ಪ್ರಮೋದ್ ಮುತಾಲಿಕ್ ಗೆ ಬೆದರಿಕೆ ಹಾಕಿದ ಎಸ್ ಡಿ ಪಿ ಐ ಸಂಘಟನೆ ವ್ಯಕ್ತಿಯನ್ನು ಬಂಧಿಸುವಂತೆ ಶ್ರೀ ರಾಮಸೇನೆಯಿಂದ ಮನವಿ

ದಾವಣಗೆರೆ: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಹಾಗೂ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿರುವ ಎಸ್ಡಿಪಿಐ ಸಂಘಟನೆಯ ಸಹ ಕಾರ್ಯದರ್ಶಿ ಸೈಯದ್ ಅಷ್ಪಕ್ ರನ್ನು ಬಂಧಿಸುವಂತೆ ಶ್ರೀರಾಮಸೇನೆಯಿಂದ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮಸೇನೆಯ ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ್ ನಡುಮನಿ, ತ್ರಿಪುರ ರಾಜ್ಯದಲ್ಲಿ ಕೆಲವು ದುಷ್ಕರ್ಮಿಗಳು ಮಸೀದಿ ಧ್ವಂಸ ಮಾಡಿದ್ದು, ಈ ಬಗ್ಗೆ ಇಲ್ಲಿ ಎಸ್ಡಿಪಿಐ ಸಂಘಟನೆ ನಡೆಸಿದ ಪ್ರತಿಭಟನೆ ವೇಳೆ, ಸಂಘಟನೆಯ ಸಹ ಕಾರ್ಯದರ್ಶಿ ಎಸ್.ಎಂ.ಆರ್. ಸೈಯದ್ ಅಷ್ಪಕ್ ಅವರು ಪ್ರಮೋದ್ ಮುತಾಲಿಕ್ ಅವರಿಗೆ ಕೊಲೆ ಬೆದರಿಕೆ ಹಾಕಿರುವುದಷ್ಟೇ ಅಲ್ಲದೇ, ಹಿಂದೂ ಧರ್ಮದ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಪಕ್ ತನ್ನ ತಾಕತ್ತು ನಮಗೆ ತೋರಿಸಲಿ, ನಮ್ಮ ತಾಕತ್ತೇನೆಂದು ಅವನಿಗೆ ನಾವು ತೋರಿಸುತ್ತೇವೆ. ಅದರ ಬದಲಿಗೆ ಹೀಗೆ ಧರ್ಮಗಳ ನಡುವೆ ಕೋಮುಗಲಭೆ ಹಚ್ಚುವ ಕೆಲಸ ಮಾಡಬೇಡ ಎಂದು ಎಚ್ಚರಿಕೆ ನೀಡಿದ ಅವರು, ಕೂಡಲೇ ಆತ ಹಿಂದೂ ಸಮಾಜಕ್ಕೆ ಕ್ಷಮೆ ಕೇಳಬೇಕು. ಇಲ್ಲವಾದರೆ ನಾಳೆಯಿಂದ ರಾಜ್ಯಾದ್ಯಂತ ಎಲ್ಲಾ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿ, ಬೇರೆ ತರಹದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀರಾಮಸೇನೆಯಯ ಪದಾಧಿಕಾರಿಗಳಾದ ಆಲೂರು ರಾಜಶೇಖರ್, ಸಾಗರ್, ಬಿ.ಜಿ. ರಾಹುಲ್, ವಿನೋದ್ ರಾಜ್ ಮತ್ತಿತರರು ಹಾಜರಿದ್ದರು.