ಮುಂಬೈ ಸ್ನೇಹಿತರ ಖಾತೆ ಖ್ಯಾತೆಗೆ ಮುದ್ದಾದ ಉತ್ತರ ನೀಡಿದ ಮುನಿರತ್ನ

ತುಮಕೂರು: ತಮಗೆ ನೀಡಿರುವ ಖಾತೆ ಬಗ್ಗೆ ಆಕ್ಷೇಪವೆತ್ತಿ ಇದೇ ಖಾತೆ ಬೇಕು, ಅದೇ ಬೇಕು ಎನ್ನುತ್ತಿರುವ ವಲಸೆ ಬಂದವರಿಗೆ ತೋಟಗಾರಿಕೆ ಖಾತೆಯ ನೂತನ ಸಚಿವ ಮುನಿರತ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಸಿದ್ದಗಂಗಾ ಮಠಕ್ಕೆ ಆಗಮಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷದಿಂದ ಬಿಜೆಪಿಗೆ ಬಂದವರು ಕನಿಷ್ಟ ಎರಡು ವರ್ಷವಾದರೂ ಪಕ್ಷಕ್ಕಾಗಿ ದುಡಿಯಬೇಕು, ನಂತರ ನಾವೂ ಯಾವ ಖಾತೆ ಬೇಕಿದ್ದರೂ ಕೇಳಬಹದು. ನಾನೂ ಎರಡು ವರ್ಷ ಸುಮ್ಮನಿದ್ದೆ ಈಗ ಪಕ್ಷ ನನ್ನನ್ನು ಗುರುತಿಸಿ ಒಂದು ಜವಾಬ್ದಾರಿ ನೀಡಿದೆ. ಅದನ್ನು ನಾನು ನಿಭಾಯಿಸಬೇಕು. ಅದನ್ನು ಬಿಟ್ಟು ಇದೇ ಖಾತೆ ಕೊಡಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದರು.
ಬೇರೆ ಪಕ್ಷ ಬಿಟ್ಟು ತ್ಯಾಗ ಮಾಡಿದ್ದೇವೆ ಎನ್ನುವುದು ಸರಿಯಲ್ಲ. ಅಲ್ಲಿ ತ್ಯಾಗ ಮಾಡಿದ್ದಕ್ಕೆ ಈಗ ಸಚಿವ ಸ್ಥಾನ ಸಿಕ್ಕಿದೆ.ಅದಕ್ಕೆ ಖುಷಿ ಪಡಬೇಕು. ಅದನ್ನು ಬಿಟ್ಟು ಕೊಟ್ಟಿರುವ ಖಾತೆ ನಿಭಾಯಿಸಲಾಗದೆ ಮೊದಲಿದ್ದದ್ದೇ ಖಾತೆ ಕೊಡಿ, ಅಥವಾ ಬೇರೆ ಖಾತೆ ಕೊಡಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಕುಟುಕಿದರು.
ಸದ್ಯಕ್ಕೆ ತಾಳ್ಮೆಯಿಂದ ಇರಬೇಕು, ಎಲ್ಲ ಇವತ್ತೇ ಆಗಬೇಕು ಅಂದರೆ ಹೇಗೆ? ನೀವು ಬಂದಿರುವ ಉದ್ದೇಶವಾದರೂ ಏನು? ಇವತ್ತು ಏನು ಸಿಗುತ್ತದೆಯೋ ಅದನ್ನು ಅನುಭವಿಸಬೇಕು. ಅದನ್ನು ನಿಭಾಯಿಸಬೇಕು. 105 ಶಾಸಕರು ಇಲ್ಲದಿದ್ದರೆ ನಾವು ಮಂತ್ರಿಗಳಾಗುತ್ತಿದ್ದೆವಾ? 105 ಶಾಸಕರು ಇದ್ದಿದ್ದಕ್ಕೆ ಅಲ್ವಾ ನಾವು ಮಂತ್ರಿಗಳಾಗಿದ್ದು? ಎಂದು ಅವರು ಪ್ರಶ್ನಿಸಿದರು.