Malaria: ವಿಶ್ವ ಮಲೇರಿಯಾ ದಿನದ ಅಂಗವಾಗಿ ಜಾಥಾ ಕಾರ್ಯಕ್ರಮ

Untitled

ದಾವಣಗೆರೆ (Malaria) :  ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಏಪ್ರಿಲ್ 25 ರಂದು ವಿಶ್ವ ಮಲೇರಿಯ ದಿನದ ಅಂಗವಾಗಿ ಇಲ್ಲಿ ಆಯೋಜಿಸಲಾಗಿದ್ದ ಜಾಥಾವನ್ನು ವಿಭಾಗೀಯ ಸಹ ನಿರ್ದೇಶಕರಾದ ಡಾ|| ನಂದಾ ಎನ್.ಎಸ್ ಹಾಗೂ ಜಿಲ್ಲಾ ಆರೋಗ್ಯ & ಕು.ಕ ಅಧಿಕಾರಿ ಡಾ|| ಷಣ್ಮುಖಪ್ಪ.ಎಸ್ ಈ ವರ್ಷ ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ. ಮರುಹೂಡಿಕೆ ಮಾಡಿ, ಮರು ಕಲ್ಪನೆ ಮಾಡಿ, ಮರು ಉತ್ತೇಜನ ನೀಡೋಣ ಎಂಬ ಘೋಷಣೆಯೊಂದಿಗೆ ಜಾಥಾಕ್ಕೆ ಚಾಲನೆ ನೀಡಿದರು.

2027 ರ ವೇಳೆಗೆ ಮಲೇರಿಯಾ ನಿವಾರಣಾ ಗುರಿ ಸಾಧನೆಯ ಉದ್ದೇಶದಿಂದ ಎಲ್ಲಾ ಹಂತಗಳಲ್ಲಿಯೂ ಕೈಗೊಳ್ಳಲಾಗಿರುವ ಚಟುವಟಿಕೆಗಳ ಪರಿಣಾಮವಾಗಿ ಕಳೆದ 3 ವರ್ಷಗಳಿಂದ ಕರ್ನಾಟಕ ರಾಜ್ಯವು ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ಸಾಧಿಸಬೇಕಾಗಿರುವುದರಿಂದ, ಎಲ್ಲ ಹಂತಗಳಲ್ಲೂ ಮಲೇರಿಯಾ ನಿವಾರಣಾ ಹಂತದಲ್ಲಿದ್ದು ಪ್ರಸ್ತುತ ಸಾಧನೆಯನ್ನು ಉಳಿಸಿಕೊಳ್ಳುವುದು ಮಹತ್ವದಾಗಿದೆ. ಅದರಂತೆ 2027 ರ ವೇಳೆಗೆ ಶೂನ್ಯ ಸ್ಥಳೀಯ ಮಲೇರಿಯಾವನ್ನು ಖಚಿತಪಡಿಸಿಕೊಂಡು ಶೂನ್ಯ ಮಲೇರಿಯಾ ವರ್ಗೀಕರಣವನ್ನು ಸಾಧಿಸಿ ಕೊನೆಯ ಮೈಲಿಗಲ್ಲನ್ನು ತಲುಪುವುದು ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ರಕ್ತ ಪರೀಕ್ಷೆ, ಜ್ವರ ಸಮೀಕ್ಷೆ, ಡಿ.ಡಿ.ಟಿ ಸಿಂಪರಣಾ ಕಾರ್ಯ, ಸಮಸ್ಯಾತ್ಮಾಕ ಪ್ರದೇಶಗಳಿಗೆ ಸೊಳ್ಳೆ ಪರದೆ ವಿತರಣೆ, ವಲಸೆ ಜನರ ಜ್ವರ ಸಮೀಕ್ಷೆ, ಸೊಳ್ಳೆ ನಿಯಂತ್ರಣಕ್ಕಾಗಿ ಲಾರ್ವಾಹಾರಿ ಮೀನುಗಳ ಬಿಡುಗಡೆ, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಾರ್ವಾಹಾರಿ ಮೀನುಗಳ ಸಾಕಾಣಿಕ ಕೇಂದ್ರಗಳ ಅಭಿವೃದ್ದಿ, ಕರಪತ್ರ, ಭಿತ್ತಿ ಪತ್ರ, ಮೈಕಿಂಗ್,ಸ್ಕ್ರೋಲಿಂಗ್ ಮೂಲಕ ಆರೋಗ್ಯ ಶಿಕ್ಷಣ ಮುಂತಾದ ಸಮರೋಪಾದಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಶ್ರಮ ವಹಿಸುತ್ತಿದೆ ಎಂದರು. ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುವ ಒಂದು ಪ್ರಮುಖ ಸಾಂಕ್ರಾಮಿಕ ರೋಗ.  ಸೋಂಕಿತ ಅನಾಫಿಲಿಸ್ ಜಾತಿಗೆ ಸೇರಿದ ಹೆಣ್ಣು ಸೊಳ್ಳೆಗಳು ಪ್ಲಾಸ್ಮೋಡಿಯ ರೋಗಾಣು ಹರಡಿಸುವುದರಿಂದ ಬರುವ ಖಾಯಿಲೆ

ಮಲೇರಿಯ, ಈ ರೋಗದ ಲಕ್ಷಣಗಳು, ದಿನ ಬಿಟ್ಟು ದಿನ ಚಳಿ, ನಡುಕ, ತಲೆನೋವು, ಜ್ವರ, ವಾಕರಿಕೆ, ಬಾಯಾರಿಕೆ, ಬೆವರುವುದು, ಸುಸ್ತು ಲಕ್ಷಣಗಳಾಗಿವೆ. ಮಲೇರಿಯಾ ಪತ್ತೆ ಹಚ್ಚುವ ವಿಧಾನ: ಮನೆ ಮನೆ ಭೇಟಿ ನೀಡಿ ಜ್ವರ ಪ್ರಕರಣಗಳಿಂದ ರಕ್ತಲೇಪನ ಸಂಗ್ರಹಿಸಿ ಪರೀಕ್ಷಿಸುವುದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಜ್ವರ ಪ್ರಕರಣಗಳಿಂದ ರಕ್ತಲೇಪನ ಸಂಗ್ರಹಿಸಿ ಪರೀಕ್ಷಿಸುವುದು. ವಿಶೇಷ ಸಮೀಕ್ಷೆ – ವಲಸೆ ಜನರ ಕಣ್ಗಾವಲು- ಹೊರ ರಾಜ್ಯಗಳಿಂದ ಬರುವ ಜನರ ರಕ್ತಲೇಪನ ಸಂಗ್ರಹಿಸಿ ಪರೀಕ್ಷಿಸುವುದು.

ಮಲೇರಿಯ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಕೈಗೊಳ್ಳುತ್ತಿರುವ ನಿಯಂತ್ರಣ ಕ್ರಮಗಳು:  ಶೀಘ್ರ ಪತ್ತೆ ಸಂಪೂರ್ಣ ಚಿಕಿತ್ಸೆ ,  24 ಘಂಟೆಗಳಲ್ಲಿ ರಕ್ತ ಲೇಪನಗಳ ಪರೀಕ್ಷೆ & ಚಿಕಿತ್ಸೆ,  ಎಲ್ಲ ಹಂತಗಳಲ್ಲಿ ವಲಸಿಗರ ಕಣ್ಗಾವಲು ನಡೆಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವುದು,  ಮಲೇರಿಯ ಪತ್ತೆಯಾದ ಗ್ರಾಮ, ಪ್ರದೇಶಗಳಲ್ಲಿ ಸಂಪರ್ಕ, ಸಮೂಹ ರಕ್ತಲೇಪನ ಸಂಗ್ರಹ & ಐ.ಇ.ಸಿ. ಚಟುವಟಿಕೆಗಳು,  ಎಸ್.ಪಿ ಕೀಟನಾಶಕ ಸಿಂಪರಣಾ ಕಾರ್ಯಕ್ರಮ, ಜೈವಿಕ ನಿಯಂತ್ರಣ ವಿಧಾನವಾದ ಲಾರ್ವಾಹಾರಿ ಮೀನುಗಳನ್ನು ಕೆರೆ,ಹೊಂಡ, ಬಾವಿ, ದೊಡ್ಡ ನೀರಿನ ತೊಟ್ಟಿಗಳಲ್ಲಿ ಬಿಡುಗಡೆಗೊಳಿಸುವ ಚಟುವಟಿಕೆ ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.

ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಹಾಗೂ ಸಿಬ್ಬಂದಿ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿಗಳು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಹಾಗೂ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಘೋಷಣೆಗಳನ್ನು ಕೂಗುವ ಮೂಲಕ ಜಾಥಾದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!