ಕೇಂದ್ರದಿಂದ ಯಾವ ಸೂಚನೆ ಬರುತ್ತೊ ಅದೇ ಫೈನಲ್.! ಶಾಸಕಾಂಗ ಸಭೆ ವರಿಷ್ಠರಂತೆ ಸಿ ಎಂ ಆಯ್ಕೆ – ರೇಣುಕಾಚಾರ್ಯ

ದಾವಣಗೆರೆ: ನನಗೂ ಸಚಿವ ಸ್ಥಾನ ನಿಭಾಯಿಸುವ ಸಾಮರ್ಥ್ಯ ಇದೆಯಾದರೂ, ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಯಾಕೆಂದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕಾರಣ ಮುಖ್ಯವಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸುವುದಷ್ಟೇ ಮುಖ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ದೆಹಲಿಯಿಂದ ಹೊನ್ನಾಳಿಗೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕನಾಗಿ, ಸಚಿವನಾಗಿ ಉತ್ತಮ ಕೆಲಸ ಮಾಡಿರುವ ತೃಪ್ತಿ ನನಗಿದೆ. ಸಚಿವ ಸ್ಥಾನ ಕೊಡಲೇಬೇಕೆಂದು ಪಟ್ಟು ಹಿಡಿಯುವ ಸಂದರ್ಭ ಇದಲ್ಲ. ಇದೇನಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಂದರ್ಭ ಎಂದು ಹೇಳಿದರು.
ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ಮುಖ್ಯ. ಅದಕ್ಕಾಗಿ ದೆಹಲಿಯಿಂದ ನನ್ನ ಕ್ಣೇತ್ರಕ್ಕೆ ವಾಪಸು ಬಂದಿದ್ದೇನೆ. ಜನರ ಸಂಕಷ್ಟಗಳಿಗೆ ಸ್ಫಂದಿಸುವ ಕೆಲಸ ಮಾಡುತ್ತೇನೆ ಎಂದರು.
ನಮ್ಮ ಬಿಜೆಪಿಗೆ ವಲಸೆ ಬಂದ 17 ಸಚಿವರ ಮಿತ್ರಮಂಡಳಿ ವಲಸಿಗರಲ್ಲ. ಅವರು ಬಿಜೆಪಿಯವರು. ಅವರು ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಂದಿದ್ದಾರೆ. ಅವರ ಸ್ಥಾನಮಾನದ ಕುರಿತು ಮಿತ್ರ ಮಂಡಳಿ, ಬಿಎಸ್ವೈ, ಕೇಂದ್ರ ವರಿಷ್ಠರ ಮಧ್ಯೆ ಚರ್ಚೆಯಾಗಿದೆ. ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರು ಅವರ ಬಗ್ಗೆ ಗಮನ ಹರಿಸುತ್ತಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ. ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ಮಧ್ಯೆ ಏನು ಚರ್ಚೆ ನಡೆದಿದೆ ಅದ್ಯಾವುದರ ಮಾಹಿತಿ ನನಗೆ ತಿಳಿದಿಲ್ಲ. ಇದುವರೆಗೂ ಸಿಎಂ ಬದಲಾವಣೆ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಎಂದು ಪ್ರಶ್ನೆಯಿಂದ ಜಾರಿಕೊಂಡರು.
ಪಕ್ಷದ ಯಾವುದೇ ನಾಯಕರು ಸಿಎಂ ರಾಜೀನಾಮೆ ಕೇಳಿಲ್ಲ. ಸಿಎಂ ಯಡಿಯೂರಪ್ಪ ಅವರು ಸಹ ಕೇಂದ್ರದ ಸೂಚನೆ ಪಾಲಿಸುತ್ತೇನೆ ಎಂದಿದ್ದಾರೆ ಹೊರತು ರಾಜಿನಾಮೆ ನೀಡುತ್ತೇನೆ ಎಂದು ಎಲ್ಲೂ ಹೇಳಿಲ್ಲ ಎಂದರು.
ಆದರೆ, ಕೇಂದ್ರದಿಂದ ಯಾವ ಸೂಚನೆ ಬರುತ್ತದೋ ಅದೇ ಫೈನಲ್ ಆಗಿರುತ್ತದೆ. ವರಿಷ್ಠರು, ಶಾಸಕಾಂಗ ಪಕ್ಷದ ತೀರ್ಮಾನದಂತೆ ಸಿಎಂ ಆಯ್ಕೆ ಆಗುತ್ತದೆ ಎಂದರು.