ಪತ್ರಕರ್ತರ ಬೇಡಿಕೆ ಈಡೇರಿಕೆಗೆ ಇಲಾಖೆ ಬದ್ದ: ವಾರ್ತಾ ಆಯುಕ್ತ ವಿಕಾಸ ಸುರಳಕರ ಭರವಸೆ

ಬೆಂಗಳೂರು: ರಾಜ್ಯದ ಪತ್ರಕರ್ತರಿಗೆ ತ್ವರಿತ ಬಸ್ ಪಾಸ್ ನೀಡಿಕೆಯ ಸಂಬಂದ ಶೀಘ್ರವಾಗಿ ಕ್ರಮ ವಹಿಸಲಾಗುವುದು. ಮೂರು ತಿಂಗಳಿಂದ ಬಾಕಿ ಇದ್ದ ನಿವೃತ್ತ ಪತ್ರಕರ್ತರ ಮಾಸಾಶನಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು, ಶೀಘ್ರವೇ ಮಾಸಾಶನ ಬಿಡುಗಡೆ ಮಾಡಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಸುರಳಕರ ವಿಕಾಸ ಕಿಶೋರ ಅವರು ಭರವಸೆ ನೀಡಿದ್ದಾರೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರ ನೇತೃತ್ವದಲ್ಲಿ ಶುಕ್ರವಾರ ವಾರ್ತಾ ಇಲಾಖೆಯಲ್ಲಿ ಭೇಟಿಯಾಗಿದ್ದ ನಿಯೋಗಕ್ಕೆ ಮಾಹಿತಿ ನೀಡಿದರು.

ಹಿರಿಯ ಪತ್ರಕರ್ತರ ಮಾಸಾಶನಕ್ಕೆ ಇರುವ ಅಡೆ ತಡೆಗಳನ್ನು ಆದಷ್ಟು ಬೇಗ ನಿವಾರಣೆ ಮಾಡಬೇಕು. ಬಾಕಿ ಇರುವ ಪತ್ರಕರ್ತರ ಮಾಸಾಶನ ಅರ್ಜಿಗಳನ್ನು ಪರಿಗಣಿಸಿ ಮಾಸಾಶನ ಮಂಜೂರು ಮಾಡಬೇಕು. ಮಾನ್ಯತೆ ಪಡೆದ ಪತ್ರಕರ್ತರ ಬಸ್ ಪಾಸ್ ಕಾರ್ಡ್‌ಗಳನ್ನು ಕೂಡಲೇ ಕೊಡಬೇಕು ಎಂಬಿತ್ಯಾಧಿ ಬೇಡಿಕೆಗಳ ಬಗ್ಗೆ ಆಯುಕ್ತರ ಜೊತೆಗೆ ಚರ್ಚೆ ನಡೆಸಲಾಯಿತು.

ಪತ್ರಕರ್ತರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಅವರ ಬಳಿಯೂ ಪ್ರಸ್ತಾಪಿಸಿ ಮನವಿ ಸಲ್ಲಿಸಿದ್ದು, ಅವರು ವಾರ್ತಾ ಇಲಾಖೆ ಕಾರ್ಯದರ್ಶಿ ಅವರ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನುವುದನ್ನು ಗಮನಕ್ಕೆ ತರಲಾಯಿತು.

ಸಂಘದ ಬೇಡಿಕೆಗಳನ್ನು ಸಹಾನುಭೂತಿಯಿಂದ ಆಲಿಸಿದ ಆಯುಕ್ತರಾದ ವಿಕಾಸ ಸುರಳಕರ, ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸಲು ಇಲಾಖೆ ಬದ್ಧವಾಗಿದ್ದು, ಬೇಡಿಕೆಗಳನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಿದರು.

ನಿಯೋಗದಲ್ಲಿ ವಿಜಯಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಹಿರಿಯ ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಚಿತ್ರದುರ್ಗದ ಹಿರಿಯ ಪತ್ರಕರ್ತ ಹೆಂಜಾರಪ್ಪ, ಬೆಂಗಳೂರು ನಗರ ಘಟಕದ ಶಿವರಾಜು ಮತ್ತಿತರರಿದ್ದರು

Leave a Reply

Your email address will not be published. Required fields are marked *

error: Content is protected !!