ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದು 2016 ರಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ: ಸಂಸದ ಸಿದ್ದೇಶ್ವರ ಅವರು ಸುಳ್ಳಿನ ಸರದಾರ: ದಾಖಲೆ ಸಹಿತ ಬಸವರಾಜು ವಿ ಶಿವಗಂಗಾ ತಿರುಗೇಟು

ಚನ್ನಗಿರಿ : ಸಾಸ್ವೇಹಳ್ಳಿ ಯೋಜನೆ ತಂದಿದ್ದು ನಾನು ಹಾಗೂ ಮಾಡಾಳು ವಿರೂಪಾಕ್ಷಪ್ಪ ಎಂದು ಹೇಳಿಕೆ ಸಂತೇಬೆನ್ನೂರಲ್ಲಿ ಹೇಳಿಕೆ ನೀಡಿರುವ ಸಂಸದ ಜಿ.ಎಂ ಸಿದ್ಧೇಶ್ವರ ಅವರ ವಿರುದ್ಧ ಶಾಸಕರಾದ ಬಸವರಾಜು ವಿ ಶಿವಗಂಗಾ ತಿರುಗೇಟು ನೀಡಿದ್ದಾರೆ. ಸಿದ್ದೇಶ್ವರ್ ಅವರು ಸುಳ್ಳಿನ ಸರದಾರ ಇಂಥ ಸುಳ್ಳುಗಳನ್ನ ಹೇಳಿಯೇ ನಾಲ್ಕು ಬಾರಿ ಗೆದ್ದಿರುವುದು. ಬಿಜೆಪಿ ಪಕ್ಷ ಎಂದರೆ ಅದು ಸುಳ್ಳಿನ ಪಕ್ಷವಾಗಿದ್ದು, ಜನರಿಗೆ ಸುಳ್ಳು ಹೇಳಿ ಇದುವರೆಗೂ ಅಧಿಕಾರಕ್ಕೆ ಬಂದಿರುವುದು ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ. ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಜಾರಿ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬರಲಿ, ದಾಖಲೆ ಸಹಿತ ನಾನು ಚರ್ಚೆ ಮಾಡುತ್ತೇನೆ ಎಂದು ಜಿ.ಎಂ.ಸಿದ್ದೇಶ್ವರ ಅವರಿಗೆ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೂ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಗೂ ಕಾಂಗ್ರೆಸ್ ಗೂ ಸಂಬಂಧವೇ ಇಲ್ಲ ಎಂದಿದ್ದಾರೆ.
2015-16 ನೇ ಸಾಲಿನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಆಯವ್ಯಯ ಭಾಷಣದಲ್ಲಿ ಸಂತೇಬೆನ್ನೂರು ಮತ್ತು ಕಸಬಾ ಹೋಬಳಿಗಳಲ್ಲಿ 2 ಹಂತದಲ್ಲಿ ಏತ ನೀರಾವರಿ ಯೋಜನೆ ಕೈಗೊಳ್ಳುವ ಬಗ್ಗೆ ಘೋಷಣೆ ಮಾಡಿದ್ದರು. ಅದರಂತೆ ನೀರಾವರಿ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ನಂತರ ವರದಿ ಅನುಸಾರ ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳ ( ಚನ್ನಗಿರಿ ಕಸಬಾ ಹೋಬಳಿ 46 ಕೆರೆಗಳು) ಒಟ್ಟು 121 ಕೆರೆಗಳಿಗೆ ನೀರೊದಗಿಸಲು ಯೋಜನೆ ಉದ್ದೇಶವಾಗಿತ್ತು.
ನಂತರ 23/06/2016 ರಂದು ನೀರಾವರಿ ಇಲಾಖೆಯಿಂದ ಈ ಯೋಜನಾ ವರದಿಯನ್ನ 15 ನೇ ಅಂದಾಜು ಪರಿಶೀಲನಾ ಸಮಿತಿ ಸಭೆಯಲ್ಲಿ ಮಂಡಿಸಲಾಗಿತ್ತು ಎಂದು ಶಾಸಕರಾದ ಬಸವರಾಜು ವಿ ಶಿವಗಂಗಾ ಮಾಹಿತಿ ನೀಡಿದರು. ನಂತರ 19/08/2016 ರಲ್ಲಿ ರೂ. 415.68 ಕೋಟಿಗಳ ಯೋಜನೆ ಅನುಮೋದನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ದಿನಾಂಕ:11/01/2017 ರಂದು ಸಾಸ್ವೇಹಳ್ಳಿ ಏತ ನೀರಾವರಿ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು ಈ ಯೋಜನೆ ಜಾರಿಗೆ ಬರಲು ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ ಸೇರಿದಂತೆ ಕಾಂಗ್ರೆಸ್ ಮುಖಂಡರ ಶ್ರಮ, ಹೋರಾಟ ಕೂಡ ಇದೆ ಎಂದು ಶಾಸಕರಾ ಬಸವರಾಜು ವಿ ಶಿವಗಂಗಾ ಸಂಸದರಾದ ಜಿ.ಎಂ. ಸಿದ್ದೇಶ್ವರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಪಕ್ಷದವರಿಗೆ ಚುನಾವಣೆ ವೇಳೆ ಸುಳ್ಳುಗಳನ್ನು ಸೃಷ್ಟಿ ಮಾಡುತ್ತಾರೆ ಎಂಬುದಕ್ಕೆ ಸಂಸದರು ಹೇಳಿದ ಸುಳ್ಳೇ ಸಾಕ್ಷಿ ಎಂದರು. ಬಿಜೆಪಿ ಎಂದರೆ ಸುಳ್ಳು ಎಂದೇ ಪ್ರಖ್ಯಾತಿ, ಇಂಥ ಸುಳ್ಳುಗಳನ್ನ ಜನರು ನಂಬುವುದಿಲ್ಲ, ಬಿಜೆಪಿಯವರು ಒಂದಾದರೂ ಸತ್ಯ ಹೇಳಿ ಮತ ಕೇಳಲಿ ಸುಳ್ಳು ಮಾಹಿತಿ ನೀಡಿ ಜನರನ್ನ ದಾರಿ ತಪ್ಪಿಸಬಾರದು ಎಂದಿದ್ದಾರೆ. ಸೋಲಿನ ಭಯದಿಂದ ಇಂಥ ಸುಳ್ಳುಗಳನ್ನ ಸಿದ್ದೇಶ್ವರ ಅವರು ಹೇಳುತ್ತಿದ್ದಾರೆ. ದಾವಣಗೆರೆ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ದಿನ ದಿನಕ್ಕೂ ಹೆಚ್ಚಾಗುತ್ತಿದ್ದು, ಬಿಜೆಪಿಗೆ ನಡುಕ ಉಂಟಾಗಿದ್ದು, ಸುಳ್ಳು ಹೇಳುತಿದ್ದಾರೆ, ಈ ಬಾರಿ ಕಾಂಗ್ರೆಸ್ ಗೆಲುವನ್ನು ಇಂಥ ಸುಳ್ಳು ಹೇಳಿ ತಪ್ಪಿಸಲು ಸಾಧ್ಯವಿಲ್ಲ ಎಂದು ಶಾಸಕರಾದ ಬಸವರಾಜು ವಿ ಶಿವಗಂಗಾ ಹೇಳಿದರು.