ದೇವದಾಸಿ ಮಹಿಳೆರಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯ.

Devadasi mahileyaru

ದಾವಣಗೆರೆ: ದೇವದಾಸಿ ಮಹಿಳೆಯರ ಹಾಗೂ ಕುಟುಂಬದ ಸದಸ್ಯರ ಗಣತಿ ನಡೆಸಿ ಅವರಿಗೆ ಪುನರ್ವಸತಿ  ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರಿಗೆ ಮನವಿ ಸಲ್ಲಿಸಿದ ದೇವದಾಸಿ ಮಹಿಳೆಯರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು.

ದೇವದಾಸಿ ಮಹಿಳೆಯರ ಮಕ್ಕಳು ಅವರ ತಂದೆಯ ಕುಟುಂಬದಿಂದ ಆಸ್ತಿಯಲ್ಲಿ ಪಾಲು ಪಡೆಯಲು ಮತ್ತು ನಿರ್ವಹಣೆಯ ಪರಿಹಾರ ಪಡೆಯಲು ಅಗತ್ಯ ಕ್ರಮಗಳಿರಬೇಕು. ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಮದುವೆಗೆ ಪ್ರೋತ್ಸಾಹ ಧನವನ್ನು ನಿಗದಿಸಬೇಕು. ದೇವದಾಸಿ ಮಹಿಳೆಯರ ಪರಿತ್ಯಕ್ತ ಹೆಣ್ಣು ಮಕ್ಕಳಿಗೂ ಪುನರ್ವಸತಿ ಕಲ್ಪಿಸಬೇಕು ಎನ್ನುವುದು ಸೇರಿದಂತೆ ಇತರೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ದೇಶದಾದ್ಯಂತ ದೇವದಾಸಿ ಮಹಿಳೆಯರನ್ನು ಮತ್ತು ಅವರ ಕುಟುಂಬದ ಸದಸ್ಯರನ್ನು ಗಣತಿ ಮಾಡಲು ಕ್ರಮ ವಹಿಸಬೇಕು. ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಕುಟುಂಬದ ಸದಸ್ಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಪರಿಣಾಮಕಾರಿ ಪುನರ್ ವಸತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಮಿತಿಯ ಮುಖಂಡರು, ದೇವದಾಸಿ ಪದ್ಧತಿಯನ್ನು ನಿಷೇಧಿಸಲಾಗಿದ್ದರೂ ದೇಶದ ಹಲವು ರಾಜ್ಯಗಳಲ್ಲಿ ಅದರಲ್ಲೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣಾ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಈಗಲೂ ಕೆಲಕಡೆಗಳಲ್ಲಿ ಮುಂದುವರೆದಿದೆ. ಕರ್ನಾಟಕದಲ್ಲೊಂದೇ ಸರಕಾರದ ಗಣತಿ ಪ್ರಕಾರ 60ಸಾವಿರದಷ್ಟು ಮತ್ತು ಗಣತಿಯಲ್ಲಿರದ ಸಾವಿರಾರು ಕುಟುಂಬಗಳು ಸೇರಿ ಸುಮಾರು ಒಂದು ಲಕ್ಷ ಕುಟುಂಬಗಳಿರುವ ಅಂದಾಜಿದೆ ಎಂದರು.

ಈ ವೇಳೆ ಕೆ.ಹೆಚ್ ಆನಂದರಾಜ್, ಟಿ.ವಿ.ರೇಣುಕಮ್ಮ, ಹಿರಿಯಮ್ಮ, ಹೊನ್ನಮ್ಮ, ಕರಿಯಮ್ಮ, ಗುಡ್ಡಪ್ಪ ಇತರರು ಇದ್ದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!