ಫುಡ್ ಕಿಟ್ ಬದಲು ಆರ್ಥಿಕ ನೆರವು ನೀಡಿ; ಕಾರ್ಮಿಕ ಸಂಘಟನೆಗಳ ಮನವಿ

ದಾವಣಗೆರೆ. ಜು.8; ಫುಡ್ ಕಿಟ್ ವಿತರಿಸುವ ವಿಷಯ ಚರ್ಚಿಸಲು ಎಲ್ಲಾ ಕಟ್ಟಡ ಕಾರ್ಮಿಕ ನಾಯಕರೊಂದಿಗೆ ಸಭೆ ನಡೆಸಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ಜು.೧೨ ರಂದು ಕಾರ್ಮಿಕ ಇಲಾಖೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಸದಸ್ಯರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಹೆಚ್.ಜಿ ಉಮೇಶ್ ಜು.೧೨ ರಂದು ಬೆಳಗ್ಗೆ ೧೧ ಕ್ಕೆ ನಗರದ ಕಾರ್ಮಿಕ ಇಲಾಖೆ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.
ಕೊರೊನಾ ಎರಡನೇ ಅಲೆ ಸದ್ಯಕ್ಕೆ ಇಳಿಮುಖವಾಗಿದೆ . ಆದರೆ ಅದು ಮಾಡಿದ ಸಾವಿನ ಆರ್ಭಟದ ಕರಾಳ ಛಾಯೆಗಳು ಇನ್ನೂ ಮಾಸಿಲ್ಲ. ಲಾಕ್ ಡೌನ್ ನಿಂದ ಕಾರ್ಮಿಕರ ಬದುಕು ಅತಂತ್ರವಾಗಿದೆ. ಕಟ್ಟಡ ಕಾರ್ಮಿಕ ಸಂಘಗಳು ಮಾಸಿಕ 10 ಸಾವಿರ ರೂಪಾಯಿ ಲಾಕ್ಡೌನ್ ಪರಿಹಾರ ಧನ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ಕಟ್ಟಡ ಕಾರ್ಮಿಕ ಸಂಘಗಳು ಐಕ್ಯ ಹೋರಾಟ ನಡೆಸಿವೆ ಆದರೆ ಯಾವುದೇ ಪ್ರಯೋಜನ ದೊರೆತಿಲ್ಲ. ರಾಜ್ಯದ ಕಲ್ಯಾಣ ಮಂಡಳಿಯಲ್ಲಿ 10 ಸಾವಿರ ಕೋಟಿ ಸೆಸ್ ಹಣ ಸಂಗ್ರಹವಾಗಿದ್ದರೂ ಕಲ್ಯಾಣ ಮಂಡಳಿಯು ಕೇವಲ 3 ಸಾವಿರ ರೂಪಾಯಿ ನೆರವು ಪ್ರಕಟಿಸಲಾಯಿತು .
ಇದೂ ಸಂಪೂರ್ಣ ಕಾರ್ಮಿಕರಿಗೆ ತಲುಪಿಲ್ಲ . ಜುಲೈ 1 ರಂದು ನಡೆದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಸಭೆಯಲ್ಲಿ ಕಲ್ಯಾಣ ಸೌಲಭ್ಯಗಳನ್ನು ಹೆಚ್ಚು ಮಾಡಿ ಪರಿಷ್ಕರಿಸಿದ್ದು ಸ್ವಾಗತಾರ್ಹ. ಆದರೆ ಕಾರ್ಮಿಕ ಸಂಘಗಳ ಪ್ರಮುಖ ಬೇಡಿಕೆಗಳಾದ 10 ಸಾವಿರ ರೂಪಾಯಿ ಲಾಕ್ಡೌನ್ ಪರಿಹಾರ , ಮನೆ ನಿರ್ಮಾಣಕ್ಕೆ 5 ಲಕ್ಷ ಸಹಾಯಧನ , ಸಂಪೂರ್ಣ ವೈದ್ಯಕೀಯ ವೆಚ್ಚ ಪಾವತಿ , ಕೋವಿಡ್ ನಿಂದ ಮೃತಪಟ್ಟವರಿಗೆ 5 ಲಕ್ಷ ಪರಿಹಾರ ಹಾಗೂ ಕೋವಿಡ್ ಕೋವಿಡೇತರ ಕಾಯಿಲೆಗಳಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸಬೇಕೆಂಬ ಬೇಡಿಕೆಯನ್ನು ಪರಿಗಣಿಸದಿರುವುದು ಸರಿಯಲ್ಲ .
ನ್ಯಾಯಾಲಯದ ಮಧ್ಯ ಪ್ರವೇಶದಿಂದಾಗಿ ರೇಷನ್ ಕಿಟ್ಗಳನ್ನು ನೀಡಲು ನಿರ್ಧರಿಸಲಾಯಿತಾದರೂ ಆರಂಭದಲ್ಲಿ ಕಳಪೆ ಕಿಟ್ಗಳನ್ನು ವಿತರಿಸಲಾಯಿತು . ಇದನ್ನು ಕಟ್ಟಡ ಕಾರ್ಮಿಕ ಸಮನ್ವಯ ಸಮಿತಿಯಿಂದ ಬಯಲಿಗೆಳೆದು ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡಲಾಯಿತು . ಅಲ್ಲದೆ . ರಾಜ್ಯದ ಜನರ ಆಕ್ರೋಶಕ್ಕೆ ತುತ್ತಾಯಿತು . ಬಳಿಕ ಉತ್ತಮ ಎನ್ನಬಹುದಾದ ಆಹಾರ ಸಾಮಗ್ರಿ ನೀಡಲಾಗುತ್ತಿದೆ . ಆದರ ಕಲ್ಯಾಣ ಮಂಡಳಿಯಲ್ಲಿರುವ ಸೆಸ್ ಹಣದಲ್ಲಿ ಖರೀದಿಸಿದ ಕಿಟ್ಗಳನ್ನು ಶಾಸಕರಿಗೆ ವಿತರಿಸುವ ಯತ್ನ ಸರಿಯಲ್ಲಿ ಮಾತ್ರವಲ್ಲ , ನ್ಯಾಯಾಲಯದ ನಿರ್ದೇಶನದ ಸ್ಪಷ್ಟ ಉಲ್ಲಂಘನೆಯಾಗಿದೆ .
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಟ್ಟಡ ಕಾರ್ಮಿಕ ಸಂಘಗಳ ಕೋರಿಕೆಯನ್ನು ಮಾನ್ಯ ಮಾಡದೆ , ಶಾಸಕರ ಸೂಚನೆ ಮೇರೆಗೆ ಬಿಜೆಪಿ ಕಾರ್ಯಕರ್ತರು ಆಹಾರ ಕಿಟ್ಗಳನ್ನು ವಿತರಣೆ ಮಾಡುತ್ತಿದ್ದಾರೆ . ಕಲ್ಯಾಣ ಮಂಡಳಿಯ ಆಹಾರ ಧಾನ್ಯ ಕಿಟ್ಗಳನ್ನು ಯಾವುದೇ ರಾಜಕೀಯ ಕಾರ್ಯಕರ್ತರು ಮತ್ತು ಮುಖಂಡರು ವಿತರಿಸುವುದು ಸರಿಯಾದುದಲ್ಲ . ಇದಲ್ಲದೆ ಆಹಾರ ಕಿಟ್ ಖರೀದಿಯನ್ನು ಸಗಟು ಮಾರುಕಟ್ಟೆ ಮೌಲ್ಯಕ್ಕಿಂತ ಶೇ 30 ರಿಂದ 40 ರಷ್ಟು ಹೆಚ್ಚುವರಿ ಬೆಲೆ ನಿಗದಿಪಡಿಸಿ ಐದು ಸಂಸ್ಥೆಗಳ ಮೂಲಕ ಖರೀದಿಸಲಾಗಿದೆ . ಇದರಿಂದ ಸುಮಾರು 10-15 ಕೋಟಿ ಹಣ ಅವ್ಯವಹಾರ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ .
ಟೂಲ್ಕಿಟ್ , ಆಂಬ್ಯೂಲೆನ್ಸ್ಗಳು ಹಾಗೂ ಔಷಧಿ ಕಿಟ್ಗಳ ಖರೀದಿ ಮತ್ತು 2021 ರ ಕ್ಯಾಲೆಂಡರ್ ಗಳು ಕಾರ್ಮಿಕರಿಗೆ ತಲುಪಿಲ್ಲಿ ಮಾತ್ರವಲ್ಲ ಅವುಗಳ ವಿಷಯದಲ್ಲೂ ಕೋಟ್ಯಾಂತರ ರೂಪಾಯಿ ಮಂಡಳಿಯಲ್ಲಿ ಹಣ ದುರುಪಯೋಗವಾಗಿದೆ ಈ ಕುರಿತಾಗಿ ಸಮಗ್ರ ತನಿಖೆ ನಡೆಯಬೇಕು .ಫುಡ್ ಕಿಟ್ ವಿತರಿಸುವ ವಿಷಯ ಚರ್ಚಿಸಲು ಎಲ್ಲಾ ಕಟ್ಟಡ ಕಾರ್ಮಿಕ ನಾಯಕರೊಂದಿಗೆ ಸಭೆ ನಡೆಸಬೇಕು . ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್ ಮಾಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. 2006-07 ರಿಂದ ನೋಂದಾಯಿತ ಕಾರ್ಮಿಕರಿಗೆ ಮ್ಯಾನುಯೆಲ್ ಎಂಟ್ರಿ ಕಾರ್ಮಿಕರಿಗೆ ಕೋವಿಡೆ ಪರಿಹಾರ ಹಣ ಒದಗಿಸಿ . ಬಾಕಿ ಉಳಿದಿರುವ ಕ್ಲೇಮ್ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು.
ಕಾರ್ಮಿಕರಿಗೆ ಸಹಾಯ ಮಾಡುವ ನೆಪದಲ್ಲಿ ಕಾರ್ಮಿಕ ಇಲಾಖೆ ಒಳಗೆ ಮಧ್ಯವರ್ತಿಗಳು ಬರದಂತೆ ತಡೆಗಟ್ಟಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಟಡಿಯಲ್ಲಿ ವಿ . ಲಕ್ಷ್ಮಣ್, ಮಂಜುನಾಥ್ ಕುಕ್ಕುವಾಡ,ಗುಡ್ಡಪ್ಪ,ಆನಂದರಾಜು ಇದ್ದರು.