Jaljeevan: ಜಲಜೀವನ್ ಮಿಷನ್ 24*7 ನೀರು ಪೂರೈಕೆ ಯೋಜನೆ ಸಫಲ ನ್ಯಾಮತಿ ತಾ; ದಾನಿಹಳ್ಳಿಗೆ ವಿಶ್ವ ಬ್ಯಾಂಕ್ ಟಾಸ್ಕ್ ಪೋರ್ಸ್ ತಂಡ ಭೇಟಿ

ಅವರು ನ್ಯಾಮತಿ ತಾಲ್ಲೂಕಿನ ಗಂಗನಕೋಟೆ ಗ್ರಾಮ ಪಂಚಾಯಿತಿ ದಾನಿಹಳ್ಳಿಗೆ ಜಲಜೀವನ್ ಮಿಷನ್ ಯೋಜನೆ 24*7 ಕುಡಿಯುವ ನೀರಿನ ಯೋಜನೆಯ ಕಾರ್ಯಚಟುವಟಿಕೆ ವೀಕ್ಷಣೆ ಮಾಡಿ ಮಾತನಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಹರ್ ಘರ್ ಜಲ್ ಘೋಷವಾಕ್ಯದಡಿ ಯೋಜನೆ ಅನುಷ್ಟಾನ ಮಾಡಲಾಗುತ್ತಿದೆ. ಶುದ್ದ ಕುಡಿಯುವ ನೀರನ್ನು ನಾವು ಪ್ರತಿ ಲೀಟರ್ಗೆ ರೂ.20 ಕೊಟ್ಟು ಖರೀದಿಸಿ ಕುಡಿಯುತ್ತೇವೆ. ಆದರೆ ಜೆಜೆಎಂ ಯೋಜನೆಯಡಿ ಶುದ್ದ ಕುಡಿಯುವ ನೀರನ್ನು ಪ್ರತಿ ಲೀಟರ್ಗೆ 1 ಪೈಸೆಯಂತೆ ಪೂರೈಕೆ ಮಾಡಲಾಗುತ್ತಿದೆ. ಗ್ರಾಮಕ್ಕೆ ಬರುವ ಹೊಸ ಅತಿಥಿಗಳಿಗೆ ಹೊರಗಿನ ನೀರನ್ನು ಹಣಕೊಟ್ಟು ಖರೀದಿಸಿ ನೀಡುವ ಬದಲಿಗೆ ನಿಮ್ಮ ಮನೆಯಲ್ಲಿನ ಶುದ್ದ ನೀರನ್ನು ಸ್ಟೀಲ್ ಕಪ್ಗಳಲ್ಲಿ ಕೊಡುವಂತಾಗುವುದೇ ಗ್ರಾಮಗಳ ಸ್ವಾವಲಂಬಿ ಯೋಜನೆಯಾಗಿದೆ ಎಂದರು.
ಮತ್ತೋರ್ವ ವಿಶ್ವಬ್ಯಾಂಕ್ ಟಾಸ್ಕ್ ಪೊರ್ಸ್ ಪ್ರತಿನಿಧಿ ಮರಿಯಪ್ಪ ಕುಳ್ಳಪ್ಪ ಮಾತನಾಡಿ ವಿದೇಶಗಳಲ್ಲಿ ಇಲ್ಲಿನಂತೆ ನೀರನ್ನು ಬಾಟಲಿಯಲ್ಲಿ ಇಟ್ಟಿರುವುದಿಲ್ಲ. ನಿರಂತರವಾಗಿ ನೀರು ಕುಡಿಯಲು ಟ್ಯಾಪ್ಗಳನ್ನು ಅಳವಡಿಸಲಾಗಿರುತ್ತದೆ. ನಮ್ಮ ಗ್ರಾಮಗಳು ಅದೇ ರೀತಿ ಮುಂದುವರೆದು ಶುದ್ದ ಕುಡಿಯುವ ನೀರು ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ಶುದ್ದ ನೀರಿನ ಬಳಕೆ ಜೊತೆಗೆ ನೀರಿನ ಮಿತ ಬಳಕೆಯು ಬಹಳ ಪ್ರಮುಖವಾಗಿರುತ್ತದೆ. ಜಿಲ್ಲೆಯ 10 ಗ್ರಾಮಗಳಲ್ಲಿ 24*7 ಮಾದರಿಯಲ್ಲಿ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದ್ದು ಮುಂದಿನ 6 ತಿಂಗಳಲ್ಲಿ 100 ಗ್ರಾಮಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಜಲಜೀವನ್ ಮಿಷನ್ ಯೋಜನೆಯಡಿ 881 ಕಾಮಗಾರಿಗಳನ್ನು ತೆಗೆದುಕೊಂಡಿದ್ದು ಇದರಲ್ಲಿ ಇತರೆ ಕಾರಣದಿಂದ ಕೆಲವು ಕಾಮಗಾರಿಗಳನ್ನು ಕೈಬಿಡಲಾಗಿದೆ. 630 ಕಾಮಗಾರಿಗಳಲ್ಲಿ 400 ಕಾಮಗಾರಿಗಳು ಬಹಳ ಉತ್ತಮವಾಗಿವೆ. ಅನುಷ್ಟಾನದಲ್ಲಿನ ಕೆಲವು ಲೋಪದೋಷಗಳನ್ನು ಸರಿಪಡಿಸಿ ಸಮರ್ಪಕವಾಗಿ ಯೋಜನೆ ಅನುಷ್ಟಾನ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಗ್ರಾಮ ನೀರು, ನೈರ್ಮಲ್ಯ ಸಮಿತಿ ಸಭೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕರೆಯಬೇಕೆಂದು ಮಾರ್ಗಸೂಚಿ ಸಿದ್ದಪಡಿಸಿ ಇದಕ್ಕಾಗಿ ಪ್ರತ್ಯೇಕ ಖಾತೆಯನ್ನು ತೆರೆಯುವ ಮೂಲಕ ಸಮಿತಿಯಿಂದ ಕಾಲಕಾಲಕ್ಕೆ ಗ್ರಾಮದಲ್ಲಿ ಕುಡಿಯುವ ನೀರು ಪರೀಕ್ಷೆ ಮಾಡಿಸುವುದು ಸೇರಿದಂತೆ ಎಲ್ಲಾ ನಿರ್ವಹಣೆಯನ್ನು ಮಾಡಲು ಅವಕಾಶ ಕಲ್ಪಿಸಿ ನೀರಿನ ಶುಲ್ಕವನ್ನು ಪಡೆದುಕೊಳ್ಳಲು ಆನ್ಲೈನ್ ಬಿಲ್ಲಿಂಗ್ ಹಾಗೂ ಪಾವತಿಗೂ ವ್ಯವಸ್ಥೆ ಮಾಡಲಾಗುತ್ತದೆ.
ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರು ಪೂರೈಕೆ ಮಾಡುತ್ತಿರುವುದರಿಂದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆ ಇಳಿಮುಖವಾಗಿದೆ. ಜಲಜೀವನ್ ಮಿಷನ್ ಯೋಜನೆಯಿಂದ ಜನರ ಆರೋಗ್ಯದ ಸಮಸ್ಯೆಗಳು ಸುಧಾರಣೆಯಾಗಿದೆ ಎಂದರು.
ದಾನಿಹಳ್ಳಿಯಲ್ಲಿ 337 ಮನೆಗಳಿಗೆ ನಲ್ಲಿ ಅಳವಡಿಸಲಾಗಿದೆ. 3 ನೇ ಹಂತದ ಜೆಜೆಎಂ ಯೋಜನೆಯಲ್ಲಿ ರೂ.95 ಲಕ್ಷದಲ್ಲಿ ಪ್ರತಿ ಮನೆಗೂ 24*7 ಮಾದರಿಯಲ್ಲಿ ನೀರು ಪೂರೈಸಲಾಗುತ್ತಿದೆ.
ನೀರುಗಂಟಿ ಸ್ಮಾರ್ಟ್ ಕೆಲಸ; ಗ್ರಾಮದ ನೀರಗಂಟಿ ಉಮೇಶ್ ತಂಡಕ್ಕೆ ಮಾದರಿಯಾದರು. ಪಂಪ್ಹೌಸ್ಗಳಲ್ಲಿ ಸ್ಮಾರ್ಟ್ ಸ್ಟಾರ್ಟರ್ ಅಳವಡಿಸಿದ್ದು ಅದನ್ನು ತನ್ನ ಮೊಬೈಲ್ ಅಪ್ಲಿಕೇಷನ್ ಮೂಲಕ ಮೋಟಾರು ಚಾಲನೆ ಮಾಡುವುದು, ಆಫ್ ಮಾಡುವುದನ್ನು ಮಾಡುತ್ತಾರೆ. ರಾತ್ರಿವೇಳೆ ಏಕಾಂಗಿಯಾಗಿ ಪಂಪ್ಹೌಸ್ ಬಳಿ ಹೋಗಿ ಕೆಲಸ ಮಾಡುವುದು ಕಷ್ಟವಾಗುವುದರಿಂದ ಮೊಬೈಲ್ ಮೂಲಕವೇ ನಿರ್ವಹಣೆ ಮಾಡುವರು. ಇದರಿಂದ ನೀರಿನ ಮಿತ ಬಳಕೆ, ಮೋಟಾರ್ ಸುಸ್ಥಿತಿ ಜೊತೆಗೆ ಬಹಳ ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಾಗಿದೆ ಎಂಬ ಮಾಹಿತಿ ಪಡೆದ ತಂಡ ನೀರುಗಂಟೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿತು.
ಈ ವೇಳೆ ಗ್ರಾಮೀಣ ನೀರು ಪೂರೈಕೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೋಮ್ಲಾನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ, ಪ್ರಕಾಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.