ಪರಿಶಿಷ್ಟರ ಮಾದರಿಯಲ್ಲಿ ಪ್ರವರ್ಗ-೧ರ ವಿದ್ಯಾರ್ಥಿಗಳಿಗೂ ಶುಲ್ಕ ರಹಿತಕ್ಕೆ ಆಗ್ರಹ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕ ರಹಿತವಾಗಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅದನ್ನ ಪ್ರವರ್ಗ-೧ರ ವಿದ್ಯಾರ್ಥಿಗಳಿಗೂ ನೀಡಬೇಕೆಂದು ಜಿಲ್ಲಾ ಪ್ರವರ್ಗ-೧ರ ಜಾತಿ ಒಕ್ಕೂಟ ಜಿಲ್ಲಾಧ್ಯಕ್ಷ ಶ್ರೀನಿವಾಸ್ ತುರ್ಚಘಟ್ಟ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಪ್ರವರ್ಗ-೧ ರ ವಿದ್ಯಾರ್ಥಿಗಳಿಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಿಗುವ ಸೌಲಭ್ಯದಂತೆ ಶುಲ್ಕ ರಹಿತವಾಗಿ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು. ಈ ಸಾಲಿನಲ್ಲಿ ಅದನ್ನು ಬದಲಾಯಿಸಿ, ಓಬಿಸಿಗೆ ಸೇರಿಸಿ ದಾಖಲಿಸಿಕೊಂಡಿದ್ದು, ಶುಲ್ಕ ಪಾವತಿ ಮಾಡುವುದು ಖಡ್ಡಾಯವೆಂದು ದಾವಿವಿ ಹೇಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಾವಿವಿಯಲ್ಲಿ ಸರ್ಕಾರದ ಆದೇಶದಂತೆ ಶುಲ್ಕ ಕಟ್ಟಲೇಬೇಕಿದ್ದು, ನಂತರ ಸರ್ಕಾರ ಖಾತೆಗೆ ಹಣ ವಾಪಾಸು ಮಾಡುವುದಾಗಿ ಹೇಳುತ್ತಾರೆ. ಪ್ರವರ್ಗ-೧ ಕ್ಕೆ ಸೇರುವ ೯೫ ಜಾತಿಗಳು ಆರ್ಥಿಕ, ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು, ಸರಕಾರದ ಈ ಆದೇಶದಿಂದ ಶುಲ್ಕ ಪಾವತಿಸಲಾಗದೆ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದಿಂದ ಹಿಂದುಳಿಯಬೇಕಾಗುತ್ತದೆ ಎಂದರು.
ಕೂಡಲೇ ದಾವಿವಿ ಪ್ರವರ್ಗ-೧ ರ ವಿದ್ಯಾರ್ಥಿಗಳಿಗೆ ಪರಿಶಿಷ್ಟರಿಗೆ ನೀಡುವ ಸವಲತ್ತುಗಳನ್ನು ನೀಡಬೇಕು. ಇಲ್ಲವಾದರೆ ದಾವಣಗೆರೆ ವಿಶ್ವ ವಿದ್ಯಾನಿಲಯದಿಂದ ಧರಣಿ ನಡೆಸಲಾಗುವು ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷೆ ಮಂಜಮ್ಮ, ಗೊಲ್ಲರ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಬೋಜರಾಜಪ್ಪ, ಹನುಮಂತರಾಜು, ದೇವೆಂದ್ರಪ್ಪ, ಬಿ. ಪ್ರಭು, ಭರತ್ ಮೈಲಾರ್, ವಿಜಯ್ ಕುಮಾರ್ ಸೇರಿದಂತೆ ಮತ್ತಿತರರು ಗೋಷ್ಠಿಯಲ್ಲಿದ್ದು.