ಲಾಕ್ಡೌನ್ ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಿದ ಕಟ್ಟಡ ಕಾರ್ಮಿಕ ವರ್ಗಕ್ಕೆ ಹಣ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ: ಲಾಕ್ಡೌನ್ ಪರಿಹಾರಧನಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಕಟ್ಟಡಕಾರ್ಮಿಕರಿಗೂ ಕೂಡಲೇ ಹಣ ಪಾವತಿಯಾಗಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಶುಕ್ರವಾರ ನಗರದ ಕಾರ್ಮಿಕ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ವೈದ್ಯಕೀಯ ಸಹಾಯಧನ ಹೆಚ್ಚಿಸಿ ಬಾಕಿ ಇರುವ ವೈಧ್ಯಕೀಯ ಅರ್ಜಿಗಳು ಇತ್ಯರ್ಥವಾಗಬೇಕು, ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್, ಬೂಸ್ಟರ್ ಕಿಟ್ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ತನಿಖೆಗೆ ಒಳಪಡಿಸಬೇಕು, ಮದುವೆ ಸಹಾಯಧನ ವಿಳಂಬ ಮತ್ತು ಬಾಂಡ್ ವಿತರಣೆ ಸರಿಪಡಿಸಬೇಕು ಎಂಬುದು ಸೇರಿದಂತೆ ಪ್ರತಿಭಟನಾಕಾರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ದೇಶದ ಕಟ್ಟಡ ನಿರ್ಮಾಣ ವಲಯವು ೨೦೧೬ ನವೆಂಬರ್ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ನೋಟು ಅಮಾನ್ಯೀಕರಣ ಬಳಿಕ ಜಾರಿ ಮಾಡಲಾದ ಸರಕು ಸೇವಾ ತೆರಿಗೆ ನೀತಿಯಿಂದಾಗಿ ತೀವ್ರ ಬಿಕ್ಕಟ್ಟಿಗೆ ಸಿಲುಕಿದ್ದು, ನಂತರದ ಕೋವಿಡ್ ಸಂಕಷ್ಟದಿಂದ ಈ ಕ್ಷೇತ್ರ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ ಎಂದು ಸಿ.ಐ.ಟಿ.ಯು. ಜಿಲ್ಲಾ ಸಂಚಾಲಕ ಕೆ.ಹೆಚ್. ಆನಂದರಾಜು ವಿಷಾದಿಸಿದರು.
ಡಿಸೇಲ್ ಹಾಗೂ ಪೆಟ್ರೋಲಿಯಂ ತೈಲ ಬೆಲೆಗಳು ನಿರ್ಮಾಣ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಲಕ್ಷಾಂತರ ಉದ್ಯೋಗಗಳ ನಾಶಕ್ಕೆ ಕಾರಣವಾಗುತ್ತಿದೆ. ನಮ್ಮ ದೇಶದಲ್ಲಿ ಕೃಷಿಕ್ಷೇತ್ರದ ಬಳಿಕ ಅತಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಿರುವ ನಿರ್ಮಾಣ ವಲಯದಲ್ಲಿ ಸುಮಾರು ೧೦ ಕೋಟಿ ಜನರು ಕೆಲಸ ಮಾಡುತ್ತಿದ್ದಾರೆ. ಇವರು ಕರೋನಾ ಲಾಕ್ಡೌನ್ನಲ್ಲಿ ಅತಿ ಹೆಚ್ಚು ತೊಂದರೆಗೊಳಪಟ್ಟ ಶ್ರಮಜೀವಿಗಳು. ಕರೊನ್ನೋತ್ತರ ಕಾಲಘಟ್ಟದಲ್ಲೂ ಅವರ ಸಂಕಷ್ಟಗಳು ದೂರವಾಗಿಲ್ಲ. ಆದ್ದರಿಂದ, ಸರ್ಕಾರ ಕಟ್ಟಡ ಕಾರ್ಮಿಕರ ಸಹಾಯಕ್ಕೆ ಧಾವಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನ ಜಿಲ್ಲಾ ಅಧ್ಯಕ್ಷರಾದ ಹೊನ್ನೂರು ತಿಮ್ಮಣ್ಣ, ಕಾರ್ಯದರ್ಶಿ ಎ. ಗುಡ್ಡಪ್ಪ, ಭರಮಪ್ಪ, ಹರಪನಹಳ್ಳಿ ಶಬ್ಬೀರ್, ಕುಂಚೂರು ರೆಹಮತ್, ಹಲವಾಗಲು ಮಲ್ಲಿಕಾರ್ಜುನ್, ಮಂಜುನಾಥ, ರಮೇಶ್ ಮತ್ತು ಇತರರು ಪಾಲ್ಗೊಂಡಿದ್ದರು.