ವಿದ್ಯಾರ್ಥಿಗಳೇ ಹಿಜಾಬ್ – ಕೇಸರಿ ವಿವಾದದಲ್ಲಿ ಹೆತ್ತ ತಂದೆತಾಯಿಗಳನ್ನು ಬೀದಿಗೆ ತಂದು ನಿಲ್ಲಿಸಬೇಡಿ.

ವಿದ್ಯಾರ್ಥಿಗಳೇ ನಮ್ಮ ಮಕ್ಕಳು ಜೀವನದಲ್ಲಿ ಏನನ್ನಾದರೂ ಸಾಧಿಸಲಿ, ನಮ್ಮಂತೆ ಕಷ್ಟದ ಜೀವನ ನೋಡದೆ ವಿದ್ಯಾವಂತರಾಗಿ ಉತ್ತಮ ಜೀವನ ಸಾಧಿಸಲಿ ಎಂದು ಪೋಷಕರು ಕಷ್ಟಪಟ್ಟು ನಿಮ್ಮನ್ನು ಶಾಲಾ-ಕಾಲೇಜುಗಳಿಗೆ ಸೇರಿಸುತ್ತಾರೆ ವಿನಹ ಹೋರಾಟ ಮಾಡುತ್ತಾ ವಿದ್ಯೆ ಬುದ್ದಿ ಕಲಿಸುವ ದೇಗುಲ ಎಂದೇ ಕರೆಯಲ್ಪಡುವ ಶಾಲಾ-ಕಾಲೇಜುಗಳಿಗೆ ಕಲ್ಲು ಹೊಡೆಯಲು ಎಂದಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.
ಈ ಹೋರಾಟಗಳಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು ಯಾರು ರಾಜಕಾರಣಿಗಳ ಮಕ್ಕಳಲ್ಲ, ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳ ಮಕ್ಕಳಲ್ಲ, ಉದ್ಯಮಿಗಳ ಮಕ್ಕಳಲ್ಲಿ ಕೇವಲ ಮಧ್ಯಮ ವರ್ಗದ ಜನರ ಮಕ್ಕಳು ಎಂಬುದು ಮಾತ್ರ ಸತ್ಯ.
ವಿದ್ಯೆ ನೀಡುವ ಕಾಲೇಜುಗಳಿಗೆ ನೀವು ಕಲ್ಲು ಹೊಡೆಯುವ ಮಟ್ಟಕ್ಕೆ ಬೆಳೆದಿದ್ದೀರಾ ಎಂದರೆ ಮುಂದೆ ನೀವು ಏನಾಗಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ…
ಈ ತರಹದ ಹೋರಾಟ ಮಾಡಲು ಸಂಘ ಸಂಸ್ಥೆಗಳಿವೆ, ತೀರ್ಮಾನ ತೆಗೆದುಕೊಳ್ಳಲು ಸರ್ಕಾರಗಳು, ನ್ಯಾಯಾಂಗಗಳು, ಎಲ್ಲಕ್ಕಿಂತ ಹೆಚ್ಚಾಗಿ ಪವಿತ್ರಗ್ರಂಥ ಸಂವಿಧಾನವಿದೆ ಎಂಬುದನ್ನು ನೆನಪಿಟ್ಟುಕೊಂಡು ಹೋರಾಟ ಗಳನ್ನೆಲ್ಲಾ ಬಿಟ್ಟು, ಶಾಂತ ರೀತಿಯಿಂದ ವಿದ್ಯಾಭ್ಯಾಸ ಮಾಡುತ್ತಾ ಎಲ್ಲರೂ ಸಹೋದರರು ಎಂಬುದನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಶಿಕ್ಷಣ ಪಡೆದು ತಂದೆ ತಾಯಿಗಳ ಆಸೆ ಈಡೇರಿಸಿ, ಮೊದಲು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಿ ಎಂಬುದೇ ನಮ್ಮೆಲ್ಲರ ಬಯಕೆ.
ಕೆ.ಎಲ್.ಹರೀಶ್ ಬಸಾಪುರ.