ರೈತರ ಹೊಲದಲ್ಲಿರುವ ವಿದ್ಯುತ್ ಲೈನ್ ಸಮರ್ಪಕ ನಿರ್ವಹಣೆ ಮಾಡಿಸಿ: ಕಬ್ಬು ಬೆಳೆಗಾರರಿಂದ ಡಿಸಿಗೆ ಮನವಿ.!

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಕುಕ್ಕುವಾಡ ಗ್ರಾಮದಲ್ಲಿ ದಾವಣಗೆರೆ ಸಕ್ಕರೆ ಕಂಪನಿ ಇರುವುದರಿಂದ ಈ ಗ್ರಾಮದ ಸುತ್ತ ಗ್ರಾಮದವರು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಬೆಳೆದಿದ್ದಾರೆ. ಕೆಲವು ರೈತರು ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ಕಬ್ಬು ಬೆಳೆದಿದ್ದಾರೆ. ರೈತರ ಜಮೀನಿನಲ್ಲಿ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂ ನವರು ವಿದ್ಯುತ್ ಲೈನ್ ಅಳವಡಿಸಿದ್ದಾರೆ. ವಿದ್ಯುತ್ ಲೈನ್ ಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಇದರಿಂದ ಕೆಲವು ಕಡೆ ವಿದ್ಯುತ್ ಕಂಬಗಳು ವಾಲಿವೆ ಮತ್ತು ತಂತಿಗಳು ಸಡಿಲವಾಗಿವೆ. ಗಾಳಿ ಜೋರಾಗಿ ಬೀಸಿದಾಗ ಸಡಿಲವಾಗಿರುವ ತಂತಿಗಳು ಒಂಕ್ಕೊಂದು ತಗುಲಿ ಶಾರ್ಟ್ ಸರ್ಕ್ಯೂಟ್ ಆಗುತ್ತಿದೆ. ಆಗ ಹುಲುಸಾಗಿ ಬೆಳೆದಿರುವ ಕಬ್ಬಿನ ಬೆಳೆಗೆ ಬೆಂಕಿ ಅವಘಡ ಸಂಭವಿಸುತ್ತಿವೆ.
ಕಬ್ಬು ದೀರ್ಘವಾದಿ ಬೆಳೆಯಾಗಿದ್ದು, ರೈತರು ಸಾಲ ಸೋಲ ಮಾಡಿ, ಬಹಳ ಬಂಡವಾಳ ಹೂಡಿಕೆ ಮಾಡಿ, ಬೆವರು ಸುರಿಸಿ ಕಷ್ಟ ಪಟ್ಟು ಬೆಳೆದಿರುತ್ತಾರೆ. ಈಗ ಬೆಸ್ಕಾಂ ಇಲಾಖೆ ನಿರ್ಲಕ್ಷ್ಯದಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿನ ಬೆಳೆಗೆ ಬೆಂಕಿ ಹತ್ತಿ ಕ್ಷಣಾರ್ಧದಲ್ಲಿ ನೋಡ ನೋಡುತ್ತಿದ್ದಂತೆ ಬೆಳೆ ಸುಟ್ಟು ಕರಕಲಾಗುತ್ತದೆ ಅದ್ದರಿಂದ ಕಬ್ಬು ಬೆಳೆ ರೈತರ ಬೇಡಿಕೆಗಳನ್ನು ಈಡೇರಿಸಲು ಮನವಿ.
ನಮ್ಮ ಬೇಡಿಕೆಗಳು:
1.ರೈತರ ಜಮೀನಿನಲ್ಲಿ ಅಳವಡಿಸಿರುವ ವಿದ್ಯುತ್ ಲೈನ್ ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
2.ಬೆಸ್ಕಾಂ ನಿರ್ಲಕ್ಷ್ಯದಿಂದ ಬೆಳೆಗೆ ಬೆಂಕಿ ಅವಘಡ ಸಂಭವಿಸಿರುವ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಅವರ ವಿರುದ್ಧ ದೂರು ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
3.ವಿದ್ಯುತ್ ಅವಘಡಗಳಿಂದ ನಷ್ಟ ಅನುಭವಿಸಿರುವ ರೈತರಿಗೆ ಆಗಿರುವ ನಷ್ಟ ಅಂದಾಜು ಮಾಡಿಸಿ, ಸೂಕ್ತ ಮತ್ತು ನ್ಯಾಯಯುತ ಪರಿಹಾರ ಮಂಜೂರು ಮಾಡಬೇಕು.
4.ಈ ರೀತಿ ಬೆಂಕಿ ಅವಘಡ ಸಂಭವಿಸಿದಾಗ ದೂರದ ದಾವಣಗೆರೆಯಿಂದ ಅಗ್ನಿ ಶಾಮಕ ದಳದವರು ಬರುವುದು ಬಹಳ ವಿಳಂಬವಾಗುತ್ತದೆ. ಆದ್ದರಿಂದ ದಯಮಾಡಿ ಹದಡಿ ಪೊಲೀಸ್ ಠಾಣೆಯಲ್ಲಿ 2 ಮತ್ತು ದಾವಣಗೆರೆ ಸಕ್ಕರೆ ಕಾರ್ಖಾನೆಯಲ್ಲಿ 2 ಅಗ್ನಿ ಶಾಮಕ ವಾಹನಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು. ಆಗ ರೈತ ಬೆಳೆದ ಬೆಳೆಗೆ ಬೆಂಕಿ ತಗುಲಿದ 5 ರಿಂದ 10 ನಿಮಿಷಗಳಲ್ಲಿ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಲು ಪ್ರಯತ್ನಿಸಬಹುದು.
5.ಸಕ್ಕರೆ ಕಾರ್ಖಾನೆಯವರು ಈ ರೀತಿ ವಿದ್ಯುತ್ ಅವಘಡಗಳಿಂದ ಸುಟ್ಟಿರುವ ಕಬ್ಬನ್ನು ಖರೀದಿಸುವಾಗ ತೂಕದಲ್ಲಿ ಟನ್ ಒಂದರ ಕಬ್ಬಿನಲ್ಲಿ 250 ಕೆ.ಜಿ ಕಡಿತಗೊಳಿಸಿ ಲೆಕ್ಕ ಮಾಡುತ್ತಾರೆ. ಇದು ನಷ್ಟ ಅನುಭವಿಸಿ ದುಃಖದಲ್ಲಿ ಇರುವ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಆದ್ದರಿಂದ ದಯಮಾಡಿ ಮಾನವೀಯ ದೃಷ್ಟಿಯಿಂದ ಸುಟ್ಟ ಕಬ್ಬಿನ ನೈಜ ತೂಕವನ್ನು ಪರಿಗಣಿಸಿ ಲೆಕ್ಕ ಮಾಡಬೇಕು.
6.ಸಕ್ಕರೆ ಕಾರ್ಖಾನೆಯವರು 12 ತಿಂಗಳಿಗೆ ಸರಿಯಾಗಿ ಕಟಾವು ಮಾಡಲು ಅನುಮತಿ (ಪರ್ಮಿಟ್) ನೀಡುವುದಿಲ್ಲ. 15-16 ತಿಂಗಳಿಗೆ ಪರ್ಮಿಟ್ ಕೊಡುತ್ತಾರೆ. ಇದರಿಂದ ಕಬ್ಬು ಅವಧಿ ಮೀರಿ ಬೆಳೆಯುತ್ತದೆ. ರೈತನಿಗೆ ಇದರಿಂದ ಬಹಳಷ್ಟು ನಷ್ಟ ಆಗುತ್ತದೆ. ಆದ್ದರಿಂದ 11-12 ತಿಂಗಳಿಗೆ ಸರಿಯಾಗಿ ಕಟಾವು ಮಾಡಲು ಅನುಮತಿ ನೀಡಬೇಕು.
7.ಫಸಲು ಭೀಮಾ ಯೋಜನೆಯ ವ್ಯಾಪ್ತಿಯಲ್ಲಿ ಕಬ್ಬನ್ನು ಸೇರಿಸಬೇಕು. ಇದರಿಂದ ಬೆಂಕಿ ಅವಘಡಗಳಿಂದ ಬೆಂಕಿಗೆ ಆಹುತಿಯಾದ ಬೆಳೆಗೆ ಬೆಳೆವಿಮೆ ಪರಿಹಾರ ಸಿಗುವಂತೆ ಮಾಡಬೇಕು.
8.ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಮಾತ್ರ ಬೆಳೆವಿಮೆ ಪರಿಹಾರ ಸಿಗುತ್ತದೆ. ಈ ರೀತಿ ಬೆಂಕಿ ಅವಘಡಗಳಿಂದ ಬೆಳೆ ಬೆಂಕಿಗೆ ಆಹುತಿಯಾದ ಸಂದರ್ಭದಲ್ಲಿ ಬೆಳೆವಿಮೆ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಬೇಕು.
9.ಈ ರೀತಿ ಬೆಂಕಿ ಅವಘಡ ಸಂಭವಿಸಿ, ನಷ್ಟ ಅನುಭವಿಸಿದ ರೈತರ ಸಾಲ ಮನ್ನಾ ಮಾಡಬೇಕು.
ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಹಾಗೂ ಮಾಜಿ ಎಪಿಎಂಸಿ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್ ರವರ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಶಿವಾನಂದ ಕಪಾಸಿ ಯವರು ಸಕಾರಾತ್ಮಕವಾಗಿ ಸ್ಪಂದಿಸಿ, ರೈತರ, ಕಬ್ಬು ಬೆಳೆಗಾರರ, ಬೆಸ್ಕಾಂ ಅಧಿಕಾರಿಗಳ, ಶುಗರ್ಸ್ ಕಂಪನಿಯವರ ಸಭೆ ಕರೆದು, ಕೂಲಂಕಷವಾಗಿ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ದಾವಣಗೆರೆ ದಕ್ಷಿಣ ಮಂಡಲ ಅಧ್ಯಕ್ಷರಾದ ಆನಂದರಾವ್ ಸಿಂದ್ಯೆ, ಬಿಜೆಪಿ ಮುಖಂಡರಾದ ಶಿರಮನಹಳ್ಳಿ ಎ ಎಂ ಮಂಜುನಾಥ, ವಾಸನ ಬಸವರಾಜ, ಬೇತೂರು ಬಸವರಾಜು, ಬಲ್ಲೂರು ಬಸವರಾಜಪ್ಪ, ಆರನೇ ಕಲ್ಲು ವಿಜಯಕುಮಾರ್, ಹೊಸಹಳ್ಳಿ ಶಿವಮೂರ್ತಿ, ಕೈದಾಳೆ ಗುರುಪ್ರಸಾದ, ತುರ್ಚಗಟ್ಟ ಕರಿಬಸಪ್ಪ, ಬಾತಿ ಎನ್ ಎಂ ಉಮೇಶ್, ಇಕ್ಬಾಲ್ ಅಹಮದ್, ಹದಡಿ ಬಳೆಯರ ವಿಜಯಕುಮಾರ್, ಕೊಳೇನಹಳ್ಳಿ ಹೆಚ್ ಸಿ ರೇಣುಕಾ ಮುಂತಾದವರು ಉಪಸ್ಥಿತರಿದ್ದರು.