ಲಾಕ್ಡೌನ್ಗೂ ಮುನ್ನವೇ ಅನ್ನಕ್ಕಾಗಿ ಸುಡುಗಾಡು ಸಿದ್ದರ ಮನವಿ: ಜಿಲ್ಲಾಡಳಿತದಿಂದ ಮನವಿಗೆ ಸ್ಪಂದಿಸಿ ಆಹಾರದ ಸಾಮಗ್ರಿ ವಿತರಣೆ

ಹೆಚ್ ಎಂ ಪಿ ಕುಮಾರ್
ದಾವಣಗೆರೆ: ಲಾಕ್ಡೌನ್ ಆರಂಭವಾಗುವ ಮುನ್ನವೇ ಸುಡುಗಾಡು ಸಿದ್ಧರ ಜನಾಂಗಕ್ಕೆ ಅನ್ನಾಹಾರ ಸಮಸ್ಯೆ ಸೃಷ್ಟಿಯಾಗಿದೆ. ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಈ ಜನಾಂಗದವರಿಗೆ ಆಹಾರದ ಕಿಟ್ ವಿತರಣೆಯಾಗಿತ್ತು. ಈ ಬಾರಿ ಲಾಕ್ಡೌನ್ಗೂ ಮೊದಲೇ ಅವರ ವ್ಯಾಪಾರ ವಹಿವಾಟುಗಳ ಸ್ಥಗಿತವಾಗಿದ್ದು, ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು, ನಮಗೇನು ಹಣ ಬೇಡ, ಅನ್ನಕ್ಕೊಂದು ದಾರಿ ಮಾಡಿಕೊಟ್ರೆ ಸಾಕು ಎಂದು ಮುಂಜಾನೆ ವಿಡಿಯೋ ಮಾಡಿ ವೈರಲ್ ಮಾಡಲಾಗಿತ್ತು, ಇದೀಗ ಇವರ ಮನವಿಗೆ ಸ್ಪಂದಿಸಿದ ದಾವಣಗೆರೆ ಜಿಲ್ಲಾಡಳಿತ, ಪ್ರತಿ ಕುಟುಂಬಕ್ಕೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ರಾತ್ರಿ ವೇಲೆ ಅವರ ಸ್ಥಳಕ್ಕೆ ತೆರಳಿ ವಿತರಣೆ ಮಾಡಿದ್ರು.
ಬಡತನಕ್ಕೆ ಸಾಕ್ಷಿ ಎಂಬತಿರುವ ಗುಡಿಸಿಲು ಹಾಗೂ ಟೆಂಟ್ಗಳು… ಅದರಲ್ಲಿ ವಾಸಿಸುತ್ತಿರುವ ಸುಡುಗಾಡು ಸಿದ್ಧರ ಅಲೆಮಾರಿ ಜನಾಂಗ… ದೊಡ್ಡವರಿಗಿಂತ ಮಕ್ಕಳೇ ಹೆಚ್ಚಾಗಿರುವ ಪ್ರದೇಶ… ಫುಡ್ ಕಿಟ್ಗಳಿಗೆ ಅಂಗಲಾಚುತ್ತಿರುವ ಜನರು…ಇವರೆಲ್ಲಾ ದಾವಣಗೆರೆ ನಗರದ ಹೊರವಲಯದ ಕರೂರು ಇಂಡಸ್ಟ್ರಿಯಲ್ ಏರಿಯಾದ ಬಳಿ. ವಾಸವಾಗಿದ್ದಾರೆ.
ಇವರು ಸುಡುಗಾಡು ಸಿದ್ಧರ ಜನಾಂಗದ ಅಲೆಮಾರಿ ಜನರು. ಇವರಿಗೆ ಇಂಥದೇ ಎಂಬ ನಿಶ್ವಿತ ಪ್ರದೇಶವಿಲ್ಲ. ಬ್ಯಾಗ್ನ ಜಿಪ್ ಹಾಕುವುದು… ಬೀದಿ ಬದಿ ಉಂಗುರ, ಹೇರ್ ಪಿನ್ ಮೊದಲಾದ ವಸ್ತುಗಳ ವ್ವ್ಯಾಪಾರದಿಂದ ಜೀವನ ನಡೆಸುತ್ತಾರೆ. ಜನತಾ ಕರ್ಫ್ಯೂ ಆರಂಭವಾದ ದಿನದಿಂದ ಅವರ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಬಂದ್ ಆಗಿದೆ. ಬಡತನಕ್ಕೆ ಮಕ್ಕಳು ಹೆಚ್ಚು ಎಂಬ ಗಾದೆಯಂತೆ ಆ ಪ್ರದೇಶದಲ್ಲಿ ದೊಡ್ಡವರಿಗಿಂತ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ಪ್ರತಿಯೊಬ್ಬರು ನಿತ್ಯದ ಅನ್ನಕ್ಕಾಗಿ ಪರದಾಡುವಂತಾಗಿದೆ. ದುಡ್ಡು ಬೇಡ ದುಗ್ಗಾಣಿ ಬೇಡ ನಿತ್ಯದ ಅನ್ನದ ಏನಾದ್ರೂ ವ್ಯವಸ್ಥೆ ಮಾಡಿಕೊಟ್ರೆ ಸಾಕು ಎಂದು ಅಂಗಲಾಚುತ್ತಿದ್ದರು.

ಕಳೆದ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ಈ ಜನಾಂಗವರು ಯಾವುದೇ ದುಡಿಮೆ ಇಲ್ಲದೇ ಸಾಕಷ್ಟು ಸಂಕಷ್ಟ ಅನುಭವಿಸಿದ್ರು. ಆಗ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ವಿತರಿಸಿದ ಫುಡ್ ಕಿಟ್ಗಳು ಅವರ ಸಂಕಷ್ಟಕ್ಕೆ ಪರಿಹಾರ ಒದಗಿಸಿದ್ದವು. ಈ ಬಾರಿಯೂ ಸಹ ಜಿಲ್ಲಾಡಳಿತದಿಂದ ಫುಡ್ ಕಿಟ್ ವಿತರಿಸಿಬೇಕು ಎಂದು ಮಾಧ್ಯಮದ ಎದುರು ಅಂಗಲಾಚಿ ಮನವಿ ಮಾಡಿದ್ರು.
ಕರೊನಾ ಎರಡನೇ ಅಲೆ ಹಿನ್ನೆಲೆ ಆರಂಭವಾದ ಜನತಾ ಕರ್ಫ್ಯೂದಿಂದ ಬೀದಿ ಬದಿ ವ್ಯಾಪಾರಿಗಳು, ಅಲೆಮಾರಿಗಳು ಸೇರಿದಂತೆ ದೈನಂದಿನ ದುಡಿಮೆ ಆಧರಿಸಿ ಜೀವನ ನಡೆಸುವರು ಜೀವನ ಸಂಕಷ್ಟಕ್ಕೆ ಸಿಲುಕಿದೆ. ನಾಳೆಯಿಂದ ಲಾಕ್ಡೌನ್ ಜಾರಿಯಾಗಲಿದ್ದು, ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.
ಇವರುಗಳ ಮನವಿಗೆ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು, ಫುಡ್ ಕಿಟ್ ವ್ಯವಸ್ಥೆ ಮಾಡಿಕೊಡಲಾಗಿದೆ.ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ ಹಾಗೂ ದಾವಣಗೆರೆ ತಹಸೀಲ್ದಾರ್ ಗಿರೀಶ್ ಸುಡುಗಾಡು ಸಿದ್ದರು ವಾಸವಿದ್ದ ಸ್ಥಳಕ್ಕೆ ತೆರಳಿ ಆಹಾರದ ಸಾಮಗ್ರಿಗಳನ್ನು ವಿತರಣೆ ಮಾಡಿದ್ದಾರೆ, ಒಂದು ವಾರದ ನಂತರ ಮತ್ತೆ ಆಹಾರದ ಸಾಮಗ್ರಿಗಳನ್ನು ನೀಡಲಾಗುತ್ತೆ ಎಂದು ತಿಳಿಸಿದ್ದಾರೆ.