ರಾಮನಗರದಲ್ಲಿ ಕಾಂಗರೂ ಆಸ್ಪತ್ರೆ ಶೀಘ್ರ ಕಾರ್ಯಾರಂಭ: ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಸಂಸ್ಥಾಪಕ ಶೇಖರ್ ಸುಬ್ಬಯ್ಯ ಘೋಷಣೆ

ರಾಮನಗರ: ನಾವು ಹಣಕ್ಕಾಗಿ ಆಸ್ಪತ್ರೆ ನಡೆಸುವುದಿಲ್ಲ, ಇದೊಂದು ಸೇವೆ ಎಂದು ಪರಿಗಣಿಸಿ ಆಸ್ಪತ್ರೆ ನಡೆಸುತ್ತಿದ್ದೇವೆ. ಬೆಂಗಳೂರು ಮೈಸೂರು ಸೇರಿದಂತೆ ನಾಲ್ಕು ಕಡೆಯಲ್ಲಿ ನಮ್ಮ ‘ಕಾಂಗರೂ’ ಆಸ್ಪತ್ರೆ ಈಗಾಗಲೇ ಕೆಲಸ ನಿರ್ವಹಿಸಿ ಹೆಸರುವಾಸಿಯಾಗಿದೆ. ಈ ಎರಡು ಬೃಹತ್ ನಗರಗಳ ನಡುವಿನ ರಾಮನಗರ ದಲ್ಲಿ “ರೋಟರಿ ಬಿಜಿಎಸ್ ಕಾಂಗರೂ” ಹೆಸರಿನಲ್ಲಿ ಐದನೇ ಆಸ್ಪತ್ರೆ ತೆರೆಯಲಾಗಿದೆ. ಇದನ್ನು ರೋಗಿಗಳು ಉಪಯೋಗಿಸಿಕೊಳ್ಳಬೇಕು ಎಂದು ಸಿಇಓ ಮತ್ತು ಸಂಸ್ಥಾಪಕರಾದ ಡಾ ಶೇಖರ್ ಸುಬ್ಬಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಜನರಲ್ ಆಸ್ಪತ್ರೆಯಲ್ಲಾ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಾಗಿದ್ದು, ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು ದಿನದ ಇಪ್ಪತ್ನಾಲ್ಕು ಗಂಟೆಗಳು ಉಪಸ್ಥಿತರಿರುತ್ತಾರೆ. ಹೊರರೋಗಿಗಳಿಗೂ ಸಹ (ಓಪಿಡಿ) ಅದೇ ಸಮಯ ನಿಗದಿಯಾಗಿರುತ್ತದೆ. ರಾಮನಗರ ಅಷ್ಟೇ ಅಲ್ಲದೆ, ಸುತ್ತಮುತ್ತಲಿನ ರೋಗಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸ್ತ್ರೀಯರು ಗರ್ಭಿಣಿಯರಾದ ಮೊದಲ ದಿನದಿಂದಲೂ ಹೆರಿಗೆಯಾಗುವ ತನಕ, ಶಿಶುವಿಗೆ ಯಾವ್ಯಾವ ಹಂತದಲ್ಲಿ ಏನೇನು ಚಿಕಿತ್ಸೆ ಅವಶ್ಯಕತೆ ಇದೆಯೋ ಅದೆಲ್ಲವನ್ನು ನಮ್ಮ ಆಸ್ಪತ್ರೆಯಲ್ಲೇ ನೀಡಲಾಗುವುದು. ಎಂತಹ ಸಂದರ್ಭದಲ್ಲೂ ಬೆಂಗಳೂರಿನ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲಾ, ತಾಯಿ ಮತ್ತು ಮಗುವಿಗೆ ಬೇಕಾದ ಎಲ್ಲಾ ಚಿಕಿತ್ಸಾ ಸೌಲಭ್ಯಗಳನ್ನು ನಮ್ಮ ಆಸ್ಪತ್ರೆ ಹೊಂದಿದೆ ಎಂದರು.

ಶುಕ್ರವಾರ ಆಸ್ಪತ್ರೆಯನ್ನು ಅಧಿಕೃತವಾಗಿ ಉದ್ಘಾಟಿಸಿ ಕಾರ್ಯಾರಂಭ ಮಾಡಲಾಗುವುದು. ಸ್ವಾಮೀಜಿಗಳು, ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರು ಸಹ ಭಾಗವಹಿಸಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!