ದಾವಣಗೆರೆ ನಗರದಲ್ಲಿ “ಮುಗಿಲ್ ಪೇಟೆ ” ಚಿತ್ರತಂಡದಿಂದ ಪ್ರಮೋಷನ್

ದಾವಣಗೆರೆ: ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ‘ಮುಗಿಲ್ ಪೇಟೆ’ ಚಿತ್ರ ತಂಡ ಇಂದು ನಗರಕ್ಕೆ ಆಗಮಿಸಿ ಸಿನಿಮಾದ ಪ್ರಮೋಷನ್ ಕಾರ್ಯ ನೆರವೇರಿಸಿತು.
ಮುಗಿಲ್ ಪೇಟೆ ಚಿತ್ರವು ಇದೇ ನ.19 ರಂದು ರಾಜ್ಯಾದ್ಯಂತ ತೆರೆಕಾಣುವ ಹಿನ್ನೆಲೆಯಲ್ಲಿ ನಗರದ ನೂತನ ಮತ್ತು ದವನ್ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಿನೆಮಾದ ನಾಯಕ ನಟ ಮನೋರಂಜನ್ ಪ್ರಚಾರ ನಡೆಸಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮನೋರಂಜನ್, ಭರತ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಪುಣೆಯ ಕಯಾದು ಲೋಹರ್ ನಾಯಕಿಯಾಗಿ ನಟಿಸಿದ್ದಾರೆ.ಚಿತ್ರವನ್ನು ಸಕಲೇಶಪುರ, ಚಿಕ್ಕಮಗಳೂರು, ತೀರ್ಥಹಳ್ಳಿ, ಕುಂದಾಪುರ, ಬೆಂಗಳೂರು ಸೇರಿ ಸಂಪೂರ್ಣ ಕರ್ನಾಟಕದಲ್ಲಿಯೇ ‘ಮುಗಿಲ್ ಪೇಟೆ’ ಚಿತ್ರದ ಚಿತ್ರೀಕರಣ ಮಾಡಲಾಗಿದೆ ಎಂದರು.
ತಾವು ಈಗಾಗಲೇ ‘ಸಾಹೇಬ’ ಮತ್ತು ‘ಬೃಹಸ್ಪತಿ ಸಿನೆಮಾ ಮಾಡಿದ್ದು, ಇದು ತಾವು ನಟಿಸಿರುವ ಮೂರನೇ ಚಿತ್ರ. ಪ್ರೇಮ, ಕಾಮಿಡಿ, ಸಾಹಸ ಇರುವ ಚಿತ್ರವಾಗಿದೆ. ಕುಟುಂಬ ಸಮೇತರಾಗಿ ಆಗಮಿಸಿ ನೋಡುವ ಸಿನಿಮಾ ಎಂದು ಹೇಳಿದರು.
ಸಿನಿಮಾದಲ್ಲಿ ತಾರಾ, ಅವಿನಾಶ್, ಸಾಧುಕೋಕಿಲ, ರಂಗಾಯಣರಘು ಸೇರಿದಂತೆ ಇನ್ನಿತರ ಕಲಾವಿದರು ನಟಿಸಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ನಿರ್ದೇಶನವಿದೆ. ಮೋತಿ ಮಹೇಶ್ ಹಾಗೂ ರಕ್ಷಾ ವಿಜಯಕುಮಾರ್ ನಿರ್ಮಾಪಕರಾಗಿದ್ದಾರೆ. ರವಿವರ್ಮ ಹಾಗೂ ವಿಜಯ ಮಾಸ್ಟರ್ ಸಾಹಸ ಚಿತ್ರಕ್ಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ನಾಗರಾಜ್, ವಿ. ರವಿಚಂದ್ರನ್ ಅಭಿಮಾನಿ ಬಳಗ ಅಧ್ಯಕ್ಷ ಮನು, ಸಿಪಾಯಿ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ರಂಗನಾಥ್, ಚೇತನ್, ಗಣೇಶ್ ಚಿನ್ನಿಕಟ್ಟೆ ಇನ್ನಿತರರು ಉಪಸ್ಥಿತರಿದ್ದರು.