Sand: ಐಜಿ ಸಾಹೇಬರಿಂದ ಮಧ್ಯರಾತ್ರಿ ಫೋನ್! ಹರಿಹರದಲ್ಲಿ 15 ಲೋಡ್ ಮರಳು ಸೀಜ್, ಪೊಲೀಸರಿಗೆ ಸಂಕಷ್ಟ!

Sand_ Midnight call from IG Saheb! 15 loads of sand seized in Harihar

ದಾವಣಗೆರೆ: (Sand) ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ರವಿಕಾಂತೇಗೌಡರಿಗೆ ಗುಪ್ತ ಮಾಹಿತಿ ಬಂದಿದ್ದು, ಸೋಮವಾರ ರಾತ್ರಿ ವೇಳೆ  ಹರಿಹರ ಗ್ರಾಮಾಂತರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್ ಅವರಿಗೆ ಪೋನ್ ಮಾಡಿ ತಿಳಿಸಿದ ನಂತರ ಬೀಟ್ ನಲ್ಲಿ ಇದ್ದ ಪಿ ಎಸ್ ಐ ಹಾಗೂ ಸಿಬ್ಬಂದಿಯವರು ಅಕ್ರಮವಾಗಿ ಮರಳು ಸಂಗ್ರಹಿಸಿದ್ದ ಜಮೀನಿಗೆ ತೆರಳಿ ರೇಡ್ ನಡೆಸಿದ್ದು, 15 ಟಿಪ್ಪರ್ ಲೋಡ್ ಮರಳನ್ನು ಸೀಜ್ ಮಾಡಿ ಜಮೀನಿಗೆ ಸಂಬಂಧಿಸಿದ ಮಹಾಂತೇಶಪ್ಪ ಎಂಬುವವರ ವಿರುದ್ದ ಎಫ್ ಐ ಆರ್ ದಾಖಲು ಮಾಡಲಾಗಿದೆ.

ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬಳಿಯಿರುವ 7C ಹೋಟೆಲ್ ಹಿಂಬದಿಯಲ್ಲಿ ಮರಳನ್ನು ಅಕ್ರಮವಾಗಿ ಎಲ್ಲಿಂದಲೋ ಕಳ್ಳತನ ಮಾಡಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಶೇಖರಣೆ ಮಾಡಲಾಗಿತ್ತು ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಸಂಕ್ಷಿಪ್ತ ಸಾರಾಂಶ:- ದಿನಾಂಕ:- 14-10-2025 ರಂದು ಬೆಳಿಗ್ಗೆ 01-30 ಗಂಟೆಗೆ ಪಿರ್ಯಾದಿ ಯುವರಾಜ ಕೆ,  ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ, “ನಾನು ಅಪರಾಧ ಪ್ರಕರಣವನ್ನು ತಡೆಯುವ ಸಲುವಾಗಿ ಠಾಣಾ ಸಿಬ್ಬಂದಿಗಳಾದ ಅರ್ಜುನ್ ರಾಯಲ್ ಮತ್ತು ಸತೀಶ್ ಟಿ.ವಿ ರವರೊಂದಿಗೆ ದಿನಾಂಕ:-13-10-2025 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ, ರಾತ್ರಿ ವಿಶೇಷ ಗಸ್ತಿಗೆ ಹೊರಟು, ನಾವುಗಳು ಹರ್ಲಾಪುರ, ಗುತ್ತೂರು, ದೀಟೂರು, ಸಾರಥಿ ಗ್ರಾಮಗಳಲ್ಲಿ, ಗಸ್ತು ಮಾಡುತ್ತಿರುವಾಗೆ, ದಿನಾಂಕ:- 13-10-2025
ರಂದು ರಾತ್ರಿ 11-40 ಗಂಟೆ ಸಮಯದಲ್ಲಿ, ಮಾನ್ಯ ಸಿಪಿಐ ಸಾಹೇಬರವರು ನನಗೆ ಫೋನ್ ಮಾಡಿ, ಹನಗವಾಡಿ ಗ್ರಾಮದ 7ಸಿ ಡಾಬಾ ಹಿಂಭಾಗದಲ್ಲಿ ಕೆ. ಮಹಾಂತೇಶಪ್ಪ ತಂದೆ ಲೇಟ್. ನಿಂಗಪ್ಪ, ಹನಗವಾಡಿ ಗ್ರಾಮ ಎಂಬುವವರು ಎಲ್ಲಿಂದಲೋ ಮರಳನ್ನು ಕಳ್ಳತನ ಮಾಡಿಕೊಂಡು ಅಕ್ರಮವಾಗಿ ಸಂಗ್ರಹಿಸುತ್ತಾರೆ ಅಂತಾ ಮಾನ್ಯ ಐಜಿಪಿ ಸಾಹೇಬರು, ಪೂರ್ವ ವಲಯ ದಾವಣಗೆರೆ ರವರಿಗೆ ಭಾತ್ಮೀದಾರರು ಮಾಹಿತಿಯನ್ನು ತಿಳಿಸಿರುತ್ತಾರೆ ಮುಂದಿನ
ಕ್ರಮ ಜರುಗಿಸುವಂತೆ ತಿಳಿಸಿದರು.

ಸಿಪಿಐ ಸಾಹೇಬರ ಮಾಹಿತಿ ಮೇರೆಗೆ ನಾವುಗಳು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಹನಗವಾಡಿ ಗ್ರಾಮದ ಸರ್ವೇ ನಂಬರ್ 12 ರ ಜಮೀನಿನಲ್ಲಿ ಅಂದಾಜು 15 ಟಿಪ್ಪರ್ ಲಾರಿಯಷ್ಟು ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಸಂಗ್ರಹಿಸಿರುವುದು ಕಂಡು ಬಂತು, ಕೆ. ಮಹಾಂತೇಶಪ್ಪ ಎಂಬುವರು ಎಲ್ಲಿಂದಲೋ ಮರಳನ್ನು ಕಳ್ಳತನ ಮಾಡಿಕೊಂಡು ಬಂದು ಸಂಗ್ರಹಿಸಿ, ಬೇರೆಯವರಿಗೆ ಹೆಚ್ಚಿನ ದರದಲ್ಲಿ ಮಾರುವ ಉದ್ದೇಶದಿಂದ ಮರಳನ್ನು ಸಂಗ್ರಹಿಸಿರುತ್ತಾನೆ.

ಆದ್ದರಿಂದ ಸದರಿ ಆಸಾಮಿಯ ಮೇಲೆ ಕಾನೂನು ಕ್ರಮ ಜರುಗಿಸಿ”
ಅಂತಾ ನೀಡಿದ ದೂರನ್ನು ಪಡೆದು ಠಾಣೆ ಗುನ್ನೆ ನಂ:-185 ಕಲಂ
303(2) ಬಿ.ಎನ್.ಎಸ್-2023 ರೀತಾ ಪ್ರಕರಣವನ್ನು ದಾಖಲಿಸಿರುತ್ತೇನೆ. ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಲಾಸ್ಟ್‌ ಪಂಚ್:– ಒಟ್ಟಾರೆ ದಾವಣಗೆರೆ ಐಜಿ ಸಾಹೇಬರು ನೀಡುವ ಗುಪ್ತ ಮಾಹಿತಿ ಪೋಲಿಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದಾರೆ. ಸ್ಥಳೀಯ ಠಾಣಾ ವ್ಯಾಪ್ತಿಯ ಗುಪ್ತಚರ ಸಿಬ್ಬಂದಿ ಬೀಟ್ ಸಿಬ್ಬಂದಿಗಳಿಗೆ ಇಲ್ಲದ ಮಾಹಿತಿ ಐಜಿ ಸಾಹೇಬರು ರಾತ್ರಿ ವೇಳೆಯಲ್ಲಿ ಠಾಣೆಯ ಇನ್ಸ್‌ಪೆಕ್ಟರ್ ಅವರಿಗೆ ಮಾಹಿತಿ ತಿಳಿಸುತ್ತಾರೆ ಎಂದರೆ ವ್ಯವಸ್ಥೆಯನ್ನು ಹದಗಡೆಸಿ ಇಟ್ಟಿರುವ ಸಾಧ್ಯತೆಯನ್ನು ಅಲ್ಲಗಳೆಯುವ ಆಗಿಲ್ಲ ಎಂಬುದು ತಿಳಿಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿನ ಸುದ್ದಿಗಳು

error: Content is protected !!