ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹ

ದಾವಣಗೆರೆ: 1971ರಿಂದ 2020ರವರೆಗೆ ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿರುವುದಿಲ್ಲ ಹಾಗೂ ಹಕ್ಕುಪತ್ರ ನೀಡಿದವರಿಗೆ ಕಂದಾಯ ಇಲಾಖೆಯಲ್ಲಿ ಸಮರ್ಪಕ ದಾಖಲೆಗಳಿಲ್ಲ. 94 ಸಿ ಅಡಿಯಲ್ಲಿ ಅರ್ಜಿ ಹಾಕಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂಬುದು ಸೇರಿದಂತೆ ಹಲವು ಸಮಸ್ಯೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ದಾವಣಗೆರೆ ಜಿಲ್ಲಾ ಘಟಕ ಆಗ್ರಹಿಸಿದೆ.
ಅಷ್ಟೇಅಲ್ಲದೆ ಭತ್ತ ಮತ್ತು ಇನ್ನಿತರೆ ಬೆಳೆಗಳು ಅಕಾಲಿಕ ಮಳೆಯಿಂದ ಬೆಳೆಗಳು ಹಾಳಾಗಿದ್ದು, ಸಂಪೂರ್ಣ ಸಮೀಕ್ಷೆಯಾಗಿ ಪರಿಹಾರ ನೀಡಿರುವುದಿಲ್ಲ. ಜಿಲ್ಲೆಯಲ್ಲಿ 600 ಕೆರೆಗಳಿದ್ದು, ಈ ಕೆರೆಗಳ ಬಗ್ಗೆ 2000ನೇ ಇಸವಿಯಿಂದ 2020ರವರೆಗೆ ಬಂದ ಜಿಲ್ಲಾಧಿಕಾರಿಗಳ ಸಭೆ ನಡೆದಿದೆಯಷ್ಟೇ. ಯಾವುದೇ ಕೆರೆಗಳನ್ನು ಒತ್ತುವರಿ ತೆರವುಗೊಳಿಸಿಲ್ಲ ಹಾಗೂ ಸಂಬ0ಧಿಸಿದ ಅಧಿಕಾರಿಗಳಿಗೆ ತಮ್ಮ ಇಲಾಖೆಯ ಕೆರೆಗಳ ಮಾಹಿತಿ ಇಲ್ಲ. ಮಳೆಗಾಲದಲ್ಲಿ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿದ್ದು, ಯಾವುದೇ ಸಂಬ0ಧಿಸಿದ ಅಧಿಕಾರಿಗಳು ಈವರೆಗೂ ಭೇಟಿ ನೀಡದೆ, ಕಚೇರಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಈ ಮೇಲ್ಕಂಡ ವಿಷಯಗಳು 2000ರಿಂದ 2022ರವರೆಗೂ ಕೇವಲ ಚರ್ಚೆಯಾಗಿದೆಯಷ್ಟೇ. ಸರ್ಕಾರಗಳು ಗ್ರಾಮ ಭೇಟಿ, ಗ್ರಾಮ ವಾಸ್ತವ್ಯ ಇವು ನೆಪ ಮಾತ್ರ, ಇದು ಕಾರ್ಯಗತಗೊಳ್ಳುವುದು ಕನ್ನಡಿಯೊಳಗಿನ ಗಂಟ0ತೆ ಎಂದು ಆರೋಪಿಸಿದ್ದು, ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳನ್ನು 15 ದಿನಗಳೊಳಗಾಗಿ ಇತ್ಯರ್ಥ ಪಡಿಸದೆ ಇದ್ದರೆ ಅನಿರ್ದಿಷ್ಟ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಕಬ್ಬಳ ಪ್ರಸಾದ್, ಉಪಾಧ್ಯಕ್ಷ ರಾಂಪುರದ ಬಸವರಾಜ್, ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ, ಜಿಲ್ಲಾ ಕಾರ್ಯದರ್ಶಿ ಕುಮಾರನಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಮಾಯಕೊಂಡದ ಅಶೋಕ್, ಕಾರ್ಯದರ್ಶಿ ಅಣಬೇರು ಕುಮಾರಸ್ವಾಮಿ ಮೊದಲಾದವರು ಎಚ್ಚರಿಸಿದ್ದಾರೆ.
garudavoice21@gmail.com