ಸಂಕಲ್ಪ ಫೌಂಡೇಶನ್ ವತಿಯಿಂದ ಡಿ.5 ರಂದು ಪುನೀತ್ ಗಾನ ನಮನ

ದಾವಣಗೆರೆ: ಸಂಕಲ್ಪ ಸೇವಾ ಫೌಂಡೇಶನ್ ವತಿಯಿಂದ ಡಿ.೫ ರಂದು ಸಂಜೆ ೫ ಗಂಟೆಗೆ ನಗರದ ಶಿವಯೋಗಿ ಮಂದಿರದಲ್ಲಿ ಪುನೀತ್ ಗಾನ ನಮನ ಹಾಗೂ ವಿವಿಧ ಸಾಮಾಜಿಕ ಸೇವಾಕಾರ್ಯಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್ನ ಅನೀಲ್ ರಾಯ್ಕರ್ ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಿರಕ್ತಮಠದ ಬಸವಪ್ರಭು ಶ್ರೀಗಳು ವಹಿಸಲಿದ್ದು, ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಸೇರಿದಂತೆ ಪಾಲಿಕೆಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ದಾವಣಗೆರೆಯ ಹೆಸರಾಂತ ವೈದ್ಯ, ಬಡವರ ಡಾಕ್ಟರ್ ಎಂದೇ ಖ್ಯಾತಿ ಪಡೆದಿರುವ ಡಾ|| ಎಸ್.ಎಂ ಎಲಿ ಅವರಿಗೆ ಸಂಕಲ್ಪ ವೈದ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮತ್ತು ೧೦೦೦ ಜನರಿಂದ (ಮರಣಾನಂತರ) ನೇತ್ರದಾನ ಪ್ರಮಾಣ ನೋಂದಣಿ ಮಾಡಿಸಲಾಗುವುದು ಎಂದು ತಿಳಿಸಿದರು.
ದಾವಣಗೆರೆ ನಗರದಾದ್ಯಂತ ಸುಮಾರು ೧೦೦ ಉಚಿತ ಯೋಗ ಕೇಂದ್ರಗಳ ಸ್ಥಾಪನೆ, ಬಡಮಹಿಳೆಯರಿಗಾಗಿ ೩ ತಿಂಗಳ ಉಚಿತ ಟೈಲರಿಂಗ್ ತರಬೇತಿ ಶಿಬಿರ ಹಾಗೂ ಉದ್ಯೋಗ ಖಾತರಿ, ೩ ತಿಂಗಳ ಮೆಹಂದಿ ಡಿಸೈನಿಂಗ್ ಮತ್ತು ಬ್ಯೂಟಿಷಿಯನ್ ಕೋರ್ಸ್ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ಕನ್ನಡ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಉಚಿತ ಇಂಗ್ಲೀಷ್ ಕಲಿಕಾ ತರಬೇತಿ ಶಿಬಿರ ಏರ್ಪಡಿಸಲಾಗಿದೆ ಎಂದು ಹೇಳಿದ ಅವರು, ಹೆಚ್ಚಿನ ಮಾಹಿತಿಗಾಗಿ ಮೊ: ೯೮೪೫೬೮೫೨೨೪,೯೮೪೪೪೪೩೧೧೯ ಸಂಪರ್ಕಿಸಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾಂತೇಶ್, ಡಾ. ಮಲ್ಲಿಕಾರ್ಜುನ, ಡಾ. ಮಂಜುನಾಥ್, ಜಯಣ್ಣ ಬಾದಾಮಿ, ಬಕ್ಕಣ್ಣ ಇದ್ದರು.