ಎಂಬಿಎ ಯುವಕನ ಪಾಲಿಗೆ ಖಾರವಾಯಿತು ಮೆಣಸಿನಕಾಯಿ.!?ಕಾರಣವೇನು ಗೊತ್ತಾ.!?
ದಾವಣಗೆರೆ: ಆತ ಒಬ್ಬ ಎಂಬಿಎ ಪದವೀಧರ. ಕೈ ತುಂಬಾ ಕೆಲಸ, ಸಂಬಳವೂ ಹೆಚ್ಚು ಕಡಿಮೆ ಸಿಗುತ್ತಿತ್ತು.ಆದರೆ ಆ ಯುವಕ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಊರಿಗೆ ಬಂದ.
ಹೀಗೆ ಕೃಷಿಯಲ್ಲಿ ಕನಸು ಹೊತ್ತು ತನ್ನ ಜಮೀನಿನಲ್ಲಿ ದುಡಿಯಲು ಬಂದವ. ಮೊದಲ ಹಂತವಾಗಿ ಎಂಭತ್ತು ಸಾವಿರ ಖರ್ಚು ಮಾಡಿ ಮೆಣಸಿನಕಾಯಿ ಬೆಳೆ ಹಾಕಿದ. ಗಿಡ ತುಂಬ ಮೆಣಸಿನಕಾಯಿ ಇತ್ತು. ಆದರೆ ಅಷ್ಟೊರೊಳಗೆ ಮಳೆರಾಯ ತನ್ನ ಪ್ರತಾಪ ತೋರಿದ್ದರಿಂದ ಇಷ್ಟು ದಿನ ಕಷ್ಟಪಟ್ಟಿದ್ದ ಬೆಳೆ ನೀರಿನಲ್ಲಿ ತೇಲಿ ಹೋಯಿತು.
ಹೌದು… ದಾವಣಗೆರೆ ತಾಲೂಕಿನ ಎಚ್. ಕಲ್ಪನಹಳ್ಳಿ ಗ್ರಾಮದ ನಿತಿನ್ ಎಂಬ ಯುವಕ ಮೆಣಸಿನಕಾಯಿ ಬೆಳೆ ಕನಸು ಹೊತ್ತಿದ್ದ ಎಂಬಿಎ ಪದವೀಧರ.ಪ್ರತಿ ದಿನ ತಾನೇ ಜಮೀನಿಗೆ ಬಂದು ಒಕ್ಕಲುತನ ಮಾಡುತ್ತಿದ್ದ.ಅಷ್ಟೊರೊಳಗೆ ಅಕಾಲಿಕ ಮಳೆ ಈ ಯುವಕನ ಕನಸನ್ನು ಕಿತ್ತುಕೊಂಡಿತ್ತು.
ನಾನು ಕೃಷಿ ಕನಸು ಹೊತ್ತು ಊರಿಗೆ ಬಂದೇ. ಮೊದ,ಮೊದಲು ಸಾಕಷ್ಟು ಆಸಕ್ತಿ ಇತ್ತು. ಈಗಲೂ ನನ್ನ ಉತ್ಸಾಹ ಕುಂದಿಲ್ಲ.ಕೃಷಿಯಲ್ಲಿ ಲಾಭ ನಷ್ಟ ಮಾಮೂಲು.ಈಗ ಸೋತಿರಬಹುದು.ಆದರೆ ಮುದೊಂದು ದಿವಸ ನಾನು ಗೆದ್ದೇ ಗೆಲ್ಲುತ್ತೇನೆ.ಅದಕ್ಕಾಗಿ ಮುಂದೆ ಬಾಳೆ ತೋಟ ಮಾಡಬೇಕೆಂದಿದ್ದೇನೆ ಅದರಲ್ಲಿ ಯಶಸ್ಸು ಕಾಣುತ್ತೇನೆ ಎನ್ನುತ್ತಾರೆ ನಿತಿನ್.
ಮೆಣಸಿನಕಾಯಿ ಫಸಲು ಬಹಳ ಚೆನ್ನಾಗಿ ಇತ್ತು, ಮಳೆ ಬಂದ ಕಾರಣ ಗಿಡದಲ್ಲಿಯೇ ಹಣ್ಣಾಗಿದೆ..ಇವುಗಳ ಮೇಲೆ ಇಬ್ಬನಿ ಬೀಳುತ್ತಿರುವುದರಿಂದ ರೋಗ ಹೆಚ್ಚಾಗಿದೆ. ಜತೆಗೆ ಮಳೆಯೂ ಬಂದಿದ್ದರಿಂದ ಗಿಡಗಳೆಲ್ಲ ಹಾಳಾಗಿದೆ..ಇದು ನನ್ನ ಒಬ್ಬನೇ ಪರಿಸ್ಥಿತಿ ಅಲ್ಲ ಸಾಕಷ್ಟು ರೈತರ ಬದುಕು ಹೀಗೆ ಇರೋದು.ಏನು ಮಾಡೋದಕ್ಕೆ ಆಗೋದಿಲ್ಲ.ಮುಂದೆ ಸಾಗುತ್ತಿರಬೇಕು.ಒಂದೊಲ್ಲ ಒಂದು ದಿವಸ ಕೃಷಿಯಲ್ಲಿ ಸಾಧನೆ ಮಾಡುತ್ತೇನೆ ಎನ್ನುತ್ತಾರೆ ಯುವ ರೈತ ನಿತಿನ್.
ಒಟ್ಟಾರೆ ಅಕಾಲಿಕ ಮಳೆ ಯುವ ರೈತನ ಕನಸು ಕಿತ್ತಿದೆ..ಈ ರೈತನ ಪಾಲಿಗೆ ಮೆಣಸಿನಕಾಯಿ ಖಾರವಾಗಿದೆ..ಆದರೆ ಈ ಯುವ ರೈತ ಮಾತ್ರ ಇನ್ನೂ ಕುಗ್ಗಿಲ್ಲ.ಏನಾದರೂ ಸಾಧನೆ ಮಾಡಬೇಕೆಂಬ ಹಠಕ್ಕೆ ಬಿದ್ದಿದ್ದಾನೆ.ಅಲ್ಲದೇ ಮುಂದೊಂದು ದಿನ ನಾನೇ ಇತರೆ ರೈತರಿಗೆ ಮಾದರಿಯಾಗುತ್ತೇನೆ ಎಂಬ ದೃಢ ಆತ್ಮವಿಶ್ವಾಸ ಇಟ್ಟಿದ್ದಾನೆ.