ರೈಲಿನಿಂದ ಬಿದ್ದ ವೃದ್ದೆ ಜೀವ ರಕ್ಷಿಸಿದ ರೈಲ್ವೆ ಸಿಬ್ಬಂದಿ

ದಾವಣಗೆರೆ: ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದ ವೃದ್ದೆಯನ್ನು ರೈಲ್ವೆ ಪೊಲೀಸ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮೈಸೂರಿನಿಂದ ಬೆಳಗಾವಿಗೆ ಹೊರಟಿದ್ದ ವಿಶ್ವಮಾನವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಆಕಸ್ಮಿಕವಾಗಿ ರೈಲಿನಿಂದ ಬಿದ್ದಿದ್ದಾರೆ. ಪ್ಲಾಟ್ಫಾರ್ಮ್ನಲ್ಲಿ ಡ್ಯೂಟಿಯಲ್ಲಿದ್ದ ಪೊಲೀಸರ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ವೃದ್ದೆಯ ಜೀವ ರಕ್ಷಣೆಯಾಗಿದೆ.
Watch Video..
ವಿಶ್ವ ಮಾನವ ರೈಲಿನಲ್ಲಿ ಮೈಸೂರಿನಿಂದ ಬೆಳಗಾವಿ ಕಡೆಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ವೃದ್ದೆ ಬಿದ್ದ ಸಮಯಕ್ಕೆ ಅಲ್ಲೇ ಇದ್ದ ರೈಲ್ವೆ ಪೊಲೀಸ್ ಸಿಬ್ಬಂದಿಗಳಾದ ಚೇತನ್ ಟಿ.ಆರ್ ಮತ್ತು ಹಾಲೇಶ್ ಬಿ.ಎನ್ ಅವರ ಸಮಯ ಪ್ರಜ್ಞೆಯಿಂದ ವೃದ್ದೆಯ ಜೀವ ಉಳಿದಿದೆ. ವೃದ್ಧೆಯನ್ನು ರಕ್ಷಿಸಿದ ಸಿಬ್ಬಂದಿಗಳಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಈ ಹಿಂದೆ ಇಂತಹ ಹಲವು ಘಟನೆಗಳು ನಡೆದಿವೆ. ಹಲವು ಬಾರಿ ರೈಲ್ವೆ ಸಿಬ್ಬಂದಿಗಳು ಹಲವಾರು ಪ್ರಯಾಣಿಕರ ಜೀವ ರಕ್ಷಣೆ ಮಾಡಿದ್ದು ಶ್ಲಾಘನೀಯವೇ ಸರಿ. ಇದು ಇವರ ಕರ್ತವ್ಯ ಪ್ರಜ್ಞೆಗೆ ಹಿಡಿದ ಕೈಗನ್ನಡಿಯೇ ಸರಿ.