ಪ್ರಚಾರ ತೊರೆದು ವಿಚಾರ ಹಂಚುತ್ತಿರುವ ಪ್ರಜಾಕಾರ್ಮಿಕ! ನಿಮ್ಮ ಮತ ಪ್ರಚಾರಕ್ಕೋ ವಿಚಾರಕ್ಕೋ ?

ವಿದ್ಯಾನಾಯ್ಕ್ ಅರೇಹಳ್ಳಿ
ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆ ಉಪಚುನಾವಣೆ ಇನ್ನೇನು ಕೇವಲ 4 ದಿನಗಳು ಉಳಿದಿರುವ ಹೊತ್ತಲ್ಲಿ ರಾಜಕೀಯ ಪಕ್ಷಗಳು ರೋಡ್ ಷೋ, ಪೋಸ್ಟರ್, ಬ್ಯಾನರ್ ತಂತ್ರ ಹೆಣೆದು ಮತದಾರರ ಓಲೈಕೆ ಪ್ರಯತ್ನಿಸುತ್ತಿದ್ದರೆ, ಉತ್ತಮ ಪ್ರಜಾಕೀಯ ಪಕ್ಷದಿಂದ ಪ್ರಜಾಕಾರ್ಮಿಕನಾಗಿ ಕೆಲಸ ಬಯಸುತ್ತಿರುವ ಅಭ್ಯರ್ಥಿ ಪ್ರಚಾರ ತೊರೆದು ವಿಚಾರ ಹಂಚುತ್ತಿದ್ದಾರೆ. ಮಹಾನಗರ ಪಾಲಿಕೆಯ 28ನೇ ವಾರ್ಡಿನಿಂದ ಸ್ಪರ್ಧೆ ನಡೆಸುತ್ತಿರುವ ಚಂದ್ರಶೇಖರ್ ಬಿ. ತಮ್ಮ ವಾರ್ಡಿನ ಜನತೆಗೆ ಯಾವುದೇ ರೀತಿಯ ಸುಳ್ಳು ಆಶ್ವಾಸನೆ, ಭರವಸೆಗಳನ್ನು ನೀಡದೆ ತಾನು ಪ್ರಜಾಕಾರ್ಮಿಕನಾದರೆ ನಿಮ್ಮ ಸಂಪರ್ಕದಲ್ಲಿದ್ದು ಹೇಗೆ ಕೆಲಸ ಮಾಡುತ್ತೇನೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ರಾಜಕೀಯಕ್ಕಿಂತ ಪ್ರಜಾಕೀಯ ವಿಭಿನ್ನ ಎನಿಸುತ್ತಿರುವುದು ಇದೇ ಕಾರಣಕ್ಕೆ.
ಹೌದು ಪ್ರಜಾಕೀಯದಲ್ಲಿ ಪೋಸ್ಟರ್, ಬ್ಯಾನರ್, ಸುಳ್ಳು ಆಶ್ವಾಸನೆ, ಭರವಸೆ, ಹಣ ವೆಚ್ಚ ಮಾಡಿ ಹಣ ಮಾಡುವ ಯಾವುದೇ ದುರಾಲೋಚನೆ, ಹಣ, ಹೆಂಡ, ಸೀರೆ ಹಂಚುವ ಪದ್ದತಿಗಳಿಲ್ಲ.. ಇಲ್ಲಿ ಜನರ ತೆರಿಗೆ ಹಣವನ್ನು ಜನರಿಗೆ ಹೇಗೆ ತಲುಪಿಸುತ್ತೇವೆ, ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತೇವೆ, ಸರ್ಕಾರದ ಆಡಳಿತದಲ್ಲಿ ಜನರನ್ನು ಯಾವ ರೀತಿ ಪಾಲ್ಗೊಳ್ಳುವಂತೆ ಮಾಡುತ್ತೇವೆ ಎಂದು ತಿಳಿಸುವುದು ಸೇರಿದಂತೆ ಇನ್ನಿತರ ಅದ್ಭುತವಾದ ವಿಚಾರಗಳ ಪ್ರಚಾರವನ್ನು ಮಾಡುತ್ತಿದ್ದಾರೆ. ಪ್ರಜಾಕೀಯದಲ್ಲಿ ವಿಚಾರಗಳೇ ಮುಖ್ಯ.
ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಬಿ. 28ನೇ ವಾರ್ಡಿನ ಅಸಾಮಾನ್ಯ ಜನರಲ್ಲಿ ತಾನು ಪ್ರಜಾಕೀಯದ ಪ್ರಜಾ ಪ್ರತಿನಿಧಿಯ ಕಾರ್ಯವೈಖರಿ ವಿಧಾನದಂತೆ ಕಾರ್ಯ ನಿರ್ವಹಿಸುವುದಾಗಿ ಹೇಳುವುದರ ಜೊತೆ ಜೊತೆಗೆ ಮತದಾನದ ಮಹತ್ವ ವಿವರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಎಸ್ಓಪಿ ಮಾದರಿಯಲ್ಲಿ ಹೊಣೆಗಾರಿಕೆಯಿಂದ ಜವಾಬ್ದಾರಿ ಹೊತ್ತು ಪಾರದರ್ಶಕತೆಯಿಂದ ಕಾರ್ಮಿಕನಾಗಿ ಕೇವಲ ಸಂಬಳಕ್ಕೆ ಕೆಲಸ ಮಾಡುವುದಾಗಿ ಜನತೆಗೆ ತಿಳಿಯಪಡಿಸುತ್ತಿದ್ದಾರೆ.
ಪ್ರಜಾಪ್ರತಿನಿಧಿಯ ಕಾರ್ಯ ವೈಖರಿ ವಿಧಾನ :
28ನೇ ವಾರ್ಡಿನ ಅಸಾಮಾನ್ಯ ಪ್ರಜೆಗಳ ಜೊತೆ ಹಲವಾರು ವಿಧಾನಗಳೊಂದಿಗೆ ಸಂಪರ್ಕದಲ್ಲಿದ್ದು ಸರಳ ಮತ್ತು ಅಧಿಕೃತ ಪೋಲಿಂಗ್ / ವೋಟಿಂಗ್ ಮುಖಾಂತರ ಪ್ರಜೆಗಳನ್ನು ಆಡಳಿತದಲ್ಲಿ ತೊಡಗಿಸಿಕೊಳ್ಳುತ್ತೇನೆ. ಜನರೊಂದಿಗೆ ನಿರಂತರ ಸಂಪರ್ಕ, ಕ್ಷೇತ್ರಕ್ಕೆ ಮಂಜೂರಾದ ಅನುದಾನವನ್ನು ಪಾರದರ್ಶಕವಾಗಿ ತಿಳಿಸುತ್ತೇನೆ ಮತ್ತು ನಿಮ್ಮ ಎಲ್ಲಾ ಬೇಡಿಕೆಗಳನ್ನು ಪಟ್ಟಿ ಮಾಡಿಕೊಳ್ಳುತ್ತೇನೆ. ನಿಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹಲವು ಯೋಜನೆಗಳನ್ನು ತಜ್ಞರೊಂದಿಗೆ ಚರ್ಚಿಸಿ- ರೂಪಿಸಿ ಕಾರ್ಯ ರೂಪಕ್ಕೆ ತರುತ್ತೇನೆ, ಎಲ್ಲ ಕೆಲಸಗಳ ಅಧಿಕೃತ ಹಾಗೂ ದೃಶ್ಯ ದಾಖಲೆಗಳ ವಿವರಗಳನ್ನು ನಿಮ್ಮ ಮುಂದೆ ಇಡುತ್ತೇನೆ, ಆರು ತಿಂಗಳಿಗೊಮ್ಮೆ ನಾನು ಮತ್ತು ಪಕ್ಷ ನಡೆಸುವ ಸರಳ ಪೋಲಿಂಗ್ / ವೋಟಿಂಗ್ನಲ್ಲಿ ನಿಮ್ಮ ತೀರ್ಮಾನದಂತೆ ಕೆಲಸದಲ್ಲಿ ಮುಂದುವರೆಯುತ್ತೇನೆ, ತಿದ್ದಿಕೊಳ್ಳುತ್ತೇನೆ, ರಾಜೀನಾಮೆ ನೀಡುತ್ತೇನೆ, ಅಷ್ಟೇ ಅಲ್ಲದೇ ನನ್ನ ಅವಧಿಯಲ್ಲಿ ಎಲ್ಲಾ ವಿಷಯಗಳಲ್ಲೂ ತೀರ್ಮಾನ ನಿಮ್ಮದೇ… ಹೀಗೆ ಪ್ರತಿಯೊಂದು ಕೆಲಸವನ್ನು ನಿಮ್ಮ ಅಭಿಪ್ರಾಯದಂತೆ ಮಾಡುತ್ತೇನೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ತತ್ವ ಸಿದ್ದಾಂತಗಳನ್ನು ವಿವರಿಸುತ್ತ ವಿಚಾರಗಳಿಗೆ ಮತ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.
ವಯಕ್ತಿಕ ಮಾಹಿತಿ ಬ್ಯಾಲೆಟ್ನಲ್ಲಿ:
ಚಂದ್ರಶೇಖರ ಅವರು ಉತ್ತಮ ಪ್ರಜಾಕೀಯ ಪಕ್ಷದ ತತ್ವಸಿದ್ದಾಂತಗಳಿರುವ ಮಾಹಿತಿಯನ್ನು ಬ್ಯಾಲೆಟ್ ಪೇಪರ್ನಲ್ಲಿ ಮುದ್ರಿಸಿರುವ ಜೊತೆಗೆ ತಮ್ಮ ಮೊಬೈಲ್ ನಂಬರ್ ಹಾಗೂ ವೈಯಕ್ತಿಕ ಮಾಹಿತಿಯನ್ನು ಮುದ್ರಿಸಿದ್ದಾರೆ. ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ ವಿಚಾರ ಮುಖ್ಯ. ಪ್ರಸ್ತುತ ಅವ್ಯವಸ್ಥೆಯ ಬದಲಾವಣೆ ಉದ್ದೇಶದಿಂದ ಪ್ರಜಾಕೀಯ ಪಕ್ಷದಿಂದ ಸ್ಪರ್ಧೆಸುತ್ತಿದ್ದು ವ್ಯವಸ್ಥೆ ಬದಲಾವಣೆಗಾಗಿ ವಿಚಾರಕ್ಕೆ ಮತ ನೀಡುವಂತೆ ಮನವಿ ಮಾಡಿದ್ದಾರೆ.