ಹುಮ್ನಾಬಾದ್ ತಹಶೀಲ್ದಾರ್ ಮೇಲಿನ ಹಲ್ಲೆಗೆ ಖಂಡನೆ, ಕ್ರಮಕ್ಕೆ ಆಗ್ರಹ

hamnabad

ದಾವಣಗೆರೆ: ಬೀದರ್ ಜಿಲ್ಲೆ, ಹುಮ್ನಾಬಾದ್ ತಹಶೀಲ್ದಾರ್ ಡಾ. ಪ್ರದೀಪ್ ಹಿರೇಮಠ್ ಅವರು ಮೇಲೆ ನಡೆದ ಹಲ್ಲೆಯನ್ನು ಖಂಡಿಸುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಪಾಲಾಕ್ಷಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರೇಮಠ್ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಕೆಲ ವ್ಯಕ್ತಿಗಳು ಹಠಾತ್ ಆಗಿ ಬಂದು ಅವಾಚ್ಯ ಶಬ್ದಗಳಿಂದ  ನಿಂದಿಸಿ, ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿರುವ ವ್ಯಕ್ತಿಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ದಿಟ್ಟ ಹೆಜ್ಜೆ ಇಡಬೇಕೆಂದು ಒತ್ತಾಯಿಸಿದರು.

ಈ ಹಿಂದೆಯೂ ಚಿಕ್ಕಬಳ್ಳಾಪುರದ ಹಿರಿಯಣ್ಣನ ಹಳ್ಳಿಯಲ್ಲಿ, ಭೂಮಾಪಕ ನಾರಾಯಣಸ್ವಾಮಿ ಅವರ ಮೇಲೆ, ಪಾಂಡವಪುರ ತಹಶೀಲ್ದಾರ್ ಹಾಗೂ 12 ನೌಕರರ ಮೇಲೆ, ಉಡುಪಿಯ ಭೂಮಾಪಕರ ಮೇಲೆ ಹಲ್ಲೆಗಳಾಗಿದೆ. ಇದಕ್ಕೆ ಕಾರಣ ನೌಕರರ ಕೊರತೆಯಾಗಿದೆ. ಸುಮಾರು  2 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ನೌಕರರು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಕೂಡಲೇ ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಿಸಿದರು.

ಇದಲ್ಲದೇ ತಪ್ಪಿತಸ್ಥರ ಮೇಲೆ ಕೂಡಲೆ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಕೇಂದ್ರ ಸಂಘವು ತೆಗೆದುಕೊಳ್ಳುವ ನಿರ್ಧಾರದಂತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಇಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವ ಮೂಲಕ ಜಿಲ್ಲಾಧಿಕಾರಿ ಹಾಗೂ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಸಿ. ಗುರುಮೂರ್ತಿ, ಡಾ. ಎಸ್. ರಂಗನಾಥ್, ಡಾ. ಉಮೇಶ್, ಶಕೀಲ್ ಅಹ್ಮದ್, ರವಿ, ವಿವೇಕಾನಂದ, ಲೋಹಿತ್, ಅಂಜನಪ್ಪ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು  ಮತ್ತು  ಕಂದಾಯ ಇಲಾಖೆಯ ನೌಕರರು, ಪದಾಧಿಕಾರಿಗಳು ಹಾಜರಿದ್ದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!