Electricity: ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಲಭ್ಯವಿಲ್ಲದೆ ಸಾರ್ವಜನಿಕರ ಪರದಾಟ: ಇಂಜಿನಿಯರ್ ಹೆಚ್.ವಿ. ಮಂಜುನಾಥಸ್ವಾಮಿ

ದಾವಣಗೆರೆ: (Electricity) ಪ್ರಸ್ತುತ, ದಿನಗಳಲ್ಲಿ ನಿವೇಶನಗಳ ಬೆಲೆ, ಕಟ್ಟಡ ಸಾಮಾಗ್ರಿಗಳ ಬೆಲೆ ಹಾಗೂ ಕಟ್ಟಡ ಕಾರ್ಮಿಕರ ಕೂಲಿಗಳ ವೆಚ್ಚಗಳು ಗಗನಕ್ಕೇರಿರುವ ಇಂಥ ಹೊತ್ತಲ್ಲೂ ಸಾಲ ಶೂಲ ಮಾಡಿ ಕಟ್ಟಿರುವ ಸ್ವಂತ ಮನೆಗಳಿಗೆ ಹೊಸ ವಿದ್ಯುತ್ ಸಂಪರ್ಕ ಕೊಡುವುದರದಲ್ಲಿ ಕಾನೂನು ತೊಡಕುಗಳಿಂದ ವಿದ್ಯುತ್ ಸಂಪರ್ಕವಿಲ್ಲದೇ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಸಿವಿಲ್ ಇಂಜಿನೀಯರ್ ಹೆಚ್.ವಿ. ಮಂಜುನಾಥಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಸರ್ವೋಚ್ಛ ನ್ಯಾಯಾಲಯವು ೧೭-೧೨-೨೦೨೪ ರಂದು ನೀಡಿರುವ ಆದೇಶದ ಪ್ರಕಾರ ನೂತನ ಕಟ್ಟಡಗಳಿಗೆ ನಗರ ಪಾಲಿಕೆಯಿಂದ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ/ ಅಕ್ಯುಪೆನ್ಸಿ ಸರ್ಟಿಫಿಕೇಟ್ (ಓಸಿ ಮತ್ತು ಸಿಸಿ) ಪ್ರಮಾಣಗಳನ್ನು ಒದಗಿಸಿದವರಿಗೆ ಮಾತ್ರ ಹೊಸ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಆದೇಶ ಮಾಡಿದೆ. ಆದೇಶ ಎಲ್ಲಾ ವರ್ಗ, ಎಲ್ಲಾ ನಗರ, ಎಲ್ಲಾ ಕಟ್ಟಡಗಳಿಗೆ ಒಂದೇ ರೀತಿ ಅಳವಡಿಸುವುದು ಅಸಾಧ್ಯ ಹಾಗೂ ಅವೈಜ್ಞಾನಿಕ ಎಂದು ಪತ್ತಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಕಟ್ಟಡ ಪರವಾನಿಗೆ ಪಡೆಯದೇ (ಬಿಲ್ಡಿಂಗ್ ಲೈಸೆನ್ಸ್ ಪಡೆಯದೆ) ಇರುವಂತಹ ಮತ್ತು ಕಾನೂನನ್ನು ಉಲ್ಲಂಘನೆ ಮಾಡಿ ಮತ್ತು ವಾಸೋಪಯೋಗ ನಿವೇಶನದಲ್ಲಿ ಅಕ್ರಮದ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿ ಕಾನೂನು ಉಲ್ಲಂಘಿಸಿದವರಿಗೆ ಮತ್ತು ಪ್ಲಾನ್ ಅಪ್ರೋವಲ್ ಇಲ್ಲದ ಬಿಲ್ಡಿಂಗ್ ಅನಧಿಕೃತ ಕಟ್ಟಿದವರಿಗೆ ಈ ಕಾನೂನುಗಳನ್ನು ಅಳವಡಿಸಿರುವುದು ಸರಿ, ಆದರೆ ಕಟ್ಟಡ ಪರವಾನಿಗೆ ಪಡೆದು ತಮ್ಮ ನಿವೇಶನದ ಜಾಗದಲ್ಲೇ ವಾಸೋಪಯೋಗಕ್ಕಾಗಿ ಕಟ್ಟಿರುವ ಹೊಸ ಬಿಲ್ಡಿಂಗ್ಗಳಿಗೆ ವಿದ್ಯುತ್ ಸಂಪರ್ಕ ಕೊಡುವುದಿಲ್ಲ ಎನ್ನುವ ಆದೇಶ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ದೊಡ್ಡ ಮೆಟ್ರೋ ನಗರಗಳಿಗೆ ಇರುವ ಕಾನೂನುಗಳನ್ನು ಸಣ್ಣ ಪುಟ್ಟ ನಗರಗಳಿಗೂ ಸಹ ಅಳವಡಿಸಿರುವುದರಿಂದ ಅಮಾಯಕ ಜನಗಳು ಬಲಿಯಾಗುತ್ತಾರೆ. ಬಹು ಮಹಡಿ ಕಟ್ಟಡ, ವಾಣಿಜ್ಯ ಕಟ್ಟಡಗಳಿಗೆ ಈ ಆದೇಶಗಳನ್ನು ಪಾಲಿಸಲಿ. ಆದರೆ ವಾಸೋಪಯೋಗಕ್ಕಾಗಿ ಕಟ್ಟಿರುವ ಮನೆಗಳನ್ನು ಸ್ವಲ್ಪ ಸೆಟ್ಬ್ಲಾಕ್ಗಳಲ್ಲಿ ವ್ಯತ್ಯಾಸ ಕಂಡು ಬರುವುದು ಸಹಜ ಮತ್ತು ಮುಂದೆ ಕಟ್ಟುವ ಕಟ್ಟಡಗಳಿಗೆ ಈ ಕ್ರಮ ತೆಗೆದುಕೊಳ್ಳಲಿ ಆದರೆ ಅಲ್ಲಿ ಕಟ್ಟಿ ಮುಕ್ತಾಯಗೊಂಡಿರುವ ಮನೆಗಳಿಗೆ ಈ ಆದೇಶ ಕಾನೂನುಗಳನ್ನು ಅಳವಡಿಸುವುದು ಸೂಕ್ತವಲ್ಲ, ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದವರು ತಿಳಿಸಿದ್ದಾರೆ.
ಕಾನೂನುಗಳು ಇರುವುದು ಆದೇಶಗಳನ್ನು ಹೊರಡಿಸುವುದು ಸಾರ್ವಜನಿಕರ ಅನುಕೂಲಕ್ಕಾಗಿ ಆದರೆ ಇದರಿಂದ ರಾಜ್ಯಾದ್ಯಂತ ಲಕ್ಷಾಂತರ ಸಾಮಾನ್ಯ ಹಾಗೂ ಬಡ ಜನಗಳು ತೊಂದರೆ ಪಡುತ್ತಾ ಕರೆಂಟ್ ಇಲ್ಲದೆ ಪರದಾಡುತ್ತಿದ್ದಾರೆ. ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುತ್ ಸಂಪರ್ಕ ಇಲ್ಲದಿದ್ದರೆ ಸಾರ್ವಜನಿಕರು ಬದುಕಲು ಮುಂದಿನಗತಿ ಏನು ಎಂದವರು ಪ್ರಶ್ನಿಸಿದ್ದಾರೆ.
ಇದರ ಪರಿಣಾಮವಾಗಿ ಮುಂದೆ ಕಟ್ಟಡ ಕಟ್ಟುವ ಜನಗಳ ಸಂಖ್ಯೆ ಕಡಿಮೆ ಅಗುವುದಲ್ಲದೆ, ಈ ಕ್ಷೇತ್ರದ ಮೇಲೆ ಅವಲಂಬಿತವಾದ ಕಟ್ಟಡ ಸಾಮಾಗ್ರಿಗಳ ವ್ಯವಹಾರಗಳು, ಕಟ್ಟಡ ಕಾರ್ಮಿಕರ ಪರಿಸ್ಥಿತಿಗಳು ಹಾಗೂ ದೇಶದ ಹಾಗೂ ರಾಜ್ಯದ ಸಾವಿರಾರು ಕೋಟಿ ಹಣಕಾಸಿನ ವಹಿವಾಟುಗಳು ಏರುಪೇರು ಉಂಟಾಗುತ್ತದೆ. ಮಹಾನಗರ ಪಾಲಿಕೆಗೆ ಆದಾಯ ಕಡಿಮೆ ಆಗುತ್ತದೆ. ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ.ಗಳು ನಷ್ಟವಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಕಾನೂನು ತಜ್ಞರು ಹಾಗೂ ಆಡಳಿತ ಸರ್ಕಾರ ಇದರ ಬಗ್ಗೆ ಅಲೋಚಿಸಿ ಶೀಘ್ರದಲ್ಲೇ ಈ ಸಮಸ್ಯೆಗಳಿಗೆ ಒಂದು ಸೂಕ್ತ ಪರಿಹಾರ ಒದಗಿಸಬೇಕೆಂದು ಅವರು ವಿನಂತಿಸಿದ್ದಾರೆ.