ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಪ್ಪುಬಟ್ಟೆ ಪ್ರದರ್ಶಿಸಿ ಪ್ರತಿಭಟನೆ.

ದಾವಣಗೆರೆ: ಜಿ-20 ರಾಷ್ಟ್ರಗಳ ಶೃಂಗಸಭೆಯನ್ನು ಬೆಂಗಳೂರಿನ ದೇವನಹಳ್ಳಿ ಮತ್ತು ರಾಷ್ಟ್ರಾದ್ಯಂತ
ನಿಯೋಜಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ದಾವಣಗೆರೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಅವರಿಗೆ ಮನವಿ ನೀಡಿ, ಈ ಹಿಂದೆ ಜಿ-20 ರಾಷ್ಟ್ರಗಳ ಶೃಂಗ ಸಭೆಯನ್ನು ಏರ್ಪಡಿಸುವ ಪೂರ್ವಭಾವಿ ಸಭೆಯಲ್ಲಿ ಭಾರತದ 75ನೇ ವರ್ಷದ ಸ್ವಾತಂತ್ರೋತ್ಸವದ ವರ್ಷಾಚರಣೆಯಲ್ಲಿ ಭಾರತಕ್ಕೆ ಆತಿಥ್ಯವನ್ನು ಏರ್ಪಡಿಸುವ ಅವಕಾಶದ ಪ್ರಧಾನಿಯವರ ಕೋರಿಕೆಯ ಮೇರೆಗೆ ಡಿ.13 ರಿಂದ 17 ರವರೆಗೆ ದೇವನಹಳ್ಳಿಯಲ್ಲಿ ಸಕಲ ಪೋಲಿಸ್ ಬಂದೋಬಸ್ತ್ ನೊಂದಿಗೆ ಏರ್ಪಡಿಸಿರುವುದು ಕನ್ನಡಿಗರ ದೌರ್ಭಾಗ್ಯದ ಸಂಗತಿಯಾಗಿದೆ. ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಕಪ್ಪು ಪಟ್ಟಿಯನ್ನು ಧರಿಸಿ ಅತ್ಯುಪ್ರವಾಗಿ ಪ್ರತಿಭಟಿಸುವ ಮೂಲಕ ಖಂಡಿಸುತ್ತಿದ್ದೇವೆ ಎಂದು ಕ.ರಾ.ರೈ.ಸಂ.ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಪಿ.ಪಿ ಮರಳಿಸಿದ್ದಯ್ಯ, ಹೇಳಿದರು.
ದೇಶದ ಪ್ರಧಾನಮಂತ್ರಿಗಳು ಈವರೆಗೆ ಅಂಬಾನಿ, ಆದಾನಿಯವರನ್ನು ಆರ್ಥಿಕವಾಗಿ ಬಲಪಡಿಸಿದ ಮುಂದುವರಿದ ಭಾಗವಾಗಿ ಅಂಬಾನಿ, ಆದಾನಿ, ಪತಂಜಲಿಯವರಂತಹ ಆರ್ಥಿಕ ವ್ಯವಹಾರಗಳ ಮುಖಾಂತರ ಜಾಗತಿಕವಾಗಿ ಭಾರತವನ್ನು ಆರ್ಥಿಕ ದಿವಾಳಿತನಕ್ಕೆ ತಳ್ಳುವಂತಹ ಹುನ್ನಾರಗಳೇ ಈ ಶೃಂಗ ಸಭೆಗಳಾಗಿವೆ. ಕೋವಿಡ್-19 ಕಾಲದಲ್ಲಿ ದೇಶದ GDP ನೆಲಕಚ್ಚಿದ್ದು ವಿಶ್ವಕಂಡ ಸಂಗತಿ. ಈಗಲೂ ಚೇತರಿಸಿಕೊಳ್ಳಲಾರದ ಭಾರತದಲ್ಲಿ ಶೇ.85ರಷ್ಟು GDP ಚೇತರಿಕೆ ಕಂಡಿರುವ ಮತ್ತು ಶೇ. 2 ರಷ್ಟು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು ನಮ್ಮಂತಹ ರಾಷ್ಟ್ರಗಳ ಆರ್ಥಿಕ ಚೇತರಿಕೆಯ ಉದ್ದೇಶ ಹೊಂದಿದ್ದಾರೆ. ಎಂಬುದು ಗಾಳಿಗೋಪುರವಾಗಿದೆ. ನಮ್ಮ ದೇಶ ಸ್ವಾವಲಂಭಿಯಾಗಿ ಬದುಕುವ ಎಲ್ಲಾ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿರುವುದರಿಂದ ಈ ಎಲ್ಲವನ್ನು ನಮ್ಮವರ ಮುಖಾಂತರವೇ ಕೊಳ್ಳೆ ಹೊಡೆಯುವ ಜಿ-20 ರಾಷ್ಟ್ರಗಳ ಒಳ ಹುನ್ನಾರಗಳನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮನವರಿಕೆ ಮಾಡಿಕೊಂಡಿದೆ. “ಒಂದು ಭೂಮಿ – ಒಂದು ಕುಟುಂಬ – ಒಂದು ಭವಿಷ್ಯ” ಎಂಬ ಘೋಶವಾಕ್ಯವನ್ನು ಮತ್ತು ಅದರ ಒಳ ಮರ್ಮಗಳನ್ನು ಅರ್ಥೈಸಿಕೊಂಡಾಗ ಭಾರತದಂತಹ ವೈವಿದ್ಯಮಯವಾದ ಭಾಷೆ, ಸಂಸ್ಕೃತಿ, ಜನಜೀವನ ಮುಂತಾದ ಅನೇಕತೆಯಲ್ಲಿನ ಏಕತೆಗೆ ಧಕ್ಕೆ ತರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಆ ಕಾರಣ ದೇವನಹಳ್ಳಿಯಲ್ಲಿ ಆಯೋಜಿಸಿರುವ ಶೃಂಗ ಸಭೆಯನ್ನು ಖಂಡಿಸುತ್ತಾ ಮುಂದಿನ ವರ್ಷ ದೇಶದ ನಾನಾ ಭಾಗದಲ್ಲಿ ಆಯೋಜಿಸಿರುವ ಶೃಂಗ ಸಭೆಗಳನ್ನು ರೈತ ಸಂಘ ವಿರೋಧಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಹೊನ್ನೂರು ಮುನಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಶಾಲೆ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ನಾಯ್ಕ್ ಕಬ್ಬಳ, ಜಿಲ್ಲಾ ಕಾರ್ಯದ್ಯಕ್ಷ ಹೊನ್ನೂರು ರಾಜಣ್ಣ, ಜಿಲ್ಲಾ ರೈತ ಮುಖಂಡರು ಪಾಲಕ್ಷಪ್ಪ ಹದಡಿ, ಮಹಿಳಾ ಘಟಕದ ಅಧ್ಯಕ್ಷೆ ಕುಮದತ್ತಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.