ಎಂ.ಪಿ.ರವೀಂದ್ರ ಜನಪರ ಕಾಳಜಿ ನನಗೆ ಪ್ರೇರಣೆ: ಎಂ.ಪಿ.ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ: ಮಾಜಿ ಶಾಸಕ, ಸಹೋದರ ಎಂ.ಪಿ.ರವೀಂದ್ರ ಅವರ ಜನಪರ ಕಾಳಜಿ ಮತ್ತು ಅಭಿವೃದ್ದಿ ಕೆಲಸಗಳೇ ನಾನು ಜನ ಸೇವೆ ಮಾಡಲು ಪ್ರೇರಣೆಯಾಗಿವೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರ 53ನೇ ಜನ್ಮ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿ ಅವರು ಮಾತನಾಡಿದರು.
ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಆದರೆ ಅದನ್ನು ಅಳಿಸಲು ಹಾಕಲು ರವೀಂದ್ರ ನಿರಂತರವಾಗಿ ಶ್ರಮಿಸಿದ್ದಾರೆ. ತಾಲೂಕನ್ನು 371ಜೆ ಕಲಂನಡಿ ಸೇರ್ಪಡೆ,60 ಕೆರೆಗಳಿಗೆ ತುಂಗಭದ್ರ ನದಿಯಿಂದ ನೀರು ತುಂಬಿಸುವುದು, ಗರ್ಭಗಡಿ ಬಿಡ್ಜ್ ಕಂ ಬ್ಯಾರೇಜ್ ಯೋಜನೆಗೆ ಚಾಲನೆ ನೀಡುವ ಮೂಲಕ ನೆನೆಗುದಿಗೆ ಬಿದಿದ್ದ ಯೋಜನೆಗಳಿಗೆ ಮುಕ್ತಿ ನೀಡಿದ್ದಾರೆ. ಕ್ಷೇತ್ರದಲ್ಲಿ ರವೀಂದ್ರ ಜನರ ಜೊತೆ ಬೆರೆತ್ತಿರುವ ಒಡನಾಟ ಕಂಡು ಮೂಕಸ್ಮಿತಳಾಗಿದ್ದೇನೆ ಎಂದರು.
ಕ್ಷೇತ್ರದಲ್ಲಿ ಯಾವುದೇ ಜಾತಿ, ಧರ್ಮ ಬೇಧಬಾವ ಮಾಡದೇ ಎಲ್ಲರ ಪ್ರೀತಿ ಗಳಿಸಿರುವುದು ರವೀಂದ್ರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಅಲಕ್ಷಿತ ಸಮುದಾಯಗಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತಂದಿದ್ದಾರೆ. ಯುವಕರ ಪಡೆ ಕಟ್ಟಿ ಹೊಸ ಮೈಲುಗಲ್ಲು ಬರೆದಿದ್ದಾರೆ. ರವೀಂದ್ರ ಕೇವಲ ನನ್ನ ಸಹೋದರನಲ್ಲ, ನನ್ನ ಪಾಲಿನ ಶಕ್ತಿಯಾಗಿದ್ದಾನೆ. ನಮ್ಮನ್ನು ಇಷ್ಟು ಬೇಗ ಅಗಲಿ ಹೋಗುತ್ತಾನೆ ಎಂದುಕೊಂಡಿರಲಿಲ್ಲ. ಕ್ಷೇತ್ರದ
ಪ್ರತಿಯೊಬ್ಬ ಯುವಕರಲ್ಲಿಯೂ ರವೀಂದ್ರ ಕಾಣಿಸುತ್ತಿದ್ದಾನೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಹೆಚ್.ಎಂ.ಮಲ್ಲಿಕಾರ್ಜುನ್ ಮಾತನಾಡಿ, ಹರಪನಹಳ್ಳಿ ಕ್ಷೇತ್ರದಲ್ಲಿ ರವೀಂದ್ರ ಹಿಂದೆಯೂ ಕಾಣದಂತಹ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಕ್ಷೇತ್ರದಲ್ಲಿ ಎಂದಿಗೂ ಅಳಿಸಲಾಗದಂತಹ ಹೆಜ್ಜೆ ಗುರುತುಗಳನ್ನು ಮೂಡಿಸಿ ಹೋಗಿದ್ದಾರೆ. ಅವರ ಎಲ್ಲಾ ಸಾಮಾಜಿಕ, ಧಾರ್ಮಿಕ ಸೇರಿದಂತೆ ಜನಪರ ಕೆಲಸಗಳನ್ನು ಮುಂದುವರೆಸಿಕೊಂಡು
ಹೋಗುತ್ತಿದ್ದೇವೆ ಎಂದರು.
ಪಟ್ಟಣದ ಕಚೇರಿಯಲ್ಲಿ ದಿ.ಎಂ.ಪಿ.ರವೀಂದ್ರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಲಾಯಿತು. ನಂತರ ಹೂವಿನ ಹಡಗಲಿಗೆ ತೆರಳಿ ಅವರ ಸಮಾದಿಗೆ ಪುಷ್ಪನಮನ ಸಲ್ಲಿಸಿ ಪೂಜೆ ಸಲ್ಲಿಸಲಾಯಿತು.
ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪಿ.ಜಯಲಕ್ಷ್ಮಿ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್, ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಉದಯಶಂಕರ್, ಮುಖಂಡರಾದ ಗೌತಮ್ ಪ್ರಭು, ಪ್ರಸಾದ್ ಕವಾಡಿ, ಎಂ.ವಿ.ಚಿರಂಜೀವಿ, ಉಮಾಶಂಕರ್, ಕುಶಾಲ್, ಗರ್ಭಗುಡಿ ಕೋಟ್ರೇಶ್, ಸಾಸ್ವಿಹಳ್ಳಿ ನಾಗರಾಜ್, ಅಶಫ್ಅಲಿ ಇತರರಿದ್ದರು.
ಸುದ್ದಿಗಾಗಿ ಸಂಪರ್ಕಿಸಿ :- garudavoice21@gmail.com
9740365719