ಹಾಲು ಅಮೃತವಿದ್ದಂತೆ ಅದನ್ನು ಚೆಲ್ಲಿ ವ್ಯರ್ಥ ಮಾಡಬೇಡಿ : ಬಸವಪ್ರಭು ಸ್ವಾಮೀಜಿ

ದಾವಣಗೆರೆ : ಇಲ್ಲಿನ ವಿರಕ್ತ ಮಠದಲ್ಲಿ ಶಾಲಾ ಮಕ್ಕಳು ಹಾಲು ಕುಡಿಯುವ ಮೂಲಕ ವಿಶೇಷವಾಗಿ ನಾಗರ ಪಂಚಮಿಯನ್ನು ಆಚರಿಸಲಾಯಿತು .
ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮಕ್ಕಳಿಗೆ ಹಾಲು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ನಂತರ ಮಾತನಾಡಿದ ಸ್ವಾಮೀಜಿ , ‘ ನಾಡಿನಾದ್ಯಂತ ಮಹಿಳೆಯರು ಕಲ್ಲು ನಾಗರ ಹಾಗೂ ಹುತ್ತಕ್ಕೆ ಹಾಲನ್ನು ಎರೆಯುತ್ತಿದ್ದಾರೆ . ನನ್ನ ಪಾಲು ಅವರ ಪಾಲು ಎಂದು ಹೇಳಿ ಹಾಲನ್ನು ಸುರಿದು ಕೊನೆಗೆ ಮಣ್ಣುಪಾಲು ಮಾಡುತ್ತಿದ್ದಾರೆ . ಹಾಲು ಅಮೃತಕ್ಕೆ ಸಮನಾಗಿದ್ದು , ಸಂಜೀವಿನಿ ಇದ್ದಂತೆ ಅದನ್ನು ಚೆಲ್ಲಿ ವ್ಯರ್ಥ ಮಾಡಬೇಡಿ ‘ ಎಂದು ಸಲಹೆ ನೀಡಿದರು . ‘ ಕಲ್ಲಿನ ಮೂರ್ತಿಗೆ ಹಾಲೆರೆಯುವ ಜನರು ನಿಜವಾಗಿ ನಾಗರಹಾವು ಪ್ರತ್ಯಕ್ಷವಾದರೆ ಕೊಲ್ಲುತ್ತಾರೆ . ಭಕ್ಷ್ಯಭೋಜನವನ್ನು ತಯಾರಿಸಿ ದೇವರಿಗೆ ಇಡುತ್ತಾರೆ . ಆದರೆ ದೇವರು ಪ್ರತ್ಯಕ್ಷನಾಗುವುದಿಲ್ಲ . ಆದರೆ ಹಸಿದವರು ಯಾರಾದರೂ ಅನ್ನ ಕೇಳಿದರೆ ಅವರನ್ನು ಮುಂದಕ್ಕೆ ಕಳುಹಿಸುತ್ತಾರೆ.ಮಕ್ಕಳು ಹಾಗೂ , ಮನುಷ್ಯರ ಹೃದಯದಲ್ಲಿ ದೇವರು ಅಡಗಿ ಕುಳಿತಿದ್ದಾನೆ ‘ ಎಂದರು . ‘ ದೇವರು , ಧರ್ಮದ ಹೆಸರಿನಲ್ಲಿ ಹಾಲು , ಜೇನು , ಅನ್ನ , ಭಕ್ಷ್ಯ ಭೋಜನ , ರೇಷ್ಮೆ ವಸ್ತ್ರಗಳನ್ನು ಹೋಮ ಹವನಗಳಿಗೆ ಅರ್ಪಿಸುತ್ತಾರೆ . ಆದರೆ ರಾಜ್ಯದ ಉತ್ತರ ಕರ್ನಾಟಕದ ಭಾಗದಲ್ಲಿ ಹಾಲು ಇಲ್ಲದೇ ಅಪೌಷ್ಟಿಕದಿಂದ ಬಳಲುವವರಿಗೆ ನೀಡಬೇಕು ‘ ಎಂದು ಸಲಹೆ ನೀಡಿದರು . ಮುರುಘರಾಜೇಂದ್ರ ವಿದ್ಯಾವರ್ಧಕ ಫಂಡ್ ಸಂಘದ ಕಾರ್ಯದರ್ಶಿ ಎಂ.ಜಯಕುಮಾರ್ , ಸಹ ಕಾರ್ಯದರ್ಶಿ ಓಂಕಾರಪ್ಪ , ಹಾಸಭಾವಿ ಕರಿಬಸಪ್ಪ , ಮುರುಗೇಂದ್ರಪ್ಪ , ಮಹದೇವಮ್ಮ ಇದ್ದರು