ಬಳ್ಳಾರಿಯಲ್ಲಿ ಶ್ರೀ ಶೈಲ ಜಗದ್ಗುರುಗಳ ಪಾದ ಪೂಜೆ ನೆರವೇರಿಸಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ

ನಮ್ಮ ಸ್ವಗೃಹಕ್ಕೆ ಆಗಮಿಸಿ ಆಶೀರ್ವದಿಸಿದ ಶ್ರೀ ಶ್ರೀ ಶ್ರೀ ಶ್ರೀಶೈಲ ಜಗದ್ಗುರುಗಳಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು – ಗಾಲಿ ಜನಾರ್ದನ ರೆಡ್ಡಿ
ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯ ಬಳ್ಳಾರಿಯ ನಿವಾಸದ ಸಭಾಂಗಣಕ್ಕೆ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು ಡಾಕ್ಟರ್ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸಿ ಭಕ್ತವೃಂದಕ್ಕೆ ಆಶೀರ್ವದಿಸುವುದರ ಜತೆಗೆ ಶ್ರೀ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಶ್ರೀಕ್ಷೇತ್ರ ಯಡೂರದಿಂದ ದಿನಾಂಕ 29-10-2022 ರಂದು ಆರಂಭವಾಗಲಿರುವ ಶ್ರೀಶೈಲದವರೆಗಿನ ಪಾದಯಾತ್ರೆ ಕುರಿತು ಪೂರ್ವಸಿದ್ಧತಾ ಸಭೆಯಲ್ಲಿ ಮಾರ್ಗದರ್ಶನ ಹಾಗೂ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರಿಗೆ ಸಚಿವರಾದ ಬಿ.ಶ್ರೀರಾಮುಲು ಅವರು ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದು ಭಕ್ತಿ ಧರ್ಮದ ಕಾರ್ಯಗಳನ್ನು ಸತತವಾಗಿ ನಡೆಸಿಕೊಂಡು ಬರುವುದರಿಂದಲೇ ಇಂದು ನಮ್ಮ ದೇಶದಲ್ಲಿ ನೆಮ್ಮದಿಯನ್ನು ಕಾಣುತ್ತಿದ್ದೇವೆಂದು ಹೇಳಿದರು.
ತದನಂತರ ಮಾಜಿ ಸಚಿವರ ನಿವಾಸದಲ್ಲಿ ಜನಾರ್ದನ ರೆಡ್ಡಿಯವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಅರುಣಾ ಸೇರಿದಂತೆ ಕುಟುಂಬದ ಸದಸ್ಯರುಗಳು ಸೇರಿ ಜಗದ್ಗುರುಗಳ ಪಾದ ಪೂಜೆಯನ್ನು ಕೈಗೊಳ್ಳಲಾಯಿತು.
ಒಂದೇ ವಾರದಲ್ಲಿ ಸತತವಾಗಿ 3 ದಿನಗಳ ಕಾಲ ನಾನು ಜಗದ್ಗುರುಗಳ ಜೊತೆ ವಿವಿಧ ತಾಲ್ಲೂಕಿನ ಸಮಾಜದ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ನನ್ನ ಪೂರ್ವಜನ್ಮದ ಪುಣ್ಯವೇ ಸರಿ. ಧಾರ್ಮಿಕತೆಯನ್ನು ಭದ್ರಗೊಳಿಸುವ ಜತೆಗೆ ಯುವ ಸಮೂಹಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಿ ಧರ್ಮದ ಜಾಗೃತಿಯನ್ನು ಮೂಡಿಸುವ ಉದ್ದೇಶದ ಭಕ್ತಿ ಭಾವನೆಯ ಐತಿಹಾಸಿಕ ಪಾದಯಾತ್ರೆ ಯಶಸ್ವಿಯಾಗಲೆಂದು ನಾವೆಲ್ಲರೂ ಹಾರೈಸೋಣ. ಜತೆಗೆ ನಮ್ಮ ಕೈಲಾದ ಸೇವೆಯನ್ನು ಸಲ್ಲಿಸಿ ಜಗದ್ಗುರುಗಳ ಕೃಪೆಗೆ ಪಾತ್ರರಾಗೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಶಾಸಕರಾದ ಜಿ ಸೋಮಶೇಖರರೆಡ್ಡಿ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರುಸಿದ್ದಯ್ಯಸ್ವಾಮಿ, ಡಾಕ್ಟರ್ ವೆಂಕಟಮಹಿಪಾಲ್, ಮಹೇಶ್ವರಸ್ವಾಮಿ, ಗುರುಲಿಂಗನಗೌಡ, ತಿಮ್ಮಾರೆಡ್ಡಿ, ಸೇರಿದಂತೆ ಅನೇಕ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.