ಕತ್ತಲ ಸ್ಮಾರ್ಟ್ ನಗರದಲ್ಲಿ ಅನಾವುತ ಆಗುವ ಮೊದಲು ಬೆಳಕು ಬರಲಿ – ಕೆ. ಎಲ್. ಹರೀಶ್ ಬಸಾಪುರ

ದಾವಣಗೆರೆ: ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ ಬೀದಿ ದೀಪಗಳ ಸಮಸ್ಯೆ ಕಾಡುತ್ತಿದ್ದು, ಕತ್ತಲ ನಗರದಲ್ಲಿ ಅನಾಹುತವಾಗುವ ಮೊದಲು ಬೆಳಕು ಬರಲಿ ಎಂಬುದೇ ನಮ್ಮ ಆಗ್ರಹ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿಗೊಮ್ಮೆ ಜಿಲ್ಲೆಗೆ ದರ್ಶನ ನೀಡಿ ರಾಜಧಾನಿಗೆ ಮರಳುತ್ತಾರೆ. ಅವರು ಸೂರ್ಯನಂತೆ ಹಗಲು ಹೊತ್ತಿನಲ್ಲಿ ನಗರಕ್ಕೆ ಭೇಟಿ ನೀಡುವುದರಿಂದ ದಾವಣಗೆರೆಯಲ್ಲಿರುವ ಬೀದಿ ದೀಪವಿಲ್ಲದೆ ಜನರು ಅನುಭವಿಸುತ್ತಿರುವ ಸಮಸ್ಯೆಗಳು ಅವರಿಗೆ ಅರ್ಥವಾಗುತ್ತಿಲ್ಲ.
ಅತಿ ಮುಖ್ಯವಾಗಿ ಪಿಬಿ ರಸ್ತೆಯ ಡಿಸಿಎಂ ರೈಲ್ವೆ ಬ್ರಿಡ್ಜ್ ನಿಂದ ಅವರಗೆರೆ ಮಾರ್ಗವಾಗಿ ಬಾಡ ಕ್ರಾಸ್ ವರೆಗೆ ಬೀದಿ ದೀಪಗಳೇ ಇಲ್ಲ, ಭವಿಷ್ಯ ಜಿಲ್ಲಾ ಉಸ್ತುವಾರಿ ಸಚಿವರಲ್ಲದೆ, ಸಂಸದರು, ಈ ಭಾಗದ ಶಾಸಕರು, ಮಹಾನಗರ ಪಾಲಿಕೆ ಸದಸ್ಯರುಗಳು ಈ ರಸ್ತೆಯಲ್ಲಿ ಸಂಚರಿಸುವುದಿಲ್ಲ ಎನಿಸುತ್ತದೆ.
ಪ್ರತಿದಿನ ಈ ಮಾರ್ಗವಾಗಿ ಸಂಚರಿಸುವ ಸಾವಿರಾರು ಜನರು ತಮ್ಮ ಜೀವ ಕೈಯಲ್ಲಿಡಿದುಕೊಂಡೇ ವಾಹನ ಚಲಾವಣೆ ಮಾಡುತ್ತಾರೆ, ನಮ್ಮ ಸರ್ಕಾರ ರಸ್ತೆಗಳಿಗೆ ಬೀದಿ ದೀಪ ಹಾಕಲಾರದಷ್ಟು ಬಡತನದಲ್ಲಿದೆಯೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಕಾಡುತ್ತಿದ್ದು, ಅನಾಹುತವಾಗಿ ಸಾರ್ವಜನಿಕರು ನಿಮಗೆ ಹಿಡಿಶಾಪ ಹಾಕುವ ಮೊದಲು ಸಂಬಂಧಪಟ್ಟ ಶಾಸಕರು ಹಾಗೂ ಪಾಲಿಕೆ ಸದಸ್ಯರು ಸಮಸ್ಯೆಗೆ ಪರಿಹಾರ ಒದಗಿಸಲಿ ಎಂಬುದೇ ನಮ್ಮ ಬಯಕೆ ಎಂದಿದ್ದಾರೆ.