ಪಕ್ಷಕ್ಕೆ ಮೋಸ ಮಾಡಿದ್ದು ಯಾರೆಂಬುದನ್ನ ದೇವರಮನಿ ಶಿವಕುಮಾರ್ ಆತ್ಮಾವಲೋಕನ ಮಾಡಿಕೊಳ್ಳಲಿ: ಹರೀಶ್ ಬಸಾಪುರ

ದಾವಣಗೆರೆ: ನಿಮ್ಮಿಂದ ಕಾಂಗ್ರೆಸ್ ಪಕ್ಷಕ್ಕೆ ಮೋಸವಾಗಿದೆಯೋ? ಪಕ್ಷದಿಂದ ನಿಮಗೆ ಮೋಸವಾಗಿದೆಯೋ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಡೂಡಾ ನೂತನ ಅಧ್ಯಕ್ಷ ದೇವರಮನೆ ಶಿವಕುಮಾರ್ ಗೆ ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್.ಹರೀಶ್ ಬಸಾಪುರ ಹೇಳಿದ್ದಾರೆ.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನವಾಗಿ ದೇವರಮನೆ ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದಾರೆ ಅವರಿಗೆ ಅಭಿನಂದನೆಗಳು. ಆದರೆ, ಅವರು ತಮ್ಮ ತಾವು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿರುವ ಕಾರಣ ಎಲ್ಲರಿಗೂ ತಿಳಿದಿದೆ, ಪಕ್ಷದಲ್ಲಿದ್ದಾಗ ಯಾವ ನೋವಿತ್ತು ಏನಿಲ್ಲ ಸಮಸ್ಯೆ ಅನುಭವಿಸಿದೆ ಎಂಬುದು ನನಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ. ಅಧಿಕಾರದ ಆಸೆಗಾಗಿ ಮೇಯರ್ ಚುನಾವಣೆಯ ಕೊನೆಯ ಕ್ಷಣದಲ್ಲಿ ರಾತ್ರೋರಾತ್ರಿ ಹೋದ ನೀವು ಈ ಮಾತುಗಳನ್ನು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಮಹಾನಗರಪಾಲಿಕೆಯ 22ನೇ ವಾರ್ಡ್ ಯಲ್ಲಮ್ಮ ನಗರ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು, ಅಲ್ಲಿ ಪಕ್ಷಕ್ಕಾಗಿ ದುಡಿದ ಅನೇಕ ನಾಯಕರುಗಳು ಇದ್ದರು, ಆದರೂ ನಮ್ಮ ಪಕ್ಷದ ಹೈಕಮಾಂಡ್ ಎಂದು ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡದ ನಿಮ್ಮನ್ನು ಕರೆತಂದು ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದದ್ದು, ಕಾಂಗ್ರೆಸ್ ಪಕ್ಷ ನಿಮಗೆ ಮಾಡಿದ ಮೋಸವೇ ಬಿಡಿ ಎಂದು ಕುಟುಕಿದ್ದಾರೆ.
ಮೂರ್ನಾಲ್ಕು ಬಾರಿ ಗೆದ್ದು, ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಂತಹ ಪಕ್ಷದ ಪಾಲಿಕೆಯ ಸದಸ್ಯರುಗಳು ಇದ್ದರೂ ಸಹ ಪ್ರಥಮ ಬಾರಿ ಗೆದ್ದಂಥಾ ನಿಮ್ಮನ್ನು ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಕಾಂಗ್ರೆಸ್ ಪಕ್ಷ ನಿಮಗೆ ನೀಡಿದ ನೋವು ಅಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.
ಮೇಯರ್ ಚುನಾವಣೆಗೆ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಎರಡು ಬಾರಿ ಬಂದಿದ್ದು, ಮುಂದೆ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬರುವುದಿಲ್ಲ ಎಂದು ಅರಿತು, ಟಿಕೆಟ್ ನೀಡಿದ ಪಕ್ಷಕ್ಕೆ, ಗೆಲ್ಲಿಸಿಕೊಂಡು ಬಂದಂತಹ ಮುಖಂಡರು, ಕಾರ್ಯಕರ್ತರುಗಳಿಗೆ ನೀವು ಮೋಸ, ನೋವು ಮಾಡಿರುವಿರಿ ವಿನಹ ಪಕ್ಷವಾಗಲಿ, ಪಕ್ಷದ ಮುಖಂಡರುಗಳಾಗಲಿ ಕಾರ್ಯಕರ್ತರುಗಳಾಗಲಿ ಅಲ್ಲ ಎಂಬುದು ತಿಳಿಯಿರಿ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ನಿಮಗೆ ಟಿಕೆಟ್ ನೀಡಿ ಪಾಲಿಕೆ ಸದಸ್ಯರನ್ನಾಗಿ ಮಾಡಿದ ಕಾರಣದಿಂದಾಗಿಯೇ, ಇಂದು ನಿಮಗೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಒಲಿದಿರುವುದು ಎಂಬುದನ್ನು ತಿಳಿದು ನಮ್ಮ ಪಕ್ಷದ ನಾಯಕರುಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದ್ದಾರೆ.