Dhuda Land: ಹಳೆ ಕುಂದುವಾಡ ಬಳಿ 150 ಎಕರೆ ಭೂ ಸ್ವಾಧೀನ.! ದೂಡಾ ಕಚೇರಿಗೆ ಬೀಗ ಹಾಕಿ, ಅಮರಣಾಂತ ಸತ್ಯಾಗ್ರಹದ ಎಚ್ಚರಿಕೆ ನೀಡಿದ ಗ್ರಾಮಸ್ಥರು

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ಯೋಜನೆ ಅಭಿವೃದ್ದಿ ಪಡಿಸಲು ಹಳೆಯ ಕುಂದುವಾಡಲ್ಲಿ 53 ಎಕರೆ ಸ್ವಾಧೀನ ಪಡೆದುಕೊಂಡಿದ್ದು, ಈಗ ಮತ್ತೆ ಅಕ್ಕಪಕ್ಕದ 150 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ ಎಂದು ದೂಡಾದ ಕ್ರಮಕ್ಕೆ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೇ ಕುಂದವಾಡ ಗ್ರಾಮದಲ್ಲಿ 53 ಎಕರೆಯಲ್ಲಿ ವಸತಿ ಯೋಜನೆ ಅಭಿವೃದ್ದಿ ಪಡಿಸಲು ಮುಂದಾಗಿತ್ತು. ಆದರೆ, ಇತ್ತೀಚೆಗೆ ಪತ್ರಿಕೆಯೊಂದರಲ್ಲಿ 53 ಎಕರೆ ಜಮೀನಿನ ಅಕ್ಕಪಕ್ಕದಲ್ಲಿನ ಸುಮಾರು 150 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವುದಾಗಿ ಪ್ರಕಟಣೆ ಹೊರಡಿಸಿದ್ದು ಇದು ಖಂಡನೀಯ ನಡೆ ಎಂದು ಸುದ್ದಿಗೋಷ್ಟಿಯಲ್ಲಿ ರೈತ ಜೆ.ಎನ್. ಮಾರುತಿ ಆಕ್ಷೇಪಿಸಿದರು.
ದಾವಣಗೆರೆ ಹರಿಹರ ನಗರಾಭಿವೃದ್ದಿ ಪ್ರಾಧಿಕಾರ ಈ ಆದೇಶವನ್ನು ಒಂದು ವಾರದೊಳಗೆ ಹಿಂಪಡೆಯದಿದ್ದರೆ ದೂಡಾ ಕಚೇರಿಗೆ ಬೀಗ ಹಾಕಿ, ಅಮರಣಾಂತ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿಂದೆ ಕುಂದವಾಡದಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಗೆ 300 ಎಕರೆ ಭೂಮಿಯನ್ನು ನೀಡಲಾಗಿದೆ. ಅಲ್ಲಿ ತುಂಗಭದ್ರಾ ಬಡಾವಣೆ ನಿರ್ಮಾಣವಾಗಿದೆ. ಇದೀಗ ದೂಡಾ ಸ್ವಾಧೀನ ಮಾಡಿಕೊಳ್ಳಲು ಉದ್ದೇಶಿಸಿರುವ ಜಮೀನಿನಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದನ್ನೂ ಕಸಿದುಕೊಂಡು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೇಶನಕ್ಕಾಗಿ ದೂಡಾಕ್ಕೆ 22 ಸಾವಿರ ಅರ್ಜಿಗಳು ಬಂದಿದ್ದು, ಅದಕ್ಕಾಗಿ 150 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳುತ್ತೇವೆ. ಆದ್ದರಿಂದ ಬೇರೆಯವರು ಜಮೀನನ್ನು ಖರೀದಿಸದಂತೆ ದೂಡಾ ಪ್ರಕಟಣೆ ಹೊರಡಿಸಿದೆ. ಇದೇನು ದೂಡಾ ಆಸ್ತಿಯಾ ಎಂದು ಪ್ರಶ್ನಿಸಿದ ಅವರು, ನಾಳೆ ಮತ್ತೊಮ್ಮೆ ನಿವೇಶನಕ್ಕೆ ಅರ್ಜಿ ಆಹ್ವಾನಿಸಿ ಕರೆದರೆ 30 ಸಾವಿರ ಅರ್ಜಿ ಬರಬಹುದು. ಆಗ ಇಡೀ ಕುಂದವಾಡವನ್ನೇ ಸ್ವಾಧೀನ ಮಾಡಿಕೊಂಡು ಗ್ರಾಮಸ್ಥರನ್ನೇನು ಬೇರೆ ರಾಜ್ಯಕ್ಕೆ ಕಳಿಸುವರಾ ಎಂದು ಕಿಡಿಕಾರಿದರು.
ಕೂಡಲೇ ದೂಡಾ ತನ್ನ ಪ್ರಕಟಣೆಯನ್ನು ಹಿಂಪಡೆಯಬೇಕು. ಯಾವುದೇ ರೀತಿಯಲ್ಲಿ ಭೂಸ್ವಾಧೀನ ಮಾಡುವುದಿಲ್ಲ. ರೈತರ ಒಪ್ಪಿಗೆ ಇದ್ದರೆ ಮಾತ್ರ ಜಮೀನು ಖರೀದಿಸಿ ಬಡಾವಣೆ ನಿರ್ಮಾಣ ಮಾಡುತ್ತೇವೆ ಎಂದು ಆಧ್ಯಕ್ಷರು, ಆಯುಕ್ತರು ವಾರದೊಳಗೆ ಪ್ರಕಟಣೆ ಹೊರಡಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ದೂಡಾವೇ ಹೊಣೆ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಮಿಟ್ಲಕಟ್ಟೆ ಚಂದ್ರಪ್ಪ, ಹೆಚ್.ಜಿ.ಗಣೇಶಪ್ಪ, ಹೆಚ್.ಎನ್.ಗುರುನಾಥ್, ಎನ್.ಶಿವಪ್ಪ, ಹೆಚ್.ಜಿ.ಮಂಜುನಾಥ್, ಜಿ.ಆರ್.ಮಹಾಂತೇಶ್ ಇತರರು ಇದ್ದರು.