್ತಾರ ಶಿವಶಂಕರ್ ಇತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!