ರೇಣುಕಾಚಾರ್ಯ ಸೇರಿದಂತೆ ಮೂವರಿಗೆ ಪ್ರಾಣ ಬೆದರಿಕೆ! ಬೆಂಗಳೂರಿನಲ್ಲಿ ದೂರು ದಾಖಲು

mp renukacharya

ದಾವಣಗೆರೆ : ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಮೂವರ ಮೇಲೆ ಪ್ರಾಣ ಬೆದರಿಕೆ ಇರುವ ಕುರಿತು ಸ್ವತಃ ಎಂ.ಪಿ. ರೇಣುಕಾಚಾರ್ಯ ಅವರೇ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೇವಲ ಎಂ.ಪಿ. ರೇಣುಕಾಚಾರ್ಯ ಅವರು ಮಾತ್ರವಲ್ಲದೆ ಪಕ್ಷದ ವಿಧಾನ ಸಭಾ ಸದಸ್ಯರಾದ ಸಿ.ಟಿ ರವಿ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ರೇಣುಕಾಚಾರ್ಯ ನೀಡಿದ ದೂರಿನಲ್ಲಿ ಏನಿದೆ?

ಈ ದಿನ ನನಗೆ ಬೆಳಿಗ್ಗೆ ಸುಮಾರು 10:04 ನಿಮಿಷದಿಂದ ಸುಮಾರು 10:33 ನಿಮಿಷದವರೆಗೆ ಸುಮಾರು 07 ಫೋನ್ ಕರೆಗಳು ಬಂದಿದ್ದು, ಕರೆಗಳನ್ನು ನಾನು ಸ್ವೀಕರಿಸಿರುವುದಿಲ್ಲ. ಮಧ್ಯಾಹ್ನ ಸುಮಾರು 03-30 ಗಂಟೆಗೆ ನಾನು ಮನೆಯಿಂದ ಹೊರಟು ನನ್ನ ಮತ ಕ್ಷೇತ್ರ ಹೊನ್ನಾಳಿಗೆ ಹೋಗಬೇಕೆಂದು ಹೊರಟು ಈ ಹಿಂದೆ ನಾನು ಬಟ್ಟೆಯನ್ನು ಹೊಲಿಸಿದ್ದ ಡಾಲರ್ಸ್ ಕಾಲೋನಿಯ 14ನೇ ಕ್ರಾಸ್, ಬ್ಯಾಂಕ್ ಟೈಲರ್ಸ್ನ ಭರತ್ ಎಂಬುವರ ಟ್ರೆಲರ್ ಅಂಗಡಿಗೆ ಬಟ್ಟೆಯನ್ನು ಪಡೆದುಕೊಳ್ಳಲು ಅಲ್ಲಿಗೆ ಹೋದಾಗ ಪುನಃ ಸುಮಾರು ಸಂಜೆ 04-15 ನಿಮಿಷಕ್ಕೆ 3444 ನಂಬರ್‌ನಿ0ದ ಕರೆ ಬಂದಿದ್ದು, ಬೆಳಿಗ್ಗೆಯಿಂದಲೂ ಈ ನಂಬರ್‌ನಿ0ದ ಯಾರೂ ಫೋನ್ ಮಾಡುತ್ತಿದ್ದಾರೆ.
ಮಾತನಾಡೋಣವೆಂದುಕೊ0ಡು ಕರೆಯನ್ನು ಸ್ವೀಕರಿಸಿದನು.

ಆ ಕಡೆಯಿಂದ ಕರೆ ಮಾಡಿದ ಅನಾಮಧೇಯ ವ್ಯಕ್ತಿ ಇದ್ದಕ್ಕಿದ್ದಂತೆ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸತೊಡಗಿದನು. ನಾನು ಸಮಾಧಾನದಿಂದಲೇ ಏನಪ್ಪ ನಿಮ್ಮ ಸಮಸ್ಯೆ, ಏನು, ಯಾಕೇ, ಹೀಗೆ ಮಾತನಾಡುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಅನಾಮಧೇಯ ವ್ಯಕ್ತಿ “ಹಿಜಾಬ್ ಬಗ್ಗೆ ಹಲಾಲ್ ಬಗ್ಗೆ ಮತ್ತು ಮದರಸಾಗಳ ಬಗ್ಗೆ ಏನೇನೋ ಮಾತನಾಡುತ್ತೀಯಾ, ನಮ್ಮ ಪಕ್ಷದ ವಿಧಾನಸಭಾ ಸದಸ್ಯರಾದ ಸಿ.ಟಿ ರವಿ, ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಹ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಾ ಮುಖ್ಯಮಂತ್ರಿಯವರು ಏನು ಮಾಡುತ್ತಿದ್ದಾರೆ,? ನೀನು ಹಿಂದುಗಳ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರಿಗೆ ಹಣವನ್ನು ಕೊಡುತ್ತೀಯೇನೋ? ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಾಗ ನಿಮ್ಮ ಮುಖ್ಯಮಂತ್ರಿಗಳು 25 ಲಕ್ಷ ಹಣವನ್ನು ಕೊಟ್ಟಿದ್ದಾರೆ. ಆದರೆ ಮುಸ್ಲಿಂಮರು ಕೊಲೆಯಾದರೆ ಹಣವನ್ನು ಕೊಡುತ್ತಾರಾ? ನಿಮ್ಮದು ಡಬಲ್ ಇಂಜಿನ್ ಸರ್ಕಾರ, ಎಂಬಾತ್ಯಾದಿಯಾಗಿ ಬಿ.ಜೆ.ಪಿ ಸರ್ಕಾರವನ್ನು ನಿಂದಿಸಿ, ಹಿಜಾಬ್, ಹಲಾಲ್ ಮತ್ತು ಮದರಸಾ ವಿಚಾರವಾಗಿ ನೀನು ಮತ್ತೊಮ್ಮೆ ಮಾತನಾಡಿದರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ನಿನ್ನನ್ನು 4-5 ದಿನಗಳಲ್ಲಿ ಕೊಚ್ಚಿ ಹಾಕುತ್ತೇನೆಂದು 2-3 ಬಾರಿ ಪ್ರಾಣಬೆದರಿಕೆ ಹಾಕಿರುತ್ತಾನೆ.

ಅನಾಮಧೇಯ ವ್ಯಕ್ತಿಯು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದಾಗ ನಾನು ನನ್ನ ಮೊಬೈಲ್‌ನಲ್ಲಿ ಲೌಡ್ ಸ್ಪೀಕರ್ ಆನ್ ಮಾಡಿದ್ದು, ನನ್ನ ಜೊತೆ ಇದ್ದ ಕಾರ್ಯಕರ್ತ ಮಿಥುನ್ ಚಕ್ರವರ್ತಿ ಅವರ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡರು. ಆ ಸಮಯದಲ್ಲಿ ಇತರೆ ಕಾರ್ಯಕರ್ತರಾದ ವಿರೇಶ್ ಮತ್ತು ಚೇತನ್‌ರವರುಗಳು ಇದ್ದು, ಅಪರಿಚಿತ ವ್ಯಕ್ತಿ ಮಾತನಾಡಿದ ಸಂಭಾಷಣೆಯನ್ನು ಕೇಳಿಸಿಕೊಂಡಿರುತ್ತಾರೆ. ನನಗೆ ಕರೆ ಮಾಡಿದ ವ್ಯಕ್ತಿಯು ಕರಾವಳಿ ಕಡೆಯವರು ಮಾತನಾಡುವ ಶೈಲಿಯಲ್ಲಿ ಮಾತನಾಡುತ್ತಿದ್ದನು. ನಂತರ ನಾನು ನೇರವಾಗಿ ನನ್ನ ವಾಹನದಲ್ಲಿ ಸದಾಶಿವನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ.

ಆದ್ದರಿಂದ ನಾನು ಸಾರ್ವಜನಿಕವಾಗಿ ಯಾವುದೇ ದುರುದ್ದೇಶವಿಲ್ಲದೇ ನೀಡಿರುವ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡು ಯಾರೋ ಅನಾಮಧೇಯ ಅಪರಿಚಿತ ವ್ಯಕ್ತಿಯು ನನಗೆ ಹಾಗೂ ನಮ್ಮ ಪಕ್ಷದ ಸಿ.ಟಿ ರವಿ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್‌ರವರನ್ನು ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮೊಬೈಲ್ ಫೋನ್ ಮುಖಾಂತರ ಪ್ರಾಣ ಬೆದರಿಕೆ ಹಾಕಿರುವ ಅಪರಿಚಿತ ಅನಾಮದೇಯ ವ್ಯಕ್ತಿಯ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಬೇಕೆಂದು ನನಗೂ ಹಾಗೂ ನನ್ನ ಕುಟುಂಬದವರಿಗೂ ರಕ್ಷಣೆ ನೀಡಬೇಕೆಂದು ತಮ್ಮಲ್ಲಿ ದೂರು ನೀಡುತ್ತಿದ್ದೇನೆ ಎಂದು ದೂರಿನಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!