ಅನಕ್ಷರಸ್ಥರಿಗಿಂತ ಬುದ್ದಿವಂತರು, ವಿದ್ಯಾವಂತರು, ಹಣವಂತರೇ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವುದು : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ : ಹೆಣ್ಣು ಮಕ್ಕಳನ್ನು ಎಲ್ಲಿ ಪೂಜೆ ಮಾಡಲಾಗುತ್ತದೆಯೋ ಅಲ್ಲಿ ದೇವರುಗಳು ನೆಲೆಸಿರುತ್ತಾರೆ ಎಂದು ವೇದೋಪನಿಷತ್ತು, ಭಗವದ್ಗೀತೆಗಳಲ್ಲಿ ಹೇಳಿರುವುದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೂ ಸಹ ಇಂದು ಹೆಣ್ಣು ಮಕ್ಕಳನ್ನು ಎಂದು ಗೊತ್ತಾದ ತಕ್ಷಣ ಭ್ರೂಣ ಹತ್ಯೆ ಮಾಡುವ ಪ್ರಕ್ರಿಯೆ ಹೆಚ್ಚು ಬಳಕೆ ಬರುತ್ತಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿನ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅರಿವು ಮೂಡಿಸುವ ಕಾರ್ಯಗಾರವನ್ನು ಇಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಬಳಿ ಇರುವ ಗಾಂಧಿ ಭವನದಲ್ಲಿ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುವುದಿಲ್ಲವೋ ಅಲ್ಲಿ ದೇವರುಗಳು ಇರುವುದಿಲ್ಲ. ಅಲ್ಲಿ ಯಾವುದೇ ಫಲ ಸಿಗದೇ ನಶ್ವರವಾಗಿ ಉಳಿದುಬಿಡುತ್ತೇವೆ ಎಂದು ಹೇಳಿದರು.
ಲಿಂಗಪತ್ತೇ ಮಾಡಿ ಹೆಣ್ಣು ಭ್ರೂಣ ಎಂದು ತಿಳಿದ ತಕ್ಷಣ ಭ್ರೂಣ ಹತ್ಯೆ ಮಾಡುವವರಲ್ಲಿ ಅನಕ್ಷರಸ್ಥರಿಗಿಂತ ಬುದ್ದಿವಂತರು, ವಿದ್ಯಾವಂತರು, ಹಣವಂತರೇ ಹೆಚ್ಚು ಎಂದು ಹೇಳಲು ಬೇಸರವೆನಿಸುತ್ತದೆ.ಹೆಣ್ಣಿನ ಜೀವ ಅನಾಮತ್ತಾಗಿ ಹೋಗುತ್ತಿದೆ. ನಾವು ಬದಲಾದರೆ ನಾಡೆಲ್ಲಾ ಬದಲಾಗುತ್ತದೆ. ಮತ್ತೋಬ್ಬರಲ್ಲಿ ನಾವು ಬಯಸುವ ಬದಲಾವಣೆ ಮೊದಲು ನಮ್ಮಲ್ಲಾಗಬೇಕು ಎಂದರು. ಹೆಣ್ಣು ಹೆತ್ತವರ ಮನೆ ತಂಪಿರುತ್ತದೆ. ಹೆಣ್ಣು ಮಕ್ಕಳು ಎಲ್ಲರ ಬಗ್ಗೆ ಪ್ರೀತಿ, ವಿಶ್ವಾಸ, ಕಳಕಳಿ ವ್ಯಕ್ತಪಡಿಸಿ, ತಂದೆ-ತಾಯಿಯರು ಸ್ವರ್ಗಕ್ಕೆ ಹೋಗಬೇಕು ಎಂದು ಬಯಸುವ ಮನಸ್ಥಿತಿಯವರು. ಇಂತಹ ಹೆಣ್ಣನ್ನು ಪತ್ತೆ ಮಾಡಿ ಭ್ರೂಣ ಹತ್ಯೆ ಮಾಡಲಾಗುತ್ತಿದೆ. ಇಂತಹ ಅಕ್ರಮ ಚಟುವಟಿಕೆಗಳ ವಿರುದ್ದ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಬೇಕು. ದಾವಣಗೆರೆ ನಗರದಲ್ಲಿ 79 ಸ್ಕಾನಿಂಗ್ ಸೆಂಟರ್ಗಳಿವೆ, ಆ ಎಲ್ಲಾ ಸ್ಕಾನಿಂಗ್ ಸೆಂಟರ್ಗಳಿಗೆ ಸಂಬಧಪಟ್ಟ ಅಧಿಕಾರಿಗಳು ಸಪ್ರೆಸ್ ಭೇಟಿ ಮಾಡಿ ಅಕ್ರಮವಾಗಿ ಲಿಂಗಪತ್ತೆ ಮಾಡುವ ಸ್ಕಾನಿಂಗ್ ಸೆಂಟರ್ಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಅಕ್ರಮ ಕೆಲಸಕ್ಕೆ ಕಠಿಣ ಶಿಕ್ಷೆ ಇದೆ ಎನ್ನುವುದನ್ನು ಅರ್ಥೈಸಬೇಕು ಎಂದು ಹೇಳಿದರು.
ಎಎಸ್ಪಿ ಆರ್.ಪಿ ಬಸರಿ ಮಾತನಾಡಿ, ಈ ಹಿಂದೆ ಈಗ ಕಾನೂನು ಸಡಿಲವಾಗಿಲ್ಲ, ಇಂತಹ ಅಕ್ರಮ ಚಟುವಟಿಕೆಗಳಿಗೆ ದಂಡ ಮತ್ತು ಕಠಿಣ ಶಿಕ್ಷೆ ವಿಧಿಸುವ ಕಾನೂನುಗಳಿವೆ. ಈ ಕಾನೂನುಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕಿದೆ. ಲಿಂಗತಾರತಮ್ಯ ಮಾಡಬಾರದು, ಲಿಂಗಾ ಅನುಪಾತದಲ್ಲಿ ಸಮತೋಲನ ತರುವ ಪ್ರಯತ್ನ ಮಾಡೋಣ, ಲಿಂಗಪತ್ತೆ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊವೀಡ್-19 ಹಾಗೂ ಲಸಿಕಾಕರಣಕ್ಕಾಗಿ ಶ್ರಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಕ್ಷಯರೋಗ ನಿರ್ಮೂಲನೆಯಲ್ಲಿ ವಿಶೇಷ ಪಾತ್ರವಹಿಸಿದ ದಾವಣಗೆರೆ ಜಿಲ್ಲೆಗೆ ಕಂಚಿನ ಪದಕ ಬರಲು ಶ್ರಮಿಸಿದ ಕ್ಷಯರೋಗ ನಿರ್ಮೂಲನಾಧಿಕಾರಿ ಗಂಗಾಧರ್ ಹಾಗೂ ಸಿಬ್ಬಂದಿ ಕಾರ್ಯವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶ್ಲಾಘಿಸಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವಿಜಯಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎಂ ರೇಣುಕಾರಾಧ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಶೋಕ್ಕುಮಾರ್.ಡಿ, ಆಯುಷ್ ಅಧಿಕಾರಿ ಶಂಕರಗೌಡ, ಜಿಲ್ಲಾ ಸಲಹಾ ಸಮಿತಿ ಸದಸ್ಯರು ಗಳಾದ
ಎಂ ಜಿ ಶ್ರೀಕಾಂತ್. ಶಾರದಾ ಮಾಗಾನಹಳ್ಳಿ ಹಾಗೂ ಆಶಾ ಕಾರ್ಯಕರ್ತೆಯರು, ಇತರರು ಹಾಜರಿದ್ದರು.