ಅನ್ನದಾತನಿಗೆ ವರದಾನವಾದ ಇ-ಟೆಂಡರ್.! ರೈತರು, ದಲ್ಲಾಲರು, ವರ್ತಕರು ಫುಲ್ ಖುಷ್.!

ದಾವಣಗೆರೆ: ಒಂದಾನೊಂದು ಕಾಲದಲ್ಲಿ ದಲ್ಲಾಳಿಗಳು ರೈತರ ಬಳಿ ಹೋಗಿ ಇಷ್ಟ ಬಂದ ಬೆಲೆಗೆ ಭತ್ತ, ಮೆಕ್ಕೆಜೋಳ ಖರೀದಿ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದರು. ಅಲ್ಲದೆ ಇತರೆ ಖರ್ಚು ಎಂದು ಅನ್ನದಾತನಿಗೆ ಸಾಕಷ್ಟು ನಷ್ಟ ಉಂಟು ಮಾಡುತ್ತಿದ್ದರು. ಪರಿಣಾಮ ಕಷ್ಟಪಟ್ಟ ಬೆಳೆದು ರೈತನಿಗೆ ಸರಿಯಾದ ದರ ಸಿಗುತ್ತಿರಲಿಲ್ಲ…ಆದರೀಗ ದಾವಣಗೆರೆಯಲ್ಲಿ ಆ ಸಮಸ್ಯೆ ಇಲ್ಲ..ಹಾಗಾದ್ರೆ ಇದಕ್ಕೆ ಏನೂ ಪರಿಹಾರ ಏನಿರಬಹುದು ಎಂಬ ಹುಳ ನಿಮ್ಮ ತಲೆಗೆ ಹೊಕ್ಕಿರುತ್ತದೆ…
ಸದ್ಯ ಬೆಣ್ಣೆ ನಗರಿಯ ಎಪಿಎಂಸಿಯಲ್ಲಿ ಇ-ಟೆಂಡರ್ ವ್ಯವಸ್ಥೆ ಜಾರಿ ತರಲಾಗಿದ್ದು, ರೈತನಿಗೆ ಉತ್ತಮ ದರ ಸಿಗುತ್ತಿದೆ. ಇದರಿಂದ ಅನ್ನದಾತನಿಗೆ ಯಾವುದೇ ಮೋಸವಾಗುತ್ತಿಲ್ಲ. ದಾವಣಗೆರೆ ಎಂದ್ರೆ ಸಾಕು ಮೆಕ್ಕೆಜೋಳ, ಭತ್ತಕ್ಕೆ ಫೇಮಸ್ ಆಗಿದ್ದು. ಮೆಕ್ಕೆಜೋಳ ಕಣಜವೆಂದೇ ಫೇಮಸ್…ಈಗ ಭತ್ತ, ಮೆಕ್ಕೆಜೋಳ ಕಟಾವು ಶುರುವಾಗಿದ್ದು, ಎಪಿಎಂಸಿಗೆ ಪ್ರತಿ ದಿನ 10 ರಿಂದ 15 ಸಾವಿರ ಚೀಲ ಭತ್ತ, ಮೆಕ್ಕೆಜೋಳ ಬರುತ್ತಿದೆ.
ಅಂತೆಯೇ ಮಾಯಕೊಂಡ, ಜಗಳೂರು, ಹೊನ್ನಾಳಿ ಸೇರಿದಂತೆ ಇತರೆ ಭಾಗದ ನಾನಾ ರೈತರು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಮೆಕ್ಕೆಜೋಳ, ಭತ್ತ ತೆಗೆದುಕೊಂಡು ಬರುತ್ತಿದ್ದಾರೆ. ಇಲ್ಲಿ ಆವಕವಾಗುವ ಮೆಕ್ಕೆಜೋಳ ಉತ್ಪನ್ನವನ್ನು ಇ-ಟೆಂಡರ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರು, ದಲ್ಲಾಲರು, ವರ್ತಕರಿಗೆ ಉಪಯೋಗವಾಗುತ್ತಿದೆ. ಬೆಳಗ್ಗೆ 09 ರಿಂದ ಮಧ್ಯಾಹ್ನ 12.50 ಗಂಟೆಯವರೆಗೆ ಇ-ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಆಯಾ ದಿನದಂದು ಮಧ್ಯಾಹ್ನ 1 ಗಂಟೆಗೆ ಟೆಂಡರ್ ಘೋಷಣೆಯಾಗಲಿದೆ. ಇದರಿಂದಾಗಿ ರೈತರಿಗೆ ಸ್ಪರ್ಧಾತ್ಮಕ ಧಾರಣೆಗಳು ಸಿಗಲಿದ್ದು, ದಾವಣಗೆರೆ ಜಿಲ್ಲೆ ಹಾಗೂ ಇತರೆ ಜಿಲ್ಲೆಯ ರೈತರು ಬೆಳೆದ ಮೆಕ್ಕೆಜೋಳ ಉತ್ಪನ್ನವನ್ನು ಮಾರುಕಟ್ಟೆಗೆ ತಂದು ಇ-ಟೆಂಡರ್ನಲ್ಲಿ ಮಾರಾಟಮಾಡುತ್ತಿರುವ ದೃಶ್ಯ ಈಗ ಎಪಿಎಂಸಿಯಲ್ಲಿ ಸಾಮಾನ್ಯವಾಗಿದೆ.
ಮೆಕ್ಕೆಜೋಳ ಅಥವಾ ಭತ್ತ ಬೆಳೆದ ರೈತ ಮೊದಲು ತನ್ನ ಬೆಳೆಯನ್ನು ಎಪಿಎಂಸಿಗೆ ತರುತ್ತಾನೆ. ಅಲ್ಲಿ ರೈತನು ತಂದ ಆಹಾರ ಬೆಳೆಗೆ ಲಾಟ್ ನಂಬರ್ ಕೊಡಲಾಗುತ್ತದೆ. ಈ ಲಾಟ್ ನಂಬರ್ ಆಧಾರದಡಿ ದಲ್ಲಾಳಿಗಳು ಆನಲೈನ್ನಲ್ಲಿ ಬಿಡ್ ಮಾಡುತ್ತಾರೆ. ಯಾರು ಹೆಚ್ಚಿನ ಹಣವನ್ನು ಬಿಡ್ ಮಾಡುತ್ತಾರೆಯೋ ಅವರು ರೈತನ ಬಳಿ ಇರುವ ಬೆಳೆ ಖರೀದಿಸುತ್ತಾರೆ. ಇ-ಟೆಂಡರ್ನಲ್ಲಿ ಸುಮಾರು 15ರಿಂದ 25 ಜನ ಭಾಗವಹಿಸುತ್ತಾರೆ. ಉತ್ತಮ ಗುಣಮಟ್ಟದ ಬೆಳೆಗೆ ಉತ್ತಮ ದರ ಸಿಗುತ್ತದೆ.
ಇನ್ನು ಜಿಲ್ಲೆಯಾದ್ಯಂತ ಬಿರುಸಿನಿಂದ ಭತ್ತದ ಕೊಯ್ಲು ಸಾಗಿದ್ದು, ಭತ್ತವೂ ಮೆಕ್ಕೆಜೋಳದ ಜತೆ ಆಗಮಿಸಿದೆ. ಆನ್ ಲೈನ್ ಟೆಂಡರ್ ಆಗಿರುವುದರಿಂದ ಬೆಂಬಲಬೆಲೆಗಿಂತ ಅಧಿಕ ಬೆಲೆಯು ಮುಕ್ತ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಇದರಿಂದ ರೈತರಲ್ಲಿ ಸಹಜವಾಗಿಯೇ ಖುಷಿಯಾಗಿದೆ. ಆದರೆ ಈ ಬಾರಿ ಮಳೆ ಹೆಚ್ಚಾದ ಕಾರಣ ಇಳುವರಿ ಕುಂಠಿತಗೊಂಡಿರುವುದು ರೈತನ ಮುಖ ಒಂಚೂರು ಬಾಡಿದೆ. ಕಳೆದ ವರ್ಷ ಕ್ವಿಂಟಲ್ ಭತ್ತಕ್ಕೆ 1,900ರಿಂದ 2,000 ಇದ್ದ ದರ, ಈ ಬಾರಿ 2,200- 2,400ರವರೆಗೆ ಏರಿದೆ. ಆನ್ ಲೈನ್ ಟೆಂಡರ್ ಬಂದಿರುವ ಕಾರಣ 200ರಿಂದ 300ರಷ್ಟು ಅಧಿಕ ದರ ರೈತನಿಗೆ ದೊರೆಯುತ್ತಿದೆ. 2020ರ ಏಪ್ರಿಲ್ ತಿಂಗಳಿನಿಂದ ಎಪಿಎಂಸಿಯಲ್ಲಿ ಆನ್ಲೈನ್ ಟೆಂರ್ಡ ಆರಂಭವಾಗಿದ್ದು, ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತಿದೆ. ಸಾಮಾನ್ಯ ಭತ್ತಕ್ಕೆ ಬೆಂಬಲ ಬೆಲೆ ಒಂದು ಕ್ವಿಂಟಲ್ಗೆ 2,040 ಇದ್ದು, ಉತ್ತಮ ಗುಣಮಟ್ಟದ ಭತ್ತಕ್ಕೆ 2,060 ಬೆಂಬಲ ಬೆಲೆ ಇದೆ. ಕಳೆದ ವರ್ಷ ನವೆಂಬರ್ನಲ್ಲಿ 88,433 ಕ್ವಿಂಟಲ್ ವಹಿವಾಟು ನಡೆದಿತ್ತು. ಈ ಬಾರಿ ಆವಕ ಕಡಿಮೆ ಇದೆ. ನವೆಂಬರ್ 8ರಿಂದ 25ರವರೆಗೆ 19,473 ಕ್ವಿಂಟಲ್ ವಹಿವಾಟು ನಡೆದಿದೆ. ಹೆಚ್ಚು ಮಳೆಯಿಂದಾಗಿ ಸೆಪ್ಟೆಂಬರ್ ತಿಂಗಳವರೆಗೆ ಜಿಲ್ಲೆಯಲ್ಲಿ 129 ಹೆಕ್ಟೇರ್ನಲ್ಲಿ ಭತ್ತದ ಬೆಳೆ ನಷ್ಟವಾಗಿತ್ತು. ಅಲ್ಲದೇ ಇತ್ತೀಚೆಗೆ ಹೆಚ್ಚು ಮಳೆ ಸುರಿದಿದ್ದರಿಂದ ಕೊಯ್ಲಿ ಮಂದಗತಿಯಲ್ಲಿ ಸಾಗಿದೆ. ಅಲ್ಲಲ್ಲಿ ಭತ್ತವನ್ನು ಒಣಗಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕಳೆದ ವರ್ಷ ಖರೀದಿ ಮಾಡಿದ ಭತ್ತ ಈಗಾಗಲೇ ಖಾಲಿಯಾಗಿದ್ದು, ಇಳುವರಿ ಕಡಿಮೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಸಿಗುವುದೋ ಇಲ್ಲವೋ ಎಂಬ ಆತಂಕದಿಂದ ವರ್ತಕರು ಹಾಗೂ ರೈಸ್ ಮಿಲ್ ಮಾಲೀಕರು ಈಗಾಗಲೇ ಭತ್ತದ ದಾಸ್ತಾನು ಆರಂಭಿಸಿದ್ದಾರೆ. ಇದರಿಂದಾಗಿ ರೈತರಿಗೆ ಉತ್ತಮ ದರವೂ ಸಿಗುತ್ತಿದೆ’ ಎಂದು ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಜೆ.ಪ್ರಭು ಹೇಳುತ್ತಾರೆ.
ಗ್ರಾಮೀಣ ಭಾಗದಲ್ಲೂ ಖರೀದಿ ನಡೆಯುತ್ತಿರುವುದರಿಂದ ರೈತರು ಹಳ್ಳಿಯಲ್ಲಿ ಬೆಳೆಯನ್ನು ದಲ್ಲಾಳರಿಗೆ ಕೊಡುತ್ತಿಲ್ಲಘಿ. ಆದರೆ ಎಪಿಎಂಸಿಯಲ್ಲಿ ಸ್ಪರ್ಧಾತ್ಮಕ ಬೆಲೆ ಸಿಗುತ್ತಿರುವುದರಿಂದ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಬೆಳಗ್ಗೆ ಎಪಿಎಂಸಿ ಆವರಣಕ್ಕೆ ಬರುವ ರೈತರು ಸಂಜೆಯವರೆಗೂ ಭತ್ತ ಒಣಗಿಸಿ ಇಲ್ಲಿಯೇ ಮಾರಾಟ ಮಾಡುತ್ತಿದ್ದಾರೆ. ಈ ಭಾಗದ ಬಹುತೇಕ ರೈತರು ಆರ್ಎನ್ಆರ್ ಬೆಳೆದಿದ್ದುಘಿ, ಎಕರೆಗೆ 28ರಿಂದ 30 ಕ್ವಿಂಟಲ್ ಇಳುವರಿ ಬಂದಿದೆ. ಕ್ವಿಂಟಲ್ಗೆ 2,250 ದರ ಸಿಕ್ಕಿದೆ. ಕಳೆದ ಬಾರಿಯೂ ಇಷ್ಟೇ ಇಳುವರಿ ಬಂದಿತ್ತು. 1,880ರಿಂದ 1,950 ದರ ಇತ್ತು. ಆನ್ಲೈನ್ ಟೆಂಡರ್ನಿಂದ ಹೆಚ್ಚು ಬೆಲೆ ದೊರೆತಿದೆ ಎನ್ನುತ್ತಾರೆ ದೊಡ್ಡಘಟ್ಟದ ಈಶಣ್ಣ. ಇನ್ನು ಈ ಬಾಗದಲ್ಲಿ ಜಯ, ಆರ್ಎನ್ಆರ್, ಶ್ರೀರಾಮ್ ಸೋನಾ ತಳಿಯ ಭತ್ತ ಬೆಳೆಯಲಾಗುತ್ತದೆ. ಇದರಿಂದ ಜಯ’ ತಳಿಯ ಭತ್ತ ಹೆಚ್ಚಾಗಿ ಮಂಡಕ್ಕಿ ಭಟ್ಟಿಗಳಿಗೆ ಹೋಗುತ್ತದೆ. ಶ್ರೀ ರಾಮ್ ಸೋನಾ’ ಹಾಗೂ ಆರ್ಎನ್ಆರ್’ ತಳಿಗಳು ಹೆಚ್ಚಾಗಿ ಎಪಿಎಂಸಿಗೆ ಬರಲಿದ್ದು, ಇವು ಸ್ಥಳೀಯವಾಗಿ ಅಲ್ಲದೇ ತುಮಕೂರು ಹಾಗೂ ಆಂಧ್ರಕ್ಕೆ ಹೆಚ್ಚಾಗಿ ಹೋಗುತ್ತವೆ. ಒಟ್ಟಾರೆ ಆನ್ಲೈನ್ ಟೆಂಡರ್ನಿಂದ ಅನ್ನದಾತ ಒಂದಿಷ್ಟು ಕಾಸು ನೋಡುತ್ತಿದ್ದಾನೆ.