ಮೈಸೂರಲ್ಲಿ ಪಂಚರತ್ನ ರಥಯಾತ್ರೆಯ ಅದ್ದೂರಿ ಸಮಾರೋಪ

ಮೈಸೂರು: ಜೆಡಿಎಸ್ನ ಪಂಚರತ್ನ ರಥಯಾತ್ರೆಯ ಸಮಾರೋಪವು ಭಾನುವಾರ ಸಂಜೆ ಮೈಸೂರು ನಗರದಲ್ಲಿ ಆರಂಭವಾಯಿತು.
ಸುಡುವ ಬಿಸಿಲನ್ನು ಲೆಕ್ಕಿಸದೇ ಸೇರಿದ್ದ ಲಕ್ಷಾಂತರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜಯಘೋಷಗಳ ನಡುವೆ ಕಾರ್ಯಕ್ರಮ ನಡೆಯಿತು.
ನಗರದ ಉತ್ತನಹಳ್ಳಿ ರಿಂಗ್ ರಸ್ತೆಯ ಜ್ವಾಲಾಮುಖಿ ತ್ರಿಪುರ ದೇಗುಲ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪಕ್ಷದ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪರ ಘೋಷಣೆಗಳು ಮುಗಿಲು ಮುಟ್ಟಿದವು. ಪಕ್ಷದ ಬಾವುಟಗಳು ಹಾರಾಡಿದವು.
ವೇದಿಕೆಯಲ್ಲಿ ನಿರ್ಮಾಣಗೊಂಡಿದ್ದ ರ್ಯಾಂಪ್ ನಲ್ಲಿ ಅನಾರೋಗ್ಯದ ಕಾರಣ ಗಾಲಿಕುರ್ಚಿಯಲ್ಲಿ ಕುಳಿತ ಎಚ್.ಡಿ.ದೇವೇಗೌಡ ಜನರತ್ತ ಕೈಬೀಸಿದರು. ಅವರೊಂದಿಗೆ ಎಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ ಹೆಜ್ಜೆ ಹಾಕಿದರು. ಜನಸ್ತೋಮ ನೋಡಿದ ದೇವೇಗೌಡ ಅವರು ಭಾವುಕರಾದರು.