ಪ್ರಧಾನಿ ಮೋದಿ ಮಾ.25 ರಂದು ದಾವಣಗೆರೆಗೆ: 20 ರಂದು ಬಿಜೆಪಿ ಯೋವ ಮೋರ್ಚಾದಿಂದ ಬೈಕ್ ಜಾಥಾ
ದಾವಣಗೆರೆ– ಇದೇ ಮಾ. 25 ರಂದು ದಾವಣಗೆರೆಯಲ್ಲಿ ನಡೆಯುವ ಮಹಾ ಸಂಗಮ ಸಮಾವೇಶದ ಅಂಗವಾಗಿ ಬಿಜೆಪಿ ಯುವ ಮೋರ್ಚಾದಿಂದ ಮಾ. 20ರ ಸೋಮವಾರ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಮಹಾಸಂಗಮ ಸಮಾವೇಶದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯರೂ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರೂ ಆದ ಆರ್.ಎಲ್. ಶಿವಪ್ರಕಾಶ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸಂಜೆ 4ಕ್ಕೆ ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾಗುವ ರ್ಯಾಲಿ ಯನ್ನು ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಲಿದ್ದಾರೆ. ಶಾಸಕ ಎಸ್. ಎ. ರವೀಂದ್ರನಾಥ್, ಜಿಲ್ಲಾ ಅಧ್ಯಕ್ಷ ಎಸ್. ಎಂ. ವೀರೇಶ್ ಹನಗವಾಡಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ರ್ಯಾಲಿಯೂ ಜಂಬೂ ಬಜಾರ್, ಎಪಿಎಂಸಿ, ಹಳೆ ಪಿಬಿ ರಸ್ತೆ, ಗಾಂಧಿ ವೃತ್ತ, ಎವಿಕೆ ರಸ್ತೆ, ಗುಂಡಿ ವೃತ್ತ, ವಿದ್ಯಾನಗರ, ಬಿಐಇಟಿ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಸಮಾವೇಶ ನಡೆಯುವ ಸ್ಥಳದಲ್ಲಿ ಮುಕ್ತವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಯಲ್ಲೇಶ್, ಕಿರಣ್, ತಿಲಕ್, ಚಂದ್ರಶೇಖರ್, ವಿಜಯ್ ಸಾವಂತ್, ರಾಕೇಶ್ ಇತರರು ಸುದ್ದಿಗೋಷ್ಠಿ ಯಲ್ಲಿದ್ದರು.