ಎರೆಜಲ ತಯಾರಿಸಿರುವ ಬಾಪೂಜಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯರು:

ದಾವಣಗೆರೆ: ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿನಿಯರು ಕೀಟನಾಶಕಯುಕ್ತ ಎರೆಜಲ ತಯಾರಿಸಿದ್ದಾರೆ.
ಕೆ- ಟೆಕ್ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಉನ್ನತ ಕರ್ನಾಟಕ ಸರ್ಕಾರ ಪ್ರಾಯೋಜಕತ್ವದಲ್ಲಿ, ಪ್ರೊ. ಟಿ. ಚಂದುಕಿಶೋರ್ ಮತ್ತು ಬೆಳಗಾವಿಯ ವಿಟಿಯು ರಿಜಿಸ್ಟ್ರಾರ್ ಎವಲ್ಯೂಯೇಷನ್ ಡಾ.ಬಿ.ಇ.ರಂಗಸ್ವಾಮಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರಾದ ಡಿ. ಸಂಸ್ಕೃತಿ, ಟಿ.ಎಲ್. ಸೃಜನ, ಅಲ್ಪಿಯ ಡಿ. ಬೋಸಿ ಇವರು ಈ ಸಾಧನೆ ಮಾಡಿದ್ದಾರೆ ಎಂದು ಸಹಾಯಕ ಪ್ರಾಧ್ಯಾಪಕ ಪ್ರೊ. ಚಂದುಕಿಶೋರ್ ತಿಳಿಸಿದ್ದಾರೆ.
ಈಗಾಗಲೇ ರೈತರು ರಾಸಾಯನಿಕ ಕೀಟನಾಶಕಗಳನ್ನು ಮತ್ತು ರಾಸಾಯನಿಕ ಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಇಳುವರಿ ಪ್ರಮಾಣ ಕುಸಿತಗೊಂಡಿದ್ದು, ಭೂಮಿಯ ಮೇಲೆಯೂ ಸಾಕಷ್ಟು ಅಡ್ಡ ಪರಿಣಾಮ ಬೀರಿದೆ. ಆದರೆ, ಎರೆಜಲವು ದ್ರವರೂಪದ ಸಾವಯವ ಗೊಬ್ಬರವಾಗಿದ್ದು, ಪೋಷಕಾಂಶಗಳ ಬೆಳವಣಿಗೆ ಜೊತೆಗೆ ರೋಗಗಳ ವಿರುದ್ಧ ಸಸ್ಯಗಳಿಗೆ ಹೋರಾಡುವ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಎರೆಜಲವನ್ನು ಕಿತ್ತಳೆ ಹಣ್ಣಿನ ಸಿಪ್ಪೆ, ಲೋಳೆಸರ, ಕಣಗಿಲೆ ಎಲೆ, ಮಜ್ಜಿಗೆ ಹುಲ್ಲು, ಆಕಳಿನ ಸಗಣಿ, ತ್ಯಾಜ್ಯವಾಗಿರುವ ಸೇವಂತಿಗೆ, ಚೆಂಡುಹೂವು ಹಾಗೂ ಗೋಮೂತ್ರದಿಂದ ತಯಾರಿಸಲಾಗಿದೆ. ಆದ್ದರಿಂದ ಎರೆಜಲದಿಂದ ಸಸ್ಯಗಳಿಗೆ ಕೀಟನಾಶಕ ಗುಣ ಪ್ರಾಕೃತಿಕವಾಗಿ ಒದಗಿಬರುತ್ತದೆ ಎಂದಿದ್ದಾರೆ.
ಈ ಉತ್ಪನ್ನವು ರೈತರಿಗೆ ಕೃಷಿಯಲ್ಲಿ ಸಹಾಯ ಆಗಲಿದ್ದು, ಅವರಿಗೆ ಬೇರೊಂದು ಆದಾಯಕ್ಕೆ ದಾರಿಮಾಡಿಕೊಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ರೈತರನ್ನು ಸ್ವಾವಲಂಬಿಗಳಾಗಿ ಮಾಡಿ ಸ್ವ-ಉದ್ಯೋಗಕ್ಕೆ ದಾರಿ ಮಾಡುತ್ತದೆ ಎಂದು ತಿಳಿಸಿದ್ದಾರೆ.