ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ! ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಸಿಗಬೇಕಿದೆ: ಮಹಾರುದ್ರಪ್ಪ

Photo (1)

ದಾವಣಗೆರೆ: ಶಾಲೆಗಳಲ್ಲಿ ಅಕ್ಷರದ ಜತೆಗೆ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ತುಂಬುವ ಹೊಣೆಯನ್ನು ಶಿಕ್ಷಕರು ಪಾಲಿಸಬೇಕಿದೆ ಎಂದು ಹಿರಿಯ ಶಿಕ್ಷಕರಾದ ಮಹಾರುದ್ರಪ್ಪ ಮೆಣಸಿನಕಾಯಿ ಹೇಳಿದರು. ನಗರದ ಬಂಕಾಪುರದ ನಂಜುಂಡಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಶಿಕ್ಷಕರಿಗೆ ನೆನಪಿನ ಕಾಣಿಕೆ ಹಾಗೂ ನಿವೃತ್ತ ಶಿಕ್ಷಕರಾದ ಜಿ.ವಿ. ಮಂಜಪ್ಪ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.


ಈ ಹಿಂದೆ ವಿದ್ಯಾಸಂಸ್ಥೆಗಳ ಸಂಖ್ಯೆ ಕಡಿಮೆಯಿದ್ದರೂ ವಿದ್ಯಾರ್ಥಿಗಳಿಗೆ ಅಕ್ಷರದ ಜೊತೆಗೆ ಮೌಲ್ಯಯುತ ಶಿಕ್ಷಣ ದೊರಕುತ್ತಿತ್ತು. ಮಾನವೀಯ ಮೌಲ್ಯಗಳನ್ನು ಕಲಿಯುತ್ತಿದ್ದ ಮಕ್ಕಳು ತಮ್ಮ ಪೋಷಕರನ್ನು ತಮ್ಮೊಟ್ಟಿಗೆ ಇಟ್ಟುಕೊಂಡು ಜತನ ಮಾಡುತ್ತಿದ್ದರು ಎಂದರು. ಪ್ರಸ್ತುತ, ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿರುವಂತೆ ವೃದ್ಧಾಶ್ರಮಗಳು ಹೆಚ್ಚಾಗಿವೆ. ಮಕ್ಕಳು ಉನ್ನತ ಶಿಕ್ಷಣ ಕಲಿಯುತ್ತಿದ್ದಾರೆ. ಅದೇರೀತಿ ಉನ್ನತ ಹುದ್ದೆಗಳಲ್ಲು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ತಮ್ಮ ತಂದೆ ತಾಯಿಯರನ್ನು ಕಡೆಗಾಣಿಸಿ ಅವರನ್ನು ವೃದ್ಧಾಶ್ರಮದಲ್ಲಿ ಬಿಡುತ್ತಿದ್ದಾರೆ. ಇದಕ್ಕೆ ಮಾನವೀಯ ಮೌಲ್ಯ ಶಿಕ್ಷಣ ದೊರಕದೇ ಇರುವುದೇ ಕಾರಣ ಎಂದು ಅಭಿಪ್ರಾಯಿಸಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ತುಂಬಲು ಶಿಕ್ಷಕರು ಎಲ್ಲೊ ಒಂದು ಕಡೆ ಎಡವುತ್ತಿದ್ದಾರೆ. ವೃದ್ಧಾಶ್ರಮಗಳು ಹೆಚ್ಚಾಗಲು ತಾವು ಕಾರಣ ಎಂದು ಶಿಕ್ಷಕರು ಭಾವಿಸಿ ಆ ಹೊಣೆಯನ್ನು ಹೊತ್ತುಕೊಂಡಾಗ ಮಾತ್ರ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳು ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿರುವುದು ಕಂಡರೆ ಅವರುಗಳಿಗೆ ಗುರುಗಳ ಮೇಲಿರುವ ಗೌರವ ತಿಳಿಯುತ್ತದೆ. ಇದು ಮುಂದಿನ ವಿದ್ಯಾರ್ಥಿಗಳಿಗೂ ಮಾದರಿಯಾದ ನಡೆಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.


ನಿವೃತ್ತ ಶಿಕ್ಷಕರಾದ ಜಿ.ವಿ. ಮಂಜಪ್ಪ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಪರಿಪೂರ್ಣ ಜ್ಞಾನಕ್ಕಾಗಿ ಅಲ್ಪ ಪ್ರಮಾಣದ ಶಿಕ್ಷೆ ನೀಡುತ್ತಾರೆ. ಆದರೆ, ಪ್ರಸ್ತುತ ಮಕ್ಕಳಿಗೆ ಈಗ ಯಾವ ಶಿಕ್ಷೆಯನ್ನು ನೀಡುವಂತಿಲ್ಲ. ಶಿಕ್ಷೆಯೇ ಇಲ್ಲದ ಶಿಕ್ಷಣವನ್ನು ಈಗಿನ ಮಕ್ಕಳು ಕಲಿಯುತ್ತಿದ್ದಾರೆ ಎಂದರು. ಮಕ್ಕಳಿಗೆ ಅಕ್ಷರ ಕಲಿಸಿಕೊಟ್ಟರೆ ಸಾಲದು, ಅದರ ಜತೆಗೆ ಬದುಕಿಗೆ ಬೇಕಾದ ಮೌಲ್ಯಗಳನ್ನು ಹಾಗೂ ವ್ಯಾವಹಾರಿಕ ಜ್ಞಾನವನ್ನು ನೀಡುವುದು ಒಬ್ಬ ಶಿಕ್ಷಕ ಮಾಡಬೇಕಾದ ಕಾರ್ಯವಾಗಿದೆ ಎಂದು ಹೇಳಿದರು. ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳು ಇಂದು ನಮಗೆಲ್ಲಾ ಸನ್ಮಾನಿಸಿ, ಗೌರವ ತೋರಿಸುತ್ತಿರುವುದು ಹೃದಯ ತುಂಬಿಬಂದಿದೆ. ಅವರುಗಳ ಭವಿಷ್ಯದ ಬದುಕು ಮತ್ತಷ್ಟು ಉಜ್ವಲವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಹನುಮಂತನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಶಿಕ್ಷಕರಾದ ಶಂಭುಲಿಂಗಪ್ಪ, ಎಸ್.ಯು. ಜವಾಯಿ, ಎಸ್‌ಡಿಎಂಸಿ ನಿರ್ದೇಶಕರಾದ ವೀರಭದ್ರಪ್ಪ ಮಾತನಾಡಿದರು. ಶಾಲೆಯ ಶಿಕ್ಷಕರಾದ ಬಿ.ಎ. ಬಿರಾದಾರ್, ಎಸ್.ವಿ. ಸುಧಾರಾಣಿ, ಗಂಗಪ್ಪ ಉಗುರ್‌ಕೋಡ್, ಸಿ. ಮಹೇಂದ್ರಪ್ಪ, ಎಸ್‌ಡಿಎಂಸಿ ಕಾರ್ಯದರ್ಶಿ ಬೆಳ್ಳೊಡಿ ಮಲ್ಲಿಕಾರ್ಜುನ್, ಕೆ. ಬಸವರಾಜಪ್ಪ, ಖಜಾಂಚಿ ಎಂ. ಬನ್ನಯ್ಯಸ್ವಾಮಿ, ನಿರ್ದೇಶಕರಾದ ಕೆ.ಎನ್. ಗಣೇಶ್, ಹಳೆಯ ವಿದ್ಯಾರ್ಥಿಗಳಾದ ಧರ್ಮರಾಜ್, ರಾಜೇಶ್ ಕುಮಾರ್, ಕಾವ್ಯ ಬಿ.ಕೆ., ನೇತ್ರಾ, ಗಣೇಶ್, ಹರೀಶ್, ಮಮತಾ, ಶಿವರಾಜ್, ಕರಿಬಸಪ್ಪ, ಸುನೀತಾ, ಮಹೇಶ್ವರಿ, ಮಂಜುನಾಥ್, ಶಂಕರ್, ಪ್ರಶಾಂತ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!