KSMCL ಸಂಸ್ಥೆಯಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ ಎಸ್.ಎಸ್ ಮಲ್ಲಿಕಾರ್ಜುನ

ಬೆಂಗಳೂರು/ ದಾವಣಗೆರೆ: (KSMCL) ಗಣಿ ಮತ್ತು ಭೂ ವಿಜ್ಞಾನ ವ್ಯಾಪ್ತಿಗೆ ಬರುವ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ( ಕೆ.ಎಸ್.ಎಂ.ಸಿ.ಎಲ್) ಸಂಸ್ಥೆಯಿಂದ ಶಾಲೆಗಳ ಕೊಠಡಿಗಳ ನಿರ್ಮಾಣ, ವಾಣಿಜ್ಯ ಸಮುಚ್ಚಯ ಕಟ್ಟಡ ನಿರ್ಮಾಣದ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಈಚೇಗೆ ಕೆಎಸ್ ಎಂ.ಸಿ.ಎಲ್ ಸಂಸ್ಥೆಯ ಪ್ರಗತಿ ಪರಿಶೀಲನ ಸಭೆಯಲ್ಲಿ ಹಿರಿಯ ಅಧಿಕಾರಿಗಳಿಂದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಪಡೆದು ಸಚಿವರು ಮಾತನಾಡಿದರು.
ಕೆಎಸ್ ಎಂ.ಸಿ.ಎಲ್ ಸಂಸ್ಥೆಯ ಒಟ್ಟು ಆದಾಯ ಮತ್ತು ಲಾಭದ ನಿರೀಕ್ಷೆಯಿದೆ, ನಿವ್ವಳ ಆದಾಯ ತೆರಿಗೆಯ ನಂತರ ರೂ.492.00 ಕೋಟಿ (ಅಂದಾಜು) ಆಗುವ ನಿರೀಕ್ಷೆಯಿದೆ. ಸಂಸ್ಥೆಯು ರೇಷ್ಮೆ ಇಲಾಖೆಯೊಂದಿಗೆ ಜಂಟಿ ಸಹಭಾಗಿತ್ವದೊಂದಿಗೆ ಕಛೇರಿ ಹಾಗೂ ವಾಣಿಜ್ಯ ಸಮುಚ್ಚಯ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ರೂ. 666 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣವು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒಟ್ಟು ರೂ.14.68ಕೋಟಿ ವೆಚ್ಚದಲ್ಲಿ ಕಾರ್ಪೋರೇಟ್ ಸೋಷಿಯಲ್ ರಸಪಾನ್ಸಿಬಿಲಿಟಿ (CSR) ಅಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ ಸಚಿವರು ಕೆಎಸ್ ಎಂ.ಸಿ.ಎಲ್ ಸಂಸ್ಥೆಯಿಂದ ಹಮ್ಮಿಕೊಂಡಿರು ಉತ್ತಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಶು ಸಂಗೋಪನ ಹಾಗೂ ರೇಷ್ಮೆ ಇಲಾಖೆ ಸಚಿವರಾದ ಕೆ. ವೆಂಕಟೇಶ್, ಕೆಎಸ್ಎಂಸಿಎಲ್ ನ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್ ಪಾಟೀಲ್, ಕೆಎಸ್ಎಂಸಿಎಲ್ ಎಂ.ಡಿ ಮಹಾಂತೇಶ್ ಬಿಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.