ಮಾಸ್ಕ್ ಧಾರಣೆ ಕಡ್ಡಾಯ, ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಡಿಸಿ ಸೂಚನೆ

ದಾವಣಗೆರೆ: ಕೊರೊನಾದ ಸಂಭವನೀಯ ಅಲೆ ಎದುರಿಸಲು ಎಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಆಸ್ಪತ್ರೆಗಳಲ್ಲಿ ಸಿದ್ಧತಾ ಪರೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ಕೊರೊನಾದ ಸಂಭವನೀಯ ಅಲೆಯನ್ನ ಅತ್ಯಂತ ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು.
ಸಂಭವನೀಯ ಕೊರೊನಾ ಅಲೆ ತಡೆಗಟ್ಟಲು ಅತೀ ಮುಖ್ಯವಾಗಿ ಸಾರ್ವಜನಿಕರೇ ಸ್ವಯಂ ಪ್ರೇರಣೆಯಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಬೂಸ್ಟರ್ ಡೋಸ್ ಪಡೆಯದೇ ಇದ್ದವರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಡಿಸೆಂಬರ್ನಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆ ಆಗಿಲ್ಲ. ದಾವಣಗೆರೆ ಒಳಗೊಂಡAತೆ ೧೮ ಜಿಲ್ಲೆಯಲ್ಲೂ ಸಕ್ರಿಯ ಪ್ರಕರಣಗಳಿಲ್ಲ. ಆದರೂ, ಮೈ ಮರೆಯುವಂತೆ ಇಲ್ಲ. ಎಲ್ಲರೂ ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ೧.೯೧ ಲಕ್ಷ ಜನ ಬೂಸ್ಟರ್ ಡೋಸ್ ಪಡೆದಿದ್ದಾರೆ. ಇನ್ನೂ ೬.೫ ಲಕ್ಷ ಜನರು ಪಡೆಯಬೇಕಿದೆ. ಜನವರಿಯಲ್ಲಿ ಶೇ.೫೦ ರಷ್ಟು ಜನರಿಗೆ ಬೂಸ್ಟರ್ ಡೊಸ್ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್, ಆಕ್ಸಿಜನ್, ಔಷಧ ಇತ್ಯಾದಿಗಳ ಕುರಿತು ಸಭೆ ನಡೆಸಿ ವಿವರ ಪÀಡೆಯಲಾಗಿದೆ. ಜ್ವರ, ಉಸಿರಾಟದ ಸಮಸ್ಯೆಯ ಲಕ್ಷಣಗಳು ಕಂಡು ಬಂದವರನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಒಳಾಂಗಣದಲ್ಲಿ ಮಾಸ್ಕ್ ಧರಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಚಿತ್ರಮಂದಿರಗಳಲ್ಲಿ ಮಾತ್ರ ಎನ್-೯೫ ಮಾಸ್ಕ್ ಧರಿಸುವುದನ್ನು ಸಿಬ್ಬಂದಿ ಖಚಿತ ಪಡಿಸಿಕೊಳ್ಳಬೇಕಿದೆ. ಮಾಸ್ಕ್ ಧರಿಸುವುದು ಸ್ವಯಂ ಶಿಸ್ತು ಹಾಗೂ ಸಲಹಾತ್ಮಕ ಕ್ರಮವಾಗಿದೆ ಎಂದು ಹೇಳಿದರು.