ಕನ್ನಡ ಸಾಹಿತ್ಯ ಪರಿಷತ್ತ್ ಚುನಾವಣೆ ನಡೆಸಲು ಆಕಾಂಕ್ಷಿಗಳಿಂದ ಡಿಸಿಗೆ ಮನವಿ

ದಾವಣಗೆರೆ.ಜು.೨೩; ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆಯಬೇಕಾಗಿದ್ದ ಚುನಾವಣೆಯನ್ನು ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿತ್ತು, ಆ ಆದೇಶದಲ್ಲಿ ತಿಳಿಸಿರುವಂತೆ ಕರೋನಾ ನಿಯಂತ್ರಣಕ್ಕೆ ಬಂದ ತಕ್ಷಣ ಚುನಾವಣೆ ನಡೆಸುವುದಾಗಿ ಶೇ.90 ರಷ್ಟು ಪೂರ್ಣ ಗೊಂಡಿದ್ದ ಚುನಾವಣಾ ಪ್ರಕ್ರಿಯೆಯನ್ನು ಸರ್ಕಾರದ ಆದೇಶದ ಅಡಿಯಲ್ಲಿ ಮುಂದೂಡಲಾಗಿತ್ತು, ಈಗ ಎಸ್.ಎಸ್. ಎಲ್.ಸಿ. ಪರೀಕ್ಷೆಗಳು ಮತ್ತು ಪದವಿ ಕಾಲೇಜುಗಳು ಹಾಗೂ ಪೂರ್ಣ ಪ್ರಮಾಣದ ಲಾಕ್ಡೌನ್ ತೆರವುಗೊಂಡು ಸಹಜ ಜೀವನದೆಡೆಗೆ ರಾಜ್ಯ ಮರಳುತ್ತಿದೆ ಆದ್ದರಿಂದ ಕಸಾಪ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿ. ವಾಮದೇವಪ್ಪ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಸಾಹಿತ್ಯ ಪರಿಷತ್ತು ಸಹಕಾರ ಸಂಘಗಳ ನಿಯಮದಡಿಯಲ್ಲಿ ನೊಂದಾಯಿತ ವಾಗಿರುವುದರಿಂದ ಹಾಗೂ ನಮ್ಮ ಸಾಹಿತ್ಯ ಪರಿಷತ್ತಿನ ಬಹುತೇಕ ಅಜೀವ ಸದಸ್ಯರು ಲಸಿಕೆ ಹಾಕಿಸಿಕೊಂಡು ಇರುವುದರಿಂದ ಚುನಾವಣೆ ಮಾಡುವುದರಲ್ಲಿ ಯಾವುದೇ ವಿಳಂಬ ತೋರದೆ ಹಾಗೂ ನಾಡು-ನುಡಿ, ನೆಲ-ಜಲ, ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯಲು ಅನುಕೂಲ ವಾಗುವಂತೆ ಪ್ರಜಾಪ್ರಭುತ್ವದ ಅಡಿಯಲ್ಲಿರುವ ಕನ್ನಡಿಗರ ಸಾಂಸ್ಥಿಕ ಸಂಸ್ಥೆಯಯಾಗಿ ಹಾಗೂ ಶತಮಾನದ ಇತಿಹಾಸವಿರುವ “ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ” ಪ್ರಕ್ರಿಯೆಯನ್ನು ಕರೋನಾ ನಿಯಮಗಳದಡಿಯಲ್ಲಿಯೇ ತಕ್ಷಣವಾಗಿ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಎ.ಆರ್. ಉಜ್ಜಿನಪ್ಪ, ಕಾರ್ಯದರ್ಶಿ ದಿಳ್ಯಪ್ಪ, ಜಿ.ಆರ್.ಷಣ್ಮುಖಪ್ಪ, ಬಿ.ಎಂ.ಮುರಿಗಯ್ಯ ಕುರ್ಕಿ ಮುಂತಾದವರು ಉಪಸ್ಥಿತರಿದ್ದರು.