ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ ಎಂದು ಸಿದ್ದರಾಮಯ್ಯ ಘೋಷಿಸಲಿ: ಸಂಸದ ನಳೀನ್ ಕುಮಾರ್ ಕಟೀಲ್

ಚಿತ್ರದುರ್ಗ: ದಲಿತರನ್ನು ಸಿಎಂ ಮಾಡುವಂತೆ ಆಗ್ರಹಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಲಿತರ ಬಗ್ಗೆ ಕಾಳಜಿಯಿದ್ದರೆ ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ ಎಂದು ಘೋಷಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸವಾಲು ಹಾಕಿದ್ದಾರೆ.
ಚಿತ್ರದುರ್ಗದ ವಿದ್ಯಾದಾನ ಸೌಧ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅವರ ಪಕ್ಷಕ್ಕೆ ಅಧಿಕಾರಕ್ಕೆ ಬರದೆ ಸಿದ್ದರಾಮಯ್ಯ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಡಿಕೆಶಿ, ಸಿದ್ಧರಾಮಯ್ಯರಿಂದ ಸಿಎಂ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ. ಇವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಇಷ್ಟು ವರ್ಷಗಳ ಕಾಲ ಪಕ್ಷಕ್ಕೆ ದುಡಿದಿರುವ ಖರ್ಗೆಯವರನ್ನೇ ಸಿಎಂ ಸ್ಥಾನಕ್ಕೆ ಘೋಷಿಸಲಿ ಎಂದು ಸವಾಲು ಎಸೆದರು.
ಈಗ ದಲಿತಪರ ಕಾಳಜಿ ತೋರುವ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಅಡ್ಡಿಯಾಗುವ ಕಾರಣಕ್ಕೆ ಪರಮೇಶ್ವರ ಅವರನ್ನು ಸ್ವಜಾತಿಯವರನ್ನು ಬಳಸಿಕೊಂಡು ಸೋಲಿಸಿದರು. ಸಿದ್ಧರಾಮಯ್ಯ ಶಿಷ್ಯ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಬಿದ್ದಿತ್ತು. ಈವರೆಗೆ ಅಖಂಡ ಶ್ರೀನಿವಾಸ್ ಗೆ ನ್ಯಾಯ ಕೊಡುವ ಗೋಜಿಗೆ ಸಿದ್ದರಾಮಯ್ಯ ಹೋಗಿಲ್ಲ ಎಂದು ಆರೋಪಿಸಿದರು.
ಡಿಕೆಶಿ ಮುಗಿಸುವ ತಂತ್ರವನ್ನು ಸಿದ್ಧರಾಮಯ್ಯ ನಿಲ್ಲಿಸಲಿ.
ದಲಿತರು ಮಾತ್ರವಲ್ಲ ಡಿಕೆಶಿ ಮುಗಿಸುವ ಷಡ್ಯಂತ್ರ ಕಾಂಗ್ರೆಸ್ ನಲ್ಲಿ ನಡೆದಿದೆ. ಸಿದ್ಧರಾಮಯ್ಯ ಚಾಮುಂಡೇಶ್ವರಿಯಿಂದ ಬಾದಾಮಿ ಕ್ಷೇತ್ರಕ್ಕೆ ಬಂದಿದ್ದಾರೆ. ಈಗ ಬಾದಾಮಿ ಕ್ಷೇತ್ರ ಬಿಡುವ ಹಂತದಲ್ಲಿದ್ದಾರೆ ಎಂದರು.
ಮಾಜಿ ಸಿಎಂ ಸಿದ್ಧರಾಮಯ್ಯ ಸಿಎಂ ಆಗುವ ಕನಸು ಬಿಡಲಿ. ಯಾಕೆಂದರೆ ಬಿಎಸ್ ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯ, ಪಕ್ಷದ ಚಿಂತನೆಗೆ ಯಶಸ್ಸು ಸಿಗಲಿದೆ. ಮುಂದಿನ ಚುನಾವಣೆ ಗೆದ್ದು ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸೇರಿದಾಕ್ಷಣ ಸಿದ್ಧರಾಮಯ್ಯ ಸಿಎಂ ಆದರು. ಅವರಿಗೆ ಕಾಂಗ್ರೆಸ್ ಇತಿಹಾಸ ತಿಳಿಯಲು ಪುರಸೊತ್ತಿಲ್ಲ. ಜೆಡಿಎಸ್ ನ ಪಾಠ ಓದಿದವರು ಕಾಂಗ್ರೆಸ್ ಸೇರಿದಾಕ್ಷಣ ಸಿಎಂ ಆದರು. ಸಿದ್ಧರಾಮಯ್ಯ ನನಗೆ ಒಳ್ಳೆಯವರು, ಶ್ರೇಷ್ಠ ನಾಯಕರು. ಸ್ವಜಾತಿಯವರನ್ನು ಬಳಸಿಕೊಂಡು ಪರಮೇಶ್ವರ್ ಸೋಲಿಸಿದ್ದರು ಎಂದು ಕುಟುಕಿದರು.