ಸರ್ಕಾರ ಹಾಸ್ಟೆಲ್ ವ್ಯವಸ್ಥೆ ಒದಗಿಸಿದ್ರೂ ಸಾರಿಗೆ ವ್ಯವಸ್ಥೆ ಇಲ್ಲದೆ ಹೈರಾಣಾದ ವಿದ್ಯಾರ್ಥಿಗಳು.!

ದಾವಣಗೆರೆ: ದೂರದ ಹಳ್ಳಿಗಳಿಂದ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಬಂದು ಊಟ ವಸತಿ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಾರೆ ಎನ್ನುವ ಕಾರಣಕ್ಕೆ ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಬಿಸಿಎಂ ಹಾಸ್ಟೆಲ್ಗಳನ್ನು ನಿರ್ಮಿಸಿ ಎಲ್ಲರೂ ವಿದ್ಯಾವಂತರಾಗಲಿ ಎನ್ನುವ ಸರ್ಕಾರದ ಅಭಿಲಾಷೆ ಕೆಲವು ಕಾರಣಗಳಿಂದ ವಿದ್ಯಾರ್ಥಿಗಳಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದೆ.
ನಗರದಿಂದ ಎಂಟು ಕಿಲೋಮೀಟರ್ ದೂರದ ಕುಂದುವಾಡದ ಬಳಿ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಬಾಲಕರ ಹಾಸ್ಟೆಲ್ ನಿರ್ಮಿಸಿದ್ದು ಇಲ್ಲಿ ಸುಮಾರು 120 ವಿದ್ಯಾರ್ಥಿಗಳು ವಸತಿ ಸೌಕರ್ಯ ಪಡೆದಿದ್ದಾರೆ. ಪ್ರತಿದಿನ ಈ ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಆಸರೆ ಬಯಸುತ್ತಿದ್ದು, ಪ್ರತಿದಿನ ಸಾವಿರಾರು ವಾಹನಗಳು ಓಡಾಡುವ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳಿಗೆ ಅನಾಹುತವಾದರೆ ಅವರ ಭವಿಷ್ಯದ ಗತಿಯೇನು, ಅವರನ್ನು ನಂಬಿದ ಪೋಷಕರ ಗತಿಯೇನು ಎಂಬುದನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಯೋಚಿಸಬೇಕಾಗಿದೆ.
ಸರ್ಕಾರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡುವಾಗ ಕಡ್ಡಾಯವಾಗಿ ಸಾರಿಗೆ ವ್ಯವಸ್ಥೆ ಮಾಡಬೇಕು ಎಂಬುದು ಎಲ್ಲಾ ವಿದ್ಯಾರ್ಥಿಗಳ ಆಗ್ರಹವಾಗಿದ್ದು, ಇದು ಕೇವಲ ಇದೊಂದೇ ಹಾಸ್ಟೆಲ್ ಸಮಸ್ಯೆಯಲ್ಲ, ಎಲ್ಲಾ ಹಾಸ್ಟೆಲ್ ಗಳಲ್ಲಿಯೂ ಸಾರಿಗೆ ಸಮಸ್ಯೆ ಇದ್ದು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಇದರ ಬಗ್ಗೆ ಗಮನ ಹರಿಸಬೇಕಾದ ವಿನಂತಿ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಗಂಗಪ್ಪ ಅವರನ್ನು ಇದರ ಬಗ್ಗೆ ಫೋನ್ ಮೂಲಕ ಸಂಪರ್ಕಿಸಿದಾಗ ನಮಗೆ ಇಲ್ಲಿಯವರೆಗೂ ಇದರ ಬಗ್ಗೆ ಯಾವುದೇ ದೂರು ಬಂದಿರುವುದಿಲ್ಲ ತಾವು ಈಗ ಇದರ ಬಗ್ಗೆ ಮಾಹಿತಿ ನೀಡಿರುವಿರಿ ನಾವು ತಕ್ಷಣವೇ ಇದರ ಬಗ್ಗೆ ಕ್ರಮ ತೆಗೆದುಕೊಂಡು ಸಾರಿಗೆ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಭರವಸೆ ನೀಡಿದ್ದಾರೆ, ಈ ಭರವಸೆ ಆದಷ್ಟು ಬೇಗ ನೆರವೇರಲಿ ಎಂಬುದೇ ನಮ್ಮ ಬಯಕೆ.
ಕೆ.ಎಲ್ ಹರೀಶ್ ಬಸಾಪುರ,
ದಾವಣಗೆರೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥರು