Matka(OC)Part – 2: ಮಟ್ಕಾ ದಂಧೆಗೆ ಗೋವಾ ವ್ಯಕ್ತಿ ಕಿಂಗ್ ಪಿನ್.!

Garudavoice Exclusive part – 2
ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ಮಟ್ಕಾದಂಧೆ ರಾಜಾರೋಷವಾಗಿ ನಡೆಯುತ್ತಿದ್ದ ಬಗ್ಗೆ ಹಾವೇರಿ ಪೊಲೀಸ್ ಇಲಾಖೆ ಮಾತ್ರ ಮೌನ ವಹಿಸಿದೆ ಎಂಬ ಸುದ್ದಿಯನ್ನು ಗರುಡವಾಯ್ಸ್ ತಂಡ ರಹಸ್ಯ ಕಾರ್ಯಾಚರಣೆ ಮೂಲಕ ಜುಲೈ 14 ರಂದು ವರದಿ ಮಾಡಿತ್ತು,
ವರದಿ ನೋಡಿದ ನಂತರ ಜುಲೈ 15 ರಂದು ಹಾವೇರಿ ಎಸ್ ಪಿ ಹನುಮಂತರಾಯ ನೇತೃತ್ವದ ಪೊಲೀಸ್ ತಂಡ ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿ 23 ಜನರನ್ನ ಬಂಧಿಸಿ ಭಾರಿ ಪ್ರಮಾಣದ 1,48,020. ಹಣವನ್ನ ವಶಕ್ಕೆ ಪಡೆಯಲಾಗಿತ್ತು. ಆದ್ರೆ ಹಾವೇರಿ ಜಿಲ್ಲೆಯ ಅನೇಕ ಕಡೆ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿರುವ ಮಾಹಿತಿ ಬಗ್ಗೆ ಎಸ್ ಪಿ ಹನುಮಂತರಾಯ ಅವರಿಗೆ ಸಂಪೂರ್ಣ ಮಾಹಿತಿ ಇಲ್ಲದಂತಾಗಿದೆ.
ಮಟ್ಕಾ ದಂಧೆಗೆ ಗುತ್ತಲ ಊರು ಹೆಸರುವಾಸಿ.!
ಹಾವೇರಿ ಜಿಲ್ಲೆ ತಾಲ್ಲೂಕಿನ ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 46 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮಟ್ಕಾ ದಂಧೆಗೆ ಬ್ರೇಕ್ ಹಾಕೋರೆ ಇಲ್ಲದಂತಾಗಿದೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 60 ಜನ ಮಟ್ಕಾ ಏಜೆಂಟ್ ರಿಂದ ಪ್ರತಿ ದಿನ 8 ರಿಂದ 9 ಲಕ್ಷ ಹಣದ ವ್ಯವಹಾರ ನಡೆಯುತ್ತಿದೆ ಎಂಬ ಭಯಾನಕ ವಿಚಾರ ಬಯಲಿಗೆ ಬಂದಿದೆ.
ಮಟ್ಕಾ ದಂಧೆಗೆ ಗೋವಾ ಬಿಡ್ಡರ್ ಕಿಂಗ್ ಪಿನ್.!
ಮಟ್ಕಾ ( OC ) ದಂಧೆಗೆ ಗೋವಾದ ನಸ್ರೂ ( ನಸರುಲ್ಲಾ) ಎಂಬ ಬಿಡ್ಡರ್ ತುಂಬಾ ಪ್ರಭಾವಿ ಅಂತಾರೆ ಏಜೆಂಟರು. ಏಜಂಟರಿಗೆ 100 ರೂಪಾಯಿಗೆ 15 ರೂಪಾಯಿ ಕಮಿಷನ್ ಸಿಗುತ್ತದೆ ಹಾಗಾಗಿ ಮಟ್ಕಾ ಚೀಟಿಯನ್ನು ಬರೆದು ಕೊಡುವವರ ಸಂಖ್ಯೆಯ ಪ್ರಮಾಣ ಕೂಡ ಜಾಸ್ತಿ ಅಗುತ್ತಿದೆ ಅಂತೆ. ಇಂತಹ ದಂಧೆಗೆ ಪ್ರತಿಷ್ಠಿತ ವ್ಯಾಪಾರಿಗಳು, ಸರ್ಕಾರಿ ನೌಕರರು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕರು ಮಟ್ಕಾದ ದಾಸರಾಗಿದ್ದಾರೆ. ಒಸಿ ನಂಬರ್ ಬಂದರೆ 1 ರೂಪಾಯಿಗೆ 80 ರೂಪಾಯಿ ಲಾಭ ಬರುತ್ತೆ ಅಂತಾ ಅನೇಕರು ತಾವು ಕಷ್ಟ ಪಟ್ಟು ದುಡಿದ ದುಡ್ಡನ್ನ ಇಂತಹ ಮಟ್ಕಾ ಏಜೆಂಟ್ ಹಾಗೂ ಬಿಡ್ಡರ್ ಗಳ ಸಂಚಿಗೆ ಬಲಿಯಾಗುತ್ತಿದ್ದಾರೆ.
ಮಟ್ಕಾ ದಂಧೆಗೆ ಎಸ್ ಪಿ ಹನುಮಂತರಾಯ ಬ್ರೇಕ್ ಹಾಕಲು ತಯಾರಿ.!
ದಾವಣಗೆರೆ-ಹರಿಹರ ಗಡಿ ಭಾಗದ ತುಂಗಭದ್ರಾ ನದಿ ಪಕ್ಕದ ಕೊಡಿಯಾಲ ಹೊಸಪೇಟೆ ಬಳಿಯ ಇಟ್ಟಿಗೆ ಬಟ್ಟಿಗಳ ಸಮೀಪದಲ್ಲಿ ಮಟ್ಕಾ ದಂಧೆಕರೋರರು ಜಾತ್ರೆಯ ಸ್ವರೂಪದಲ್ಲಿ ಮಟ್ಕಾ ಬರೆಯುತ್ತಿರುವುದು ಕಂಡು ಬಂದಿತ್ತು, ಆ ಸ್ಥಳದಿಂದ ಕೂಗಳತೆಯ ದೂರದಲ್ಲಿ ಪೊಲೀಸ್ ಠಾಣೆಯಿದ್ದರೂ ಇದ್ಯಾವುದಕ್ಕೂ ಸೊಪ್ಪು ಹಾಕದೆ ಮಟ್ಕಾ ಆಡುತ್ತಿದ್ದರೂ ಇದನ್ನು ಸದೆ ಬಡಿಯಬೇಕಾದ ಪೊಲೀಸರು ಮಾತ್ರ ಜಾಣ ಕುರುಡುತನ ತೋರುತ್ತಿದ್ದರು ಆದ್ರೆ ಹಾವೇರಿ ಎಸ್ ಪಿ ಹನುಮಂತರಾಯ ಖುದ್ದು ಖಾಸಗಿ ವಾಹನದಲ್ಲಿ ಹಾವೇರಿ ಪೊಲೀಸ್ ತಂಡದ ಜೊತೆ ಬಂದು ಮಟ್ಕಾ ಅಡ್ಡೆ ಮೇಲೆ ತಾವೇ ದಾಳಿ ಮಾಡಿದ್ದರು ಹಾಗೂ ಸ್ಥಳೀಯರ ಪ್ರಶಂಸೆಗೆ ಭಾಜನರಾಗಿದ್ದರು.
ಕಳೆದ ವಾರ ಪ್ರಕಟಗೊಂಡಿದ್ದ ಮಟ್ಕಾ ದಂಧೆಯ ಭಾಗ – 1 ರ ಗರುಡವಾಯ್ಸ್ ವರದಿ ಬಗ್ಗೆ ಎಸ್ ಪಿ ಹನುಮಂತರಾಯ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೀಗ ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ದಂಧೆಯನ್ನ ಯಾವ ರೀತಿ ಮಟ್ಟಾ ಹಾಕ್ತಾರೆ ಎಂಬುದನ್ನ ಸಾರ್ವಜನಿಕರು ಕಾಯುತ್ತಿದ್ದಾರೆ.