ಮಗು ಪತ್ತೆ ಪ್ರಕರಣದಲ್ಲಿ ಅಜ್ಜಿಗೆ ಸಿಕ್ತು 25 ಸಾವಿರ ಬಹುಮಾನ! ನಾಗರಿಕ ಸಹಕಾರಕ್ಕೆ ಸ್ಪಂದಿಸಿದ ದಾವಣಗೆರೆ ಪೊಲೀಸ್: ಇದು ಗರುಡವಾಯ್ಸ್ ಇಂಪ್ಯಾಕ್ಟ್

baby found lady felicitade by sp rishyanth

ದಾವಣಗೆರೆ: ಅಪಹರಣಕ್ಕೊಳಗಾದ ಒಂದು ದಿನದ ಗಂಡು ಮಗು ಮತ್ತು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ 25 ಸಾವಿರ ರೂಗಳ ನಗದು ಬಹುಮಾನ ಘೋಷಣೆ ಮಾಡಲಾಗಿತ್ತು. ಈ ಬಗ್ಗೆ ಗರುಡವಾಯ್ಸ್ ಮಗು ಪತ್ತೆ ಪ್ರಕರಣದ ಬಹುಮಾನ ಮೊತ್ತ ಯಾರಿಗೆ ಸಿಗಲಿದೆ ಎಂಬುದರ ಕುರಿತು ವಿವರವಾದ ಸುದ್ದಿ ಪ್ರಕಟಿಸಿತ್ತು.

ಇಂದು ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಗು ಪತ್ತೆಗೆ ಸಹಕರಿಸಿದ ಚಂದ್ರಮ್ಮ ಅವರಿಗೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸನ್ಮಾನಿಸಿ ಅಜ್ಜಿ ಚಂದ್ರಮ್ಮಗೆ 25 ಸಾವಿರ ರೂಗಳ ನಗದು ಬಹುಮಾನ ನೀಡಿದರು. ಹಾಗೆಯೇ ಈ ಪ್ರಕರಣದಲ್ಲಿ ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಗಳಾದ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ, ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿಲ್ಪ ವೈ.ಎಸ್, ಪಿಎಸ್‌ಐ ಮಾಳವ್ವ ಹೆಚ್. ಶಮೀಮ್ ಉನ್ನಿಸಾ, ಕೆಟಿಜೆ ನಗರ ಪಿಎಸ್‌ಐ ಪ್ರಭು ಡಿ. ಕೆಳಗಿನಮನೆ, ಪಿಎಸ್‌ಐ ಬಿ.ಎಸ್. ಅರವಿಂದ್ ಪೇದೆಗಳಾದ ರಸೂಲ್ ಸಾಬ್, ರಾಘವೇಂದ್ರ, ಗೋವಿಂದಪ್ಪ ಮುನೆಗೌಡ, ಕೆ.ಕೆ ಗಿರೀಶ್ ಗೌಡ ಇವರನ್ನು ಸನ್ಮಾನಿಸಿ, ಪ್ರಶಂಸನಾಪತ್ರ ವಿತರಿಸಿದರು.

ಈ ವೇಳೆ ಮಾತನಾಡಿದ ಎಸ್‌ಪಿ ಸಿ.ಬಿ. ರಿಷ್ಯಂತ್ ಈ ರೀತಿಯ ಪ್ರಕರಣಗಳಲ್ಲಿ ನಾಗರಿಕರ ಸಹಕಾರ ಬಹುಮುಖ್ಯವಾಗಿರುತ್ತದೆ. ನಾಗರಿಕರ ಸಹಕಾರವಿಲ್ಲದೆ ಇಂತಹ ಪ್ರಕರಣಗಳು ಬೇಧಿಸುವುದು ಕಷ್ಟ. ನಮ್ಮ ಸಿಬ್ಬಂದಿಗಳು ಸಹ ಚಾಕಚಕ್ಯತೆಯಿಂದ ಮನೆ ಮನೆಗೆ ಹೋಗಿ ಪರಿಶೀಲಿಸಿ ತುಂಬಾ ಶ್ರಮಪಟ್ಟು ಮಗು ಪತ್ತೆ ಕಾರ್ಯಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಗು ಅಪಹರಣದ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ತನಿಖಾ ಕಾರ್ಯ ಪ್ರಗತಿಯಲ್ಲಿದೆ ಎಂದರು.

ನಗರ ಉಪವಿಭಾಗದ ಡಿ ವೈ ಎಸ್ ಪಿ ನರಸಿಂಹ ತಾಮ್ರಧ್ವಜ ಅವರಿಗೆ ಪ್ರಶಂಸನೀಯ ಪತ್ರ ಹಾಗೂ ಸನ್ಮಾನಿಸಿದ ಎಸ್ ಪಿ ರಿಷ್ಯಂತ್

ನಗದು ಬಹುಮಾನ ಪಡೆದ ಚಂದ್ರಮ್ಮ ಮಾತನಾಡಿ, ಓರ್ವ ಮಹಿಳೆ ಬಂದು ಟಾಯ್ಲೇಟ್ ಹೋಗಿ ಬರುತ್ತೇನೆ ಮಗುವನ್ನ ಸ್ವಲ್ಪ ನೋಡಿಕೊಳ್ಳಿ ಎಂದು ನನಗೆ ನೀಡಿ ಹೋದಳು, ಸಂಜೆ ಆದರೂ ಬರಲಿಲ್ಲ. ನೆರೆದಿದ್ದವರಲ್ಲಿ ಕೆಲವರು ಮಗುವನ್ನ ನನಗೆ ನೀಡಿ ಇಂತಿಷ್ಟೂ ಹಣ ನೀಡುತ್ತೇವೆ ಎಂದು ಕೇಳಿಕೊಂಡರೂ ಮಗುವನ್ನ ನಾನು ಯಾರಿಗೂ ನೀಡಲಿಲ್ಲ, ಮಗುವಿಗೆ ಹಾಲು ನೀಡಿದ್ವಿ ಆದರೆ ಅಳುವುದನ್ನ ನಿಲ್ಲಿಸಿಲಿಲ್ಲ. ಕೊನೆಗೆ ನನ್ನ ಮಗನ ಸಹಾಯದಿಂದ ನಗರದ ಬಡಾವಣೆ ಠಾಣೆಗೆ ಹೋಗಿ ಇದ್ದ ವಿಷಯವನ್ನ ಹೇಳಿದ ನಂತರ ಸಿಜೆ ಆಸ್ಪತ್ರೆಗೆ ಹೋದ್ವಿ, ಅಲ್ಲಿಯವರೆಗೆ ನನಗೆ ಇದು ಅಪಹರಣವಾದ ಮಗು ಎಂದು ಗೊತ್ತಿರಲಿಲ್ಲ ಅಂತ ಹೇಳಿದ್ರು ಅಜ್ಜಿ ಚಂದ್ರಮ್ಮ, ಮಗುವನ್ನ ತಾಯಿ ಮಡಿಲಿಗೆ ಸೇರಿಸಿದ ಧನ್ಯತಾ ಭಾವನೆ ಅಜ್ಜಿಯಲ್ಲಿ ಮೂಡಿತ್ತು.

ಮಗು ಅಪಹರಣದ ಹಿನ್ನೆಲೆ:

ದಿನಾಂಕ 17-03-2022 ರಂದು ಪಿರ್ಯಾದಿಯಾದ ಇಸ್ಮಾಯಿಲ್ ತಂದೆ ಕಟ್ಟಬಾವಿ ಜಮಾಲ್ ರಾಜ್ ಗುಂಡಿನ ಕೆರೆ, ಹರಪನಹಳ್ಳಿ ತಾ|| ರವರು ಠಾಣೆಗೆ ಹಾಜರಾಗಿ ದಿನಾಂಕ 15-03-2022 ರಂದು ಮದ್ಯಾಹ್ನ 2.30 ಗಂಟೆ ಸಮಯದಲ್ಲ. 108 ಅಂಬುಲೆನ್ಸ್ನಲ್ಲಿ ತನ್ನ ಹೆಂಡತಿಯಾದ ಸಲ್ಮಾಳನ್ನು ಹೆರಿಗೆಗಾಗಿ ದಾವಣಗೆರೆ ಚಾಮರಾಜ ಪೇಟೆ ಸರ್ಕಲ್‌ನಲ್ಲಿರುವ ಮಹಿಳಾ & ಮಕ್ಕಳ ಹಳೆ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಸಂಜೆ ಸಿಜೆರಿನ್ ಮಾಡಿದಾಗ ಗಂಡು ಮಗು ಜನಿಸಿತ್ತು.

ಸದರಿ ಮಗುವನ್ನು ರಾತ್ರಿ ಸುಮಾರು 8.45 ಗಂಟೆಗೆ ಆಸ್ಪತ್ರೆಯ ನರ್ಸ್ ರವರು ಮಗುವನ್ನು ಪಾಲಕರಾದ ನಮಗೆ ಕೊಡದೇ ಬೇರೆಯವರಿಗೆ ಕೊಟ್ಟಿರುತ್ತಾರೆ. ಆದ್ದರಿಂದ ನನ್ನ ಮಗುವನ್ನು ತೆಗೆದುಕೊಂಡು ಹೋಗಿರುವ ಮಹಿಳೆ ಮೇಲೆ ಹಾಗೂ ಆಸ್ಪತ್ರೆಯ ಅಧಿಕಾರಿ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅಂತ ಇದ್ದ ದೂರಿನ ಮೇರೆಗೆ ದಾವಣಗೆರೆ ಮಹಿಳಾ ತಾನೆ ಗುನ್ನೆ ನಂ-47/2022 ಕಲಂ 363  ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ಸದರಿ ಪ್ರಕರಣದಲ್ಲಿ ಅಪಹರಣ ಕ್ಕೊಳಗಾದ ಒಂದು ದಿನದ ಗಂಡು ಮಗು ಮತ್ತು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ಶ್ರೀ ಸಿ.ಬಿ ರಿಷ್ಯಂತ್ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆರವರು 25,000/- ರೂಗಳ ನಗದು ಬಹುಮಾನವನ್ನು ಘೋಷಣೆ ಮಾಡಿದ್ದರು.

ದಾವಣಗೆರೆ ಮಹಿಳಾ ಠಾಣೆಯ ಇನ್ ಸ್ಪೆಕ್ಟರ್ ಶಿಲ್ಪ ಅವರಿಗೆ ಪ್ರಶಂಸನೀಯ ಪತ್ರ ಹಾಗೂ ಸನ್ಮಾನಿಸಿದ ಎಸ್ ಪಿ ರಿಷ್ಯಂತ್

ಹೆರಿಗೆ ಬಳಿಕ ಸಂಬಂಧಿಕರ ಕೈಗೆ ಮಗು ಕೊಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರಂತೆ. ಹೆರಿಗೆ ಬಳಿಕ ತಂದೆ ಇಸ್ಮಾಯಿಲ್ ಜಬೀವುಲ್ಲಾನಿಗೆ ಶಿಶುವಿಗಾಗಿ ಬಟ್ಟೆ ತರಲು ಸಿಬ್ಬಂದಿ ಹೇಳಿದ್ದು, ಅವರು ಬಟ್ಟೆ ತರುವಷ್ಟರಲ್ಲಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿದ್ದ ಶಿಶು ನಾಪತ್ತೆಯಾಗಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು ಅಲ್ಲದೆ ಆಸ್ಪತ್ರೆ ಮುಂದೆ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದ್ದರು. ಇದೇ ವೇಳೆ ಶಿಶುವನ್ನು ಮಹಿಳೆಯೊಬ್ಬಳು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದನ್ನ ಪೊಲೀಸ್ ಇಲಾಖೆ ತನಿಖೆಯನ್ನ ಚುರುಕುಗೊಳಿಸಿತ್ತು.

ದಾವಣಗೆರೆ ಮಹಿಳಾ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಮಹಿಳೆಯನ್ನು ಕೆಲ ದಿನಗಳ ಹಿಂದೆ ಠಾಣೆಗೆ ಕರೆತಂದು ವಿಚಾರಣೆ ಮಾಡುವ ಕಾಲಕ್ಕೆ ಸದರಿ ಶಂಕಿತ ಶ್ರೀಮತಿ ಗುಲ್ದಾರ್ ಬಾನು ಗಂಡ ಜಿಲಾನಿ, 44 ವರ್ಷ, ಗೃಹಿಣಿ ವಾಸ: 1ನೇ ಮೇನ್, 15ನೇ ಕ್ರಾಸ್ ಆಜಾದ ನಗರ ದಾವಣಗೆರೆ ಇವಳಿಗೆ ಮೂವರು ಮಕ್ಕಳಿದ್ದು, ಮೊದಲನೇಯವಳು ಫಾನ್ ಖಾನಂ, ಇವಳನ್ನು ಬೆಂಗಳೂರಿನ ವಾಸಿಯಾದ ತೌಸೀಫ್ ಇವರಿಗೆ ಮದುವೆ ಮಾಡಿಕೊಟ್ಟದ್ದು, ಸದರಿಯವರನ್ನು ಮದುವೆಯಾಗಿ ಸುಮಾರು ವರ್ಷಗಳಾದರೂ ಮಕ್ಕಳಾಗದ ಕಾರಣ ಸದರಿ ಶಂಕೀತಳಾದ ಗುಲ್ದಾರ್ ಬಾನು ಇವಳು ದಾವಣಗೆರೆ ಚಾಮರಾಜ ಪೇಟೆ ಆಸ್ಪತ್ರೆಗೆ ಹೋಗಿದ್ದು ಆಗ ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ಅಪಹರಣ ಮಾಡಿಕೊಂಡು ಅಲ್ಲಿಂದ ಬೆಂಗಳೂರಿಗೆ ಹೋಗಿ ತನ್ನ ಮಗಳು ಮತ್ತು ಅಳಿಯನಾದ ಫರಾನ ಖಾನಂ ಮತ್ತು ತೌಸೀಫ್ ಇವರಿಗೆ ಕೊಟ್ಟು ಬಂದಿರುತ್ತೇನೆ ಎಂದು ಹೇಳಿಕೆ ನೀಡಿದ್ದರು.

ನಂತರ ಪೊಲೀಸರು ಆಜಾದ್ ನಗರದಲ್ಲಿ ಬಂದು ಪ್ರತಿಯೊಂದು ಮನೆಯನ್ನು ಚೆಕ್ ಮಾಡಿಕೊಂಡು ಬಂದಾಗ ಶಂಕಿತ ಮಹಿಳೆ ತನ್ನ ಮಗಳಿಗೆ ಪೋನ್ ಮಾಡಿ ಮಗುವನ್ನು ತಂದು ವಾಪಸ್ ದಾವಣಗೆರೆ ಬಿಟ್ಟು ಹೋಗು ಅಂತಾ ಹೇಳಿದಾಗ ಶಂಕಿತ ಮಹಿಳೆಯ ಮಗಳು ಬೆಂಗಳೂರಿನಿAದ ದಾವಣಗೆರೆಗೆ ಮಗುವನ್ನು ಕರೆದುಕೊಂಡು ಬಂದು 20 ದಿನಗಳ ನಂತರ ಬಿಟ್ಟು ಹೋಗಿರುತ್ತಾಳೆ. ಈ ದಿನ ಪತ್ತೆಯಾದ ಮಗುವನ್ನು ಸಿಜಿ ಆಸ್ಪತ್ರೆಯಲ್ಲಿ ಪೋಷಕರ ವಶಕ್ಕೆ ಕೊಡಲಾಗಿರುತ್ತದೆ ಮತ್ತು ಆರೋಪಿತಳ ವಿರುದ್ಧ ಮಾನವ ಕಳ್ಳ ಸಾಗಾಣಿಕೆ ರೀತ್ಯಾ ಸೂಕ್ತ ಕಾನೂನು ಕ್ರಮವನ್ನು ಕೈಗೊಂಡಿರುತ್ತದೆ.

 

ಸುದ್ದಿಗಾಗಿ ಸಂಪರ್ಕಿಸಿ ;- Garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!