ಹರಿಹರದ ಎಪಿಎಂಸಿ ಆವರಣದಲ್ಲಿ 150 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು.

ದಾವಣಗೆರೆ; ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಮಾ.20 ರಂದು ಹರಿಹರದ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ಬಹಿರಂಗ ಹರಾಜು ಮಾಡಲಾಗುವುದು.
ಆಹಾರ ಶಿರಸ್ತೇದಾರ್ ಮತ್ತು ಪೊಲೀಸ್ ಜಂಟಿ ಕಾರ್ಯಾಚರಣೆಯ ಮೂಲಕ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಹರಿಹರ ಬೈಪಾಸ್ ಬಳಿ ಮಾ.09 ರಂದು ಅನಧಿಕೃತವಾಗಿ ಸಾಗಿಸಲಾಗುತಿದ್ದ 300 ಪ್ಲಾಸ್ಟಿಕ್ ಚೀಲಗಳಲ್ಲಿನ 150 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಅಕ್ಕಿಯನ್ನು ಏ.20 ರ ಬೆಳಗ್ಗೆ 11 ಗಂಟೆಗೆ ಹರಿಹರ ಎ.ಪಿ.ಎಂ.ಸಿ ಆವರಣದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ಬಹಿರಂಗ ಹರಾಜು ಮಾಡಲಾಗುವುದು.
ಹರಾಜಿನಲ್ಲಿ ಭಾಗವಹಿಸುವವರು ಇಲಾಖೆಯ ಷರತ್ತುಗಳಿಗೆ ಬದ್ಧರಾಗಿ ಭಾಗವಹಿಸಬಹುದಾಗಿರುತ್ತದೆ. ದಾಸ್ತಾನನ್ನು ನೋಡಲಿಚ್ಚಿಸುವವರು ಹರಿಹರ ಎ.ಪಿ.ಎಂ.ಸಿ ಯಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿಗೆ ಕಛೇರಿ ಕೆಲಸದ ಅವಧಿಯಲ್ಲಿ ಭೇಟಿ ನೀಡಿ ಪರಿಶೀಲಿಸಬಹುದು ಎಂದು ಹರಿಹರ ತಾಲ್ಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.